ಮದುವೆ ಸಮಾರಂಭ ಮುಗಿಸಿ ಮರಳುತ್ತಿದ್ದವರು ಭೀಕರ ಅಪಘಾತಕ್ಕೊಳಗಾಗಿ ಮಸಣ ಸೇರಿದರು!

ಮೈಸೂರು: ಮದುವೆ ಸಮಾರಂಭ ಮುಗಿಸಿ ಮರಳುತ್ತಿದ್ದವರು ಭೀಕರ ಅಪಘಾತಕ್ಕೊಳಗಾಗಿ ಆರು ಮಂದಿ ಸ್ಥಳದಲ್ಲೇ ಮೃತಪಟ್ಟ ಘಟನೆ ಮೈಸೂರು- ಮಡಿಕೇರಿ ಹೆದ್ದಾರಿಯ, ಹುಣಸೂರು ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಸಂಭವಿಸಿದೆ. 

ಅಪಘಾತದಲ್ಲಿ ಕೊಡಗು ಜಿಲ್ಲೆಯ ನಿವಾಸಿಗಳಾದ ರಾಜೇಶ್, ಅನಿಲ್, ಸಂತೋಷ್, ವಿನುತ್, ದಯಾನಂದ್, ಬಾಬು ಮೃತಪಟ್ಟಿದ್ದಾರೆ. ಇನ್ನಿಬ್ಬರಿಗೆ ಗಂಭೀರವಾದ ಗಾಯಗಳಾಗಿವೆ.

ವಾಹನದಲ್ಲಿದ್ದವರು ಕೊಡಗು ಜಿಲ್ಲೆಯವರಾಗಿದ್ದು, ಸಂಬಂಧಿಕರ ವಿವಾಹಕ್ಕೆಂದು ಮೈಸೂರಿಗೆ ಬಂದಿದ್ದರು. ಮದುವೆ ಸಮಾರಂಭ ಮುಗಿಸಿಕೊಂಡು ಪಾಲಿಬೆಟ್ಟದ ಕಡೆಗೆ ಬರುತ್ತಿದ್ದರು. ಈ ಸಂದರ್ಭ ಅರಸು ಕಲ್ಲಹಳ್ಳಿ ಬಳಿ ಈ ಭೀಕರ ಅಪಘಾತ ಸಂಭವಿಸಿದೆ. ಪರಿಣಾಮ ಆರು ಮಂದಿ ಮೃತಪಟ್ಟಿದ್ದಾರೆ.‌ ಗಾಯಾಳುಗಳನ್ನು ಹುಣಸೂರು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ. 

ಇವರು ಪ್ರಯಾಣಿಸುತ್ತಿದ್ದ ಬೊಲೆರೋ ವಾಹನ ಚಾಲಕನ ನಿಯಂತ್ರಣ ತಪ್ಪಿ, ಮರಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿಯಾದ ರಭಸಕ್ಕೆ ವಾಹನ ಸಂಪೂರ್ಣ ನಜ್ಜುಗುಜ್ಜಾಗಿದೆ. ಪರಿಣಾಮ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ.
BREAKING NEWS
Loading latest news...
Join our WhatsApp Channel Powered By : Online Pudu