ಸುಬ್ರಹ್ಮಣ್ಯ: ಸಂಚಾರದಲ್ಲಿದ್ದ ಆಲ್ಟೋ ಕಾರೊಂದರಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು ನೋಡು ನೋಡುತ್ತಿದ್ದಂತೆ ಸಂಪೂರ್ಣ ಹೊತ್ತಿ ಉರಿದ ಘಟನೆ ಬುಧವಾರ ಸಂಜೆ ವೇಳೆ ಬಳ್ಪ ಸಮೀಪ ಸಂಭವಿಸಿದೆ.
ಪಂಜ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಕಡಬ ತಾಲೂಕಿನ ಬಳ್ಪ ಎಂಬಲ್ಲಿನ ಪಾದೆ ಬಳಿ ಈ ದುರ್ಘಟನೆ ನಡೆದಿದೆ. ಪಂಜದ ಕೃಷ್ಣನಗರ ಎಂಬಲ್ಲಿನ ನಿವಾಸಿ ಕೇಶವ ಆಚಾರಿ ಎಂಬವರು ತಮ್ಮ ಕಾರಿನಲ್ಲಿ ಏನೆಕಲ್ಲು ಕಡೆಯಿಂದ ಕೆಲಸ ಮುಗಿಸಿ ಬರುತ್ತಿದ್ದರು. ಆಗ ಅವರು ಪಾದೆ ಬಳಿ ಬರುತ್ತಿದ್ದಂತೆ ಕಾರಿನಲ್ಲಿ ಏಕಾಏಕಿ ಹೊಗೆ ಕಾಣಿಸಿಕೊಂಡಿದೆ.
ತಕ್ಷಣ ಅವರು ಕಾರಿನಿಂದ ಇಳಿದು ನೋಡಬೇಕು ಎನ್ನುವಷ್ಟರಲ್ಲಿ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಅವರು ಏನಾಗುತ್ತಿದೆ ಎಂದು ನೋಡಬೇಕೆನ್ನುವಾಗಲೇ ಕಾರು ಧಗಧಗ ಎಂದು ಬೆಂಕಿಗಾಹುತಿಯಾಗಿದೆ.