ದೇಶದ ಜನತೆಗೆ ಬಿಗ್ ರಿಲೀಫ್: ಪೆಟ್ರೋಲ್​ ದರ 8 ರೂ‌., ಡೀಸೆಲ್​ ದರ 6 ರೂ. ಇಳಿಕೆ, ಉಜ್ವಲ ಗ್ಯಾಸ್ ಯೋಜನೆಯ ಫಲಾನುಭವಿಗಳಿಗೆ 200 ರೂ. ಸಬ್ಸಿಡಿ ಘೋಷಣೆ

ನವದೆಹಲಿ: ತೈಲದ ಬೆಲೆ ಮೇಲಿದ್ದ ಅಬಕಾರಿ ಸುಂಕವನ್ನು ಇಳಿಕೆ ಮಾಡಿರುವ ಕೇಂದ್ರದ ಮೋದಿ ಸರಕಾರವು ಪೆಟ್ರೋಲ್ ಮೇಲೆ ಪ್ರತಿ ಲೀಟರ್ ಗೆ 8 ರೂಪಾಯಿ ಹಾಗೂ ಡಿಸೇಲ್ ಪ್ರತಿ ಲೀಟರ್​ಗೆ 6 ರೂಪಾಯಿ ಕಡಿಮೆ ಮಾಡುವುದಾಗಿ  ಘೋಷಣೆ ಮಾಡಿ ಜನತೆಗೆ ಸಿಹಿಸುದ್ದಿ ನೀಡಿದೆ. ಇದನ್ನು ಕೇಂದ್ರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ ಟ್ವೀಟ್ ಮಾಡುವ ಘೋಷಣೆ ಮಾಡಿದ್ದಾರೆ‌.

ದೊಡ್ಡ ಮಟ್ಟದಲ್ಲಿ ಅಬಕಾರಿ ಸುಂಕ ಇಳಿಕೆಯಾಗಿರುವ ಹಿನ್ನೆಲೆಯಲ್ಲಿ ಪೆಟ್ರೋಲ್​ ದರ 9.5 ರೂ. ಹಾಗೂ ಡಿಸೇಲ್​ ದರ 7 ರೂ. ಕಡಿಮೆಯಾಗಲಿದೆ. ಈ ಮೂಲಕ ಜನತೆಗೆ ಕೇಂದ್ರ ಸರ್ಕಾರ ಬಿಗ್​​ ರಿಲೀಫ್ ನೀಡಿದೆ. 


ಈ ಮಹತ್ವದ ನಿರ್ಧಾರ ಘೋಷಣೆ ಮಾಡಿರುವ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿ, ''ಯಾವಾಗಲೂ ನಮಗೆ ಜನತೆಯೇ ಮೊದಲು. ಹಣಕಾಸು ಸಚಿವರ ಇಂದಿನ ನಿರ್ಧಾರಗಳು, ವಿಶೇಷವಾಗಿ ಪೆಟ್ರೋಲ್ ಹಾಗೂ ಡೀಸೆಲ್ ದರಗಳಲ್ಲಿನ ಗಮನಾರ್ಹ ಇಳಿಕೆಗೆ ಸಂಬಂಧಿಸಿದ್ದಾಗಿದೆ. ಈ ಬೆಲೆ ಇಳಿಕೆ ವಿವಿಧ ವಲಯಗಳ ಮೇಲೆ ಧನಾತ್ಮಕವಾಗಿ ಪರಿಣಾಮ ಬೀರಲಿದೆ. ಈ ಮೂಲಕ ದೇಶದ ನಾಗರಿಕರಿಗೆ ಪರಿಹಾರ ಒದಗಿಸುವುದು ಹಾಗೂ ಅವರ ಜೀವನವನ್ನು ಮತ್ತಷ್ಟು ಸುಲಭಗೊಳಿಸುವುದು ನಮ್ಮ ಆದ್ಯ ಕರ್ತವ್ಯ'' ಎಂದಿದ್ದಾರೆ.

ಜೊತೆಗೆ "ಉಜ್ವಲ ಯೋಜನೆಯು ಕೋಟ್ಯಂತರ ಭಾರತೀಯರಿಗೆ ಅದರಲ್ಲೂ ವಿಶೇಷವಾಗಿ ಮಹಿಳೆಯರಿಗೆ ಸಹಾಯಹಸ್ತವನ್ನು ಚಾಚಿದೆ. ಉಜ್ವಲ ಸಬ್ಸಿಡಿಯ ಬಗ್ಗೆ ಇಂದಿನ ನಿರ್ಧಾರವು ಕುಟುಂಬದ ಬಜೆಟ್ ಅನ್ನು ಅಧಿಕಗೊಳಿಸಿ ಸುಲಭಗೊಳಿಸುತ್ತದೆ''ಎಂದು ಹೇಳಿದ್ದಾರೆ.


ಪಂಚರಾಜ್ಯ ಚುನಾವಣೆಯ ಬಳಿಕ ತೈಲಬೆಲೆಯಲ್ಲಿ ಏರಿಕೆಯಾಗಿದ್ದು, ಜನತೆ ತೊಂದರೆ ಅನುಭವಿಸುವಂತಾಗಿತ್ತು. ಇದೀಗ, ಕೇಂದ್ರ ಸರ್ಕಾರ ಜನಸಾಮಾನ್ಯರಿಗೆ ಸಿಹಿ ಸುದ್ದಿ ನೀಡಿದೆ. ಈ ಮೂಲಕ ಪೆಟ್ರೋಲ್ ​- ಡಿಸೇಲ್ ಮೇಲಿನ ಅಬಕಾರಿ ಸುಂಕವನ್ನು ಇಳಿಕೆ ಮಾಡಿದೆ. ಪೆಟ್ರೋಲ್ ಮೇಲೆ ಪ್ರತಿ ಲೀಟರ್​ಗೆ 8 ರೂಪಾಯಿ ಹಾಗೂ ಡಿಸೇಲ್ ಮೇಲೆ 6 ರೂಪಾಯಿ ಅಬಕಾರಿ ಸುಂಕ ಇಳಿಕೆ ಮಾಡಿದೆ. ಜೊತೆಗೆ ಉಜ್ವಲ್ ಗ್ಯಾಸ್ ಯೋಜನೆಯ ಫಲಾನುಭವಿಗಳಿಗೆ 200 ರೂ. ಸಬ್ಸಿಡಿ ಘೋಷಣೆ ಮಾಡಲಾಗಿದೆ. 

ಅಲ್ಲದೆ ಸಿಮೆಂಟ್ ಬೆಲೆಯಲ್ಲಿ ಇಳಿಕೆ ಮಾಡುವ ನಿರ್ಧಾರ ಕೈಗೊಳ್ಳಲಾಗಿದೆ. ಉಳಿದಂತೆ ರಸಗೊಬ್ಬರದ ಮೇಲೆ ಹೆಚ್ಚುವರಿ ಸಬ್ಸಿಡಿ ನೀಡಲು ನಿರ್ಧಾರ ಮಾಡಲಾಗಿದ್ದು, ಆಮದು ಪ್ಲಾಸ್ಟಿಕ್​​ ಉತ್ಪನ್ನಗಳ ಮೇಲಿನ ಅಬಕಾರಿ ಸುಂಕ ಇಳಿಕೆ ಮಾಡುವುದಾಗಿ ಘೋಷಣೆ ಮಾಡಿದ್ದಾರೆ. ಇದರಿಂದ ದೇಶದ ಜನಸಾಮಾನ್ಯರಿಗೆ ತಾತ್ಕಾಲಿಕ ರಿಲೀಫ್ ದೊರಕಿದಂತಾಗಿದೆ.