ಆ ಏಳು ಮಂದಿಯನ್ನು ಕಂಡರೆ ಸಾಕು ಕುಕ್ಕುತ್ತೆ ಈ ಕಾಗೆ: ಏನೂ ಮಾಡದಿದ್ದರೂ ಸೇಡು ತೀರಿಸುತ್ತಿದೆ

ಭರಮಸಾಗರ: ಕಾಗೆಯೊಂದು ಹಳ್ಳಿ ಜನರ ಪಾಲಿಗೆ ಕಂಟಕವಾಗಿ ಪರಿಣಮಿಸಿದ್ದು, ಮನೆಯಿಂದ ಹೊರ ಬಂದರೆ ಸಾಕು ಹಾರಿ ಬಂದು ತಲೆಗೆ ಕುಕ್ಕುತ್ತಿದೆ. ಕಳೆದೊಂದು ತಿಂಗಳಿಂದ ಈ ಕಾಗೆಯು ಜನರ ನೆಮ್ಮದಿಗೆ ಭಂಗ ತಂದಿದ್ದು, ಏಳು ಜನರನ್ನು ಗುರಿಯಾಗಿಸಿಕೊಂಡು ಕಾಟ ಕೊಡುತ್ತಿದೆ.

ಚಿತ್ರದುರ್ಗ ಜಿಲ್ಲೆ ಭರಮಸಾಗರ ಹೋಬಳಿ ಸಮೀಪದ ಓಬಳಾಪುರದ ಏಳು ಮಂದಿ ಗ್ರಾಮಸ್ಥರು ಈ ತೊಂದರೆಗೆ ಒಳಗಾದವರು. ಇವರು ಕಾಗೆಯ ಕಾಟದಿಂದ ಬೇಸತ್ತು ಪಾವಗಡದ ಶನೀಶ್ವರನ ಸನ್ನಿಧಿ ಸೇರಿ ಇನ್ನಿತರ ಪುಣ್ಯ ಸ್ಥಳಗಳ ದರ್ಶನ ಪಡೆದು ಬಂದರೂ ಕಾಗೆಯ ಕಾಟದಿಂದ ಅವರು ಮುಕ್ತರಾಗಿಲ್ಲ. 

ಈ ಕಾಗೆಯು ಮನೆಯ ಹೊಸಿಲು ದಾಟಿ ಹೊರ ಬಂದರೆ ಸಾಕು ಅಟ್ಯಾಕ್‌ ಮಾಡುತ್ತದೆ. ಅದಕ್ಕೆ ಯಾವುದೇ ತೊಂದರೆ ಕೊಡದೆ ಇದ್ದರೂ ಬಂದು ತಲೆಗೆ ಕುಕ್ಕುತ್ತದೆ. ಈ ಮೊದಲು ಎ.ಕೆ.ಕಾಲನಿಯ ಪರಶುರಾಮಪ್ಪ ಎಂಬುವವರ ಮೇಲೆ ಇದೇ ಕಾಗೆಯು ಕುಕ್ಕುತ್ತಿತ್ತು. ಆ ಬಳಿಕ ಹರಸಾಹಸ ಪಟ್ಟು ಕಾಗೆಯನ್ನು ಅಲ್ಲಿಂದ ಓಡಿಸಲಾಗಿತ್ತು.

ಇದೀಗ ಅಲ್ಲಿನ ಸರ್ಕಾರಿ ಶಾಲೆಯ ಪಕ್ಕದ ರಸ್ತೆಯ ಇಕ್ಕೆಲಗಳಲ್ಲಿನ ಮನೆಗಳ ಬಳಿ ಈ ಕಾಗೆ ಹಾರಾಡುತ್ತಿದೆ. ಇಲ್ಲಿ ನೆಲೆಸಿರುವ ಏಳು ಮಂದಿಯನ್ನು ಗುರಿಯಾಗಿಸಿಕೊಂಡು ತನ್ನ ಕುಕ್ಕುವ ಚಾಳಿಯನ್ನು ಮುಂದುವರಿಸಿದೆ. ಇತರೆ ಯಾರ ಮೇಲೂ ಕಾಗೆ ಈ ರೀತಿ ಮಾಡುತ್ತಿಲ್ಲ. ಕಾಗೆಯ ನಡೆಯಿಂದ ಬೇಸತ್ತ ಜನತೆ ಪಾವಗಡದ ಶನೀಶ್ವರನ ಸನ್ನಿಧಿಗೆ  ಹೋಗಿ ಪೂಜೆ ಮಾಡಿಸಿಕೊಂಡು ಬಂದರೂ ಕುಕ್ಕುವಿಕೆ ನಿಂತಿಲ್ಲ.

ಕಾಗೆಯ ಕಾಟದಿಂದ ಪಾರಾಗಲು ಶತಾಯಗತಾಯ ಪ್ರಯತ್ನ ನಡೆಸಿರುವ ಓಬಳಾಪುರ ಗ್ರಾಮಸ್ಥರು, ಅದರ ದಾಳಿಯಿಂದ ತಪ್ಪಿದರೆ ಸಾಕು ಎನ್ನುತ್ತಿದ್ದಾರೆ. ಕಾಗೆಯನ್ನು ಕಂಡವರೆಲ್ಲ ಹೆದರಿಸಿ ಓಡಿಸುವ ಕೆಲಸಮಾಡುತ್ತಿದ್ದಾರೆ. ಆದರೆ ಕಾಗೆ ಮಾತ್ರ ತಾನಿರುವ ಪ್ರದೇಶವನ್ನು ಬಿಟ್ಟು ಕದಲುತ್ತಿಲ್ಲ. ಹಾಗಾಗಿ ಕಾಗೆಯ ಸೇಡಿನ ಮರ್ಮವೇ ತಿಳಿಯದಂತಾಗಿದೆ.
BREAKING NEWS
Loading latest news...
Join our WhatsApp Channel Powered By : Online Pudu