Communal Harmony - ಮುಚ್ಚಿದ ಮುಸ್ಲಿಂ ವ್ಯಾಪಾರಿಗಳ ಅಂಗಡಿಗಳಿಗೆ ದೈವಗಳಿಂದಲೇ ಚಾಲನೆ

 ಮುಚ್ಚಿದ ಮುಸ್ಲಿಂ ವ್ಯಾಪಾರಿಗಳ ಅಂಗಡಿಗಳಿಗೆ ದೈವಗಳಿಂದಲೇ ಚಾಲನೆ


ಕೋಮು ದ್ವೇಷ ಹರಡುವ ಕೆಲಸ ಕಳೆದ ಕೆಲವು ವಾರಗಳಿಂದ ರಾಜ್ಯದ ವಿವಿಧೆಡೆ ನಡೆಯುತ್ತಿದೆ. ಜಾತ್ರೆಗಳಲ್ಲಿ ಮುಸ್ಲಿಂ ವ್ಯಾಪಾರಿಗಳ ವ್ಯಾಪಾರಕ್ಕೆ ಅಡ್ಡಿ ಮಾಡುವಂತಹ ಘಟನೆಗಳು ನಡೆಯುತ್ತಿದೆ. ಆದರೆ, ಕಡಲತಡಿಯ ದಕ್ಷಿಣ ಕನ್ನಡದ ಗಡಿ ಪ್ರದೇಶವಾದ ‌ಮಂಜೇಶ್ವರದಲ್ಲೊಂದು ಕೋಮು ಸಾಮರಸ್ಯದ ಘಟನೆ ಜರುಗಿದೆ.





ದೇವಸ್ಥಾನದ ಜಾತ್ರೆಯ ಸಂದರ್ಭದಲ್ಲಿ ದೈವಗಳೇ ಮುಸ್ಲಿಂ ವ್ಯಾಪಾರಿಗಳ ವ್ಯಾಪಾರಕ್ಕೆ ಚಾಲನೆ ನೀಡುವ ಮೂಲಕ ಜನರಲ್ಲಿ ಕೋಮು ಸಾಮರಸ್ಯದ ಸಂದೇಶ ಸಾರಿದೆ.




ಇಲ್ಲಿನ ಉದ್ಯಾವರ ಮಾಡದ ಕಾರ್ಣಿಕದ ಕ್ಷೇತ್ರವಾದ ಶ್ರೀ ಅರಸು ಮಂಜಿಷ್ಣಾರ್ ದೈವಸ್ಥಾನದಲ್ಲಿ ಈ ಸಾಮರಸ್ಯದ ಘಟನೆ ಜರುಗಿದೆ. ಪ್ರತಿವರ್ಷವೂ ಈ ದೇವಸ್ಥಾನದ ಜಾತ್ರೆಯು ಅದ್ದೂರಿಯಾಗಿ ನಡೆಯುತ್ತಿದೆ ಇದಕ್ಕೂ ಮುನ್ನ ಜಾತ್ರೆಗೆ ದಿನನಿಶ್ಚಯ ಮಾಡುವ ಕುದಿಕಳ ಎಂಬ ಕಾರ್ಯಕ್ರಮವಿದೆ.



ಧಾರ್ಮಿಕ ಆಚರಣೆಯ ಭಾಗವಾಗಿ, ಮುಸ್ಲಿಂ ಸಮುದಾಯದ ವ್ಯಾಪಾರಿಯೊಬ್ಬರಿಂದಲೇ ದೈವಸ್ಥಾನದಲ ಆವರಣದೊಳಗೆ ಸಂತೆಯನ್ನು ಸ್ಥಾಪಿಸಿ ಅಲ್ಲಿಂದಲೇ ಕ್ಷೇತ್ರದ ದೈವಗಳು ತೆಂಗಿನಕಾಯಿ ಮತ್ತು ವೀಳ್ಯದೆಲೆ ಖರೀದಿಸಿ ಕ್ಷೇತ್ರದ ಉತ್ಸವಕ್ಕೆ ದಿನನಿಶ್ಚಯ ಮಾಡಲಾಗುತ್ತದೆ.



ಈ ಕ್ಷೇತ್ರದಲ್ಲಿ ಇರುವ ಸಿಂಹಾಸನ ಕಟ್ಟೆಯ ಒಂದು ಭಾಗದಲ್ಲಿ ಮುಸ್ಲಿಂ ಬಾಂಧವರು ಹಾಗೂ ಮತ್ತೊಂದು ಭಾಗದಲ್ಲಿ ಕ್ಷೇತ್ರಕ್ಕೆ ಸಂಬಂಧಪಟ್ಟವರು (ಬ್ರಹ್ಮಸಭೆ) ಕುಳಿತುಕೊಳ್ಳುತ್ತಾರೆ. ದೈವ ಪಾತ್ರಿಗಳ ಆಗಮನವಾಗುತ್ತಲೇ ಉತ್ಸವದ ದಿನ ನಿಶ್ಚಯವನ್ನು ಓದಿ ಹೇಳುವ ವಿಶೇಷ ಸಂಪ್ರದಾಯವಿದೆ.



ಕರಾವಳಿಯಲ್ಲಿ ದೈವಾರಾಧನೆಗೆ ಮುಸಲ್ಮಾನರು, ಕ್ರೈಸ್ತರು, ಬೌದ್ಧರು ಕೂಡ ಗೌರವ ಸೂಚಿಸುತ್ತಾರೆ. ಇದು ಹೊರಗಿನ ಸಂಪ್ರದಾಯಕ್ಕಿಂತ ಭಿನ್ನವಾಗಿದೆ. ಕರಾವಳಿಯಲ್ಲಿ ದೇವರಿಗಿಂತ ದೈವಗಳು ಹೆಚ್ಚು ಪ್ರಮುಖವಾಗಿದೆ.



ಆದರೆ, ಪುರೋಹಿತಶಾಹಿ ಆಚರಣೆಗಳು ದೈವಾರಾಧನೆ ಆಚರಣೆಯಲ್ಲಿ ಮಧ್ಯಪ್ರವೇಶ ಮಾಡತೊಡಗಿದೆ. ದೈವಾರಾಧನೆ ತನ್ನ ಪಾರಮ್ಯ ಕಳೆದುಕೊಳ್ಳುವ ಭೀತಿ ಸೃಷ್ಟಿಯಾಗುತ್ತಿದೆ. ದೈವಾರಾಧನೆ ಎಂಬುದು ಸೌಹಾರ್ದ- ಸಮಾನತೆಯ ಪ್ರತೀಕವಾಗಿದೆ. ಇಲ್ಲಿ ಜನರು ಜಾತಿ ಭೇದಗಳನ್ನು ಮರೆತು ಎಲ್ಲರೂ ಒಂದಾಗುತ್ತಾರೆ.

BREAKING NEWS
Loading latest news...
Join our WhatsApp Channel Powered By : Online Pudu