-->

ನಡುರಸ್ತೆಯಲ್ಲಿಯೇ ಬಿಟೆಕ್ ವಿದ್ಯಾರ್ಥಿನಿಯನ್ನು ಹತ್ಯೆಗೈದ ಅಪರಾಧಿಗೆ ಗಲ್ಲು ಶಿಕ್ಷೆ!

ನಡುರಸ್ತೆಯಲ್ಲಿಯೇ ಬಿಟೆಕ್ ವಿದ್ಯಾರ್ಥಿನಿಯನ್ನು ಹತ್ಯೆಗೈದ ಅಪರಾಧಿಗೆ ಗಲ್ಲು ಶಿಕ್ಷೆ!

ಗುಂಟೂರು(ಆಂಧ್ರಪ್ರದೇಶ): ಆಂಧ್ರಪ್ರದೇಶದಲ್ಲಿ ತೀವ್ರ ಸಂಚಲನ ಮೂಡಿಸಿದ್ದ ಬಿ.ಟೆಕ್​ ವಿದ್ಯಾರ್ಥಿನಿಯೋರ್ವಳ ಕೊಲೆ ಪ್ರಕರಣದ ಆರೋಪ ಸಾಬೀತುಗೊಂಡ ಹಿನ್ನೆಲೆಯಲ್ಲಿ  ಅಪರಾಧಿ ಶಶಿಕೃಷ್ಣನಿಗೆ ಗುಂಟೂರು ಜಿಲ್ಲಾ ವಿಶೇಷ ನ್ಯಾಯಾಲಯವು ಗಲ್ಲು ಶಿಕ್ಷೆ ವಿಧಿಸಿ ಮಹತ್ವದ ತೀರ್ಪು ನೀಡಿದಡ. 

ಕಳೆದ ವರ್ಷ ಆಗಸ್ಟ್​​ 15ರಂದು ಹಾಡಹಗಲೇ ದುಷ್ಕರ್ಮಿ ಶಶಿಕೃಷ್ಣ ನಡುರಸ್ತೆಯಲ್ಲೇ ಈ ಅಮಾನವೀಯ ಕೃತ್ಯ ಎಸಗಿದ್ದ. ವಿಶೇಷ ನ್ಯಾಯಾಲಯದ ನ್ಯಾಯಾಧೀಶ ರಾಂಗೋಪಾಲ್ ತೀರ್ಪು ಪ್ರಕಟಿಸಿದ್ದಾರೆ‌. ರಾಜ್ಯದಲ್ಲಿ ನಡೆದಿರುವ ಪ್ರಕರಣಗಳಲ್ಲೇ ಇದೊಂದು ಅಪರೂಪದ ಪ್ರಕರಣ ಎಂದು ಪರಿಗಣಿಸಲಾಗಿದೆ. ದೇಶದ ಸ್ವಾತಂತ್ರ್ಯೋತ್ಸವ ದಿನದಂದು ನಡೆದ ಈ ಘಟನೆ ಸಾಕಷ್ಟು ಸಂಚಲನ ಮೂಡಿಸಿತ್ತು. ವಿಚಾರಣೆ ನಡೆಯುತ್ತಿರುವಾಗಲೇ ಆರೋಪಿ ಶಶಿ ಕೃಷ್ಣ ಕೋರ್ಟ್​ನಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ತಾನು ಮಾಡಿರುವ ತಪ್ಪಿನ ಬಗ್ಗೆ ಆತನಿಗೆ ಪಶ್ಚಾತ್ತಾಪವಾಗಿಲ್ಲ. ಹೀಗಾಗಿ, ಆತನಿಗೆ ಕಠಿಣ ಶಿಕ್ಷೆ ವಿಧಿಸಲು ಕೋರ್ಟ್ ಮುಂದಾಗಿದೆ. ಎಲ್ಲ ಮಾಹಿತಿಯನ್ನು ಗಮನದಲ್ಲಿಟ್ಟುಕೊಂಡು ಮರಣದಂಡನೆ ಶಿಕ್ಷೆ ವಿಧಿಸುತ್ತಿದ್ದೇವೆ ಎಂದು ತೀರ್ಪಿನಲ್ಲಿ ತಿಳಿಸಿದ್ದಾರೆ.

ಉಪಹಾರ ಸೇವಿಸಲು ಹೊರಬಂದ ರಮ್ಯಾ ಎಂಬ ಬಿಟೆಕ್ ವಿದ್ಯಾರ್ಥಿನಿಯನ್ನು ಆರೋಪಿ ಶಶಿಕೃಷ್ಣ ನಡುರಸ್ತೆಯಲ್ಲಿ ಅಡ್ಡಗಟ್ಟಿದ್ದಾನೆ. ಬಳಿಕ ಆಕೆಗೆ ಮನಬಂದಂತೆ ಮಾರಕಾಸ್ತ್ರದಿಂದ ಇರಿದು ಬೈಕ್​ನಲ್ಲಿ ಪರಾರಿಯಾಗಿದ್ದಾನೆ. ಘಟನೆಯ ಭೀಕರ ದೃಶ್ಯವು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. 

ಘಟನೆ ಬಳಿಕ ಕಾರ್ಯಪ್ರವೃತ್ತರಾದ ಗುಂಟೂರು ನಗರ ಪೊಲೀಸರು ಸಿಸಿಕ್ಯಾಮರಾದ ದೃಶ್ಯವನ್ನು ಆಧರಿಸಿ ಆರೋಪಿಯನ್ನು ಬಂಧಿಸಿದ್ದರು. ಪೊಲೀಸರು ಬಂಧನಕ್ಕೆ ತೆರಳಿದ್ದ ವೇಳೆ ಆತ ಕೈ ಕತ್ತರಿಸಿಕೊಂಡು ಆತ್ಮಹತ್ಯೆಗೆ ಯತ್ನಿಸಿ ಗಾಯಗೊಂಡಿದ್ದ. ಬಳಿಕ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿ ತನಿಖೆ ನಡೆಸಲಾಗಿತ್ತು. ತೀರ್ಪು ಹೊರಬರುತ್ತಿದ್ದಂತೆ ರಮ್ಯಾ ಪೋಷಕರು ಪೊಲೀಸ್ ಇಲಾಖೆ ಹಾಗೂ ಕೋರ್ಟ್​​ಗೆ ಧನ್ಯವಾದ ತಿಳಿಸಿದರು. 'ಅಪರಾಧಿಗೆ ಮರಣದಂಡನೆ ವಿಧಿಸಿದ್ದರಿಂದ ತನ್ನ ಪುತ್ರಿಗೆ ನ್ಯಾಯ ದೊರಕಿದೆ ಎಂದು ಭಾವಿಸುತ್ತೇವೆ' ಎಂದು ಹೇಳಿದ್ದಾರೆ.

Ads on article

Advertise in articles 1

advertising articles 2

Advertise under the article