
ಸುಳ್ಯ: ಮತ್ತೆ ಕಂಪಿಸಿದ ಭೂಮಿ, ಭೀತಿಗೊಂಡು ಮನೆಗಳಿಂದ ಹೊರ ಬಂದ ಜನತೆ
6/27/2022 09:57:00 PM
ಮಂಗಳೂರು: ಜೂ.25ರಂದು ದ.ಕ.ಜಿಲ್ಲೆಯ ಸುಳ್ಯ ಕೆಲ ಪ್ರದೇಶ ಹಾಗೂ ಕೊಡಗು ಗಡಿಭಾಗದಲ್ಲಿ ಭೂಕಂಪನದ ಅನುಭವವಾಗಿತ್ತು. ಇದೀಗ ಎರಡು ದಿನಗಳ ಬಳಿಕ ಇಂದು ಮತ್ತೆ ಸುಳ್ಯ ತಾಲೂಕಿನ ಜನತೆಗೆ ಭೂಮಿ ಕಂಪಿಸಿದ ಅನುಭವವಾಗಿದೆ.
ಸುಳ್ಯ, ಸಂಪಾಜೆ, ಗೂನಡ್ಕ, ಗುತ್ತಿಗಾರು ಸೇರಿದಂತೆ ವಿವಿಧ ಕಡೆಗಳಲ್ಲಿ ಇಂದು ಬೆಳಗ್ಗೆ 7.44 - 7.45 ರ ಕಾಲಾವಧಿಯಲ್ಲಿ ಭೂಮಿ ಲಘುವಾಗಿ ಕಂಪಿಸಿದೆ. ವಿಚಿತ್ರವಾದ ಭಾರೀ ಶಬ್ದದೊಂದಿಗೆ ಕಂಪನದ ಅನುಭವವಾಗಿದೆ. ಪರಿಣಾಮ ಜನರು ಆತಂಕಿತರಾಗಿ ಮನೆಯಿಂದ ಹೊರಗೋಡಿ ಬಂದಿದ್ದಾರೆ. ಭೂಕಂಪನದ ಸಂದರ್ಭದಲ್ಲಿ ಪಾತ್ರೆಗಳು, ಪೀಠೋಪಕರಣಗಳು ಅಲುಗಾಡಿವೆ. ಮನೆ ಮೇಲ್ಛಾವಣಿಯ ರೂಫಿಂಗ್ ಶೀಟ್ ಗಳು ಕಂಪನಗೊಂಡಿದೆ.