-->

ಬೆಳ್ತಂಗಡಿ- ಪ್ರೇಯಸಿಯ ವಿಚಾರದಲ್ಲಿ ತಂದೆಯನ್ನೇ ಹತ್ಯೆಗೈದ ಪುತ್ರನಿಗೆ ಜೀವಾವಧಿ ಶಿಕ್ಷೆ ಹಾಗೂ 10,000 ರೂ‌. ದಂಡ ವಿಧಿಸಿದ ಕೋರ್ಟ್

ಬೆಳ್ತಂಗಡಿ- ಪ್ರೇಯಸಿಯ ವಿಚಾರದಲ್ಲಿ ತಂದೆಯನ್ನೇ ಹತ್ಯೆಗೈದ ಪುತ್ರನಿಗೆ ಜೀವಾವಧಿ ಶಿಕ್ಷೆ ಹಾಗೂ 10,000 ರೂ‌. ದಂಡ ವಿಧಿಸಿದ ಕೋರ್ಟ್

ಮಂಗಳೂರು: ತಂದೆಯನ್ನೇ ಕೊಲೆಗೈದಿರುವ ಆರೋಪ ಸಾಬೀತಾಗಿರುವ ಹಿನ್ನೆಲೆಯಲ್ಲಿ ಆರೋಪಿ ಪುತ್ರನಿಗೆ ಮಂಗಳೂರು 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ಹಾಗೂ 10,000 ರೂ‌. ದಂಡ ವಿಧಿಸಿ ಆದೇಶ ನೀಡಿದೆ.

ಬೆಳ್ತಂಗಡಿ ತಾಲೂಕು ಗರ್ಡಾಡಿ ಗ್ರಾಮದ ನಡು ಮುಂಡ್ಯೊಟ್ಟು  ನಿವಾಸಿ ಆರೋಪಿ ಹರೀಶ ಪೂಜಾರಿ(28) ಅನ್ಯ ಜಾತಿಯ ಯುವತಿಯನ್ನು ಪ್ರೀತಿಸಿ ವಿವಾಹವಾಗಿದ್ದ. ಈ ವಿಚಾರಕ್ಕೆ ತಂದೆ ಶ್ರೀಧರ ಪೂಜಾರಿ(56) ಆಕ್ಷೇಪ ವ್ಯಕ್ತಪಡಿಸಿದ್ದರು. ಹರೀಶ್ ಪೂಜಾರಿಯ ಸಹೋದರಿ ಮದುವೆಯಾಗದೆ ಹರೀಶ್ ಮದುವೆ ಮಾಡುವುದಿಲ್ಲ ಎಂದು ತಂದೆ ಶ್ರೀಧರ ಪೂಜಾರಿ ತಿಳಿಸಿದ್ದರು. ಇದರಿಂದ ಮನೆ ಮಂದಿಯೊಂದಿಗೆ ಹರೀಶ್ ಪೂಜಾರಿ ಮನಸ್ತಾಪ ಹೊಂದಿದ್ದ.

ಜ.18 ರಂದು ಮಧ್ಯಾಹ್ನ ಇದೇ ವಿಚಾರಕ್ಕೆ ಪಕ್ಕದ ಮನೆಯ ಸಮೀಪ ತಂದೆ ಮತ್ತು ಮಗನ ಮಧ್ಯೆ ವಾಗ್ವಾದ ನಡೆದಿತ್ತು. ಈ ಸಂದರ್ಭ ಹರೀಶ್ ಪೂಜಾರಿ ತನ್ನ ತಂದೆ ಶ್ರೀಧರ ಪೂಜಾರಿಯವರಿಗೆ ಕೊಲೆ ಬೆದರಿಕೆ ಹಾಕಿ ಹೋಗಿದ್ದ. ಬಳಿಕ ಅದೇ ದಿನ ಸಂಜೆ ತಂದೆ ಪೇಟೆಗೆ ಹೋಗಿ ಮನೆಗೆ ಬಂದಿದ್ದ ಸಂದರ್ಭ ಪುತ್ರ ಹರೀಶ್ ಪೂಜಾರಿ ಮರದ ಪಕ್ಕಾಸಿನಿಂದ ತಂದೆಯ ತಲೆ ಹಾಗೂ ಮುಖಕ್ಕೆ ಹೊಡೆದಿದ್ದಾನೆ. ಪರಿಣಾಮ ತೀವ್ರವಾಗಿ ಗಾಯಗೊಂಡಿದ್ದ  ಶ್ರೀಧರ್ ಪೂಜಾರಿಯವರು ಆಸ್ಪತ್ರೆಗೆ ದಾಖಲಿಸುವಷ್ಟರಲ್ಲಿ  ಮೃತಪಟ್ಟಿದ್ದರು ಎಂದು ದೂರು ದಾಖಲಾಗಿತ್ತು. 

ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇನ್ಸ್‌ಪೆಕ್ಟರ್ ಸಂದೇಶ್ ತನಿಖೆ ನಡೆಸಿ ದೋಷಾರೋಪಣ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಮಂಗಳೂರಿನ 4ನೇ ಜಿಲ್ಲಾ  ಮತ್ತು ಸತ್ರ ನ್ಯಾಯಾಲಯ ಪ್ರಕರಣದ ವಿಚಾರಣೆಯನ್ನು ಕೈಗೆತ್ತಿಕೊಂಡಿತ್ತು. ನ್ಯಾಯಾಧೀಶೆ ಬಿ.ಆರ್. ಪಲ್ಲವಿ ಅವರು ವಿಚಾರಣೆ ಪೂರ್ಣಗೊಳಿಸಿದ್ದು, ಆರೋಪಿ ಹರೀಶ್ ಪೂಜಾರಿ ದೋಷಿ ಎಂಬುದಾಗಿ ತೀರ್ಪು ನೀಡಿದ್ದಾರೆ. ‌ಈ ಹಿನ್ನೆಲೆಯಲ್ಲಿ ಆರೋಪಿಗೆ ಜೀವಾವಧಿ ಶಿಕ್ಷೆ ಮತ್ತು 10,000 ರೂ. ದಂಡವಿಧಿಸಿ ತೀರ್ಪು ನೀಡಿದ್ದಾರೆ. ಪ್ರಕರಣದಲ್ಲಿ ಸರಕಾರದ ಪರವಾಗಿ ಸರಕಾರಿ ಅಭಿಯೋಜಕರಾದ ಹರಿಶ್ಚಂದ್ರ ಉದ್ಯಾವರ್ ವಾದಿಸಿದ್ದರು.

Ads on article

Advertise in articles 1

advertising articles 2

Advertise under the article