Mangaluru- ತಡರಾತ್ರಿ ಸಾರ್ವಜನಿಕ ಸ್ಥಳದಲ್ಲಿ ಮದ್ಯ ಸೇವನೆ ಮಾಡುತ್ತಿದ್ದವರಿಂದ ಪೊಲೀಸ್ ಮೇಲೆ ದಾಳಿ: ಮೂವರು ಅಂದರ್

ಮಂಗಳೂರು: ನಗರದ ಉರ್ವದ ಚಿಲಿಂಬಿಗುಡ್ಡೆ ಎಂಬಲ್ಲಿ ರವಿವಾರ ತಡರಾತ್ರಿ ವೇಳೆ ಸಾರ್ವಜನಿಕ ಸ್ಥಳದಲ್ಲಿ ಮದ್ಯ ಸೇವನೆ ಮಾಡುತ್ತಿದ್ದ ತಂಡವೊಂದು ಗಸ್ತು ಪೊಲೀಸರ ಮೇಲೆ ದಾಳಿ ನಡೆಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಉರ್ವ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ‌.

ಚಿಲಿಂಬಿಗುಡ್ಡೆ ನಿವಾಸಿ ದುರ್ಗೇಶ್, ಪ್ರಜೀತ್, ರಕ್ಷಿತ್ ಬಂಧಿತ ಆರೋಪಿಗಳು. ಬಂಧಿತರೆಲ್ಲರೂ ಶ್ರೀರಾಮಸೇನೆ ಸಂಘಟನೆಗೆ ಸೇರಿದ್ದವರೆಂದು ಪೊಲೀಸರು ತಿಳಿಸಿದ್ದಾರೆ. ದಾಳಿಯಲ್ಲಿ ಗಾಯಗೊಂಡಿರುವ ಪೊಲೀಸ್ ಸಿಬ್ಬಂದಿ ವೆಂಕಟೇಶ್ ಹಾಗೂ ಧನಂಜಯ್ ನಗರದ ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಉರ್ವ ಪೊಲೀಸ್ ಸಿಬ್ಬಂದಿಯಾದ ವೆಂಕಟೇಶ್ ಹಾಗೂ ಧನಂಜಯ್ ಉರ್ವ ಚಿಲಿಂಬಿ ಗುಡ್ಡೆಯಲ್ಲಿ ರವಿವಾರ ತಡರಾತ್ರಿ ಗಸ್ತು ಕರ್ತವ್ಯದಲ್ಲಿದ್ದರು. ಈ ವೇಳೆ 8ಮಂದಿ ಯುವಕರ ತಂಡವೊಂದು ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ ಮಾಡುತ್ತ ಹರಟೆಯಲ್ಲಿ ನಿರತವಾಗಿತ್ತು. ಅಲ್ಲಿಗೆ ಬಂದ ಪೊಲೀಸರು ವಿಚಾರಣೆ ನಡೆಸಿದ ಸಂದರ್ಭ ತಗಾದೆ ತೆಗೆದ ತಂಡ ಪೊಲೀಸರ ಮೇಲೆಯೇ ದಾಳಿ ನಡೆಸಿ ಹಲ್ಲೆ ಮಾಡಿದೆ. ಅಲ್ಲದೆ ಓರ್ವ ಆರೋಪಿ ಪೊಲೀಸ್ ಸಿಬ್ಬಂದಿ ಮೇಲೆ ಬೈಕ್ ಅನ್ನೇ ಹತ್ತಿಸಿದ್ದಾನೆ‌. ಬಳಿಕ ಆರೋಪಿಗಳೆಲ್ಲರೂ ಅಲ್ಲಿಂದ ಪರಾರಿಯಾಗಿದೆ. ಇದೀಗ ಘಟನೆಗೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ‌. ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಿದೆ.
BREAKING NEWS
Loading latest news...
Join our WhatsApp Channel Powered By : Online Pudu