-->

BSY in trouble? | ಯಡಿಯೂರಪ್ಪ ಮಾಡ್ತಿರೊ ತಪ್ಪೇನು?: ಕುರ್ಚಿ ಖಾಲಿ ಮಾಡಿ ಎಂದಿದ್ದೇಕೆ?

BSY in trouble? | ಯಡಿಯೂರಪ್ಪ ಮಾಡ್ತಿರೊ ತಪ್ಪೇನು?: ಕುರ್ಚಿ ಖಾಲಿ ಮಾಡಿ ಎಂದಿದ್ದೇಕೆ?





ಬರಹ: ಲೋಕೇಶ್ ಗೌಡ, ಹಿರಿಯ ಪತ್ರಕರ್ತರು


ಬಿಜೆಪಿ ಪಾಲಿಗೆ ಕರ್ನಾಟಕ ದಕ್ಷಿಣ ಭಾರತದ ಹೆಬ್ಬಾಗಿಲು. ರಾಜ್ಯದಲ್ಲಿ ಪಕ್ಷ ಕಟ್ಟಿ ಬೆಳೆಸಿದ ಶ್ರೇಯಸ್ಸು ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪನವರದೆ ಹೊರತು ಆರ್‌ಎಸ್‌ಎಸ್‌ ಆಗಲಿ ಅಥವಾ ಮತ್ಯಾವ ನಾಯಕರಾಗಲಿ ಅಲ್ಲ. ಹೈಕಮಾಂಡ್ ಸೇರಿದಂತೆ ಎಲ್ಲರಿಗೂ ತಿಳಿದಿರುವ ವಿಚಾರ.



2018 ರಲ್ಲಿ ಚುನಾವಣೆ ಎದುರಿಸಿದ್ದು ಯಡಿಯೂರಪ್ಪ ನೇತೃತ್ವದಲ್ಲಿ. ಮತ್ತೊಮ್ಮೆ ಮುಖ್ಯಮಂತ್ರಿಯಾಗಲು ಅವಕಾಶ ಕೊಡಿ ಆಂತ ತಮ್ಮ ಭಾಗ್ಯಗಳನ್ನು ಮುಂದಿಟ್ಟು ಸಿದ್ದರಾಮಯ್ಯ ಜನರ ಮುಂದೆ ಹೋದ್ರು. ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕು ಅಂದ್ರೆ ನನಗೆ ಅವಕಾಶ ಕೊಡಿ ಅಂತ ಕುಮಾರಸ್ವಾಮಿ ಮತ ಬೇಟೆ ನಡೆಸಿದ್ರು. ತ್ರಿಕೋನ ಸ್ಪರ್ಧೆಯಲ್ಲಿ ಬಿಜೆಪಿ 104 ಸ್ಥಾನಗಳಿಗೆ ಸುಸ್ತಾಗಿ ನಿಂತಿತು. 2008 ಆಪರೇಷನ್ ಕಮಲದ ಚಾಳಿ ನೆಚ್ಚಿಕೊಂಡ ಬಿಎಸ್‌ವೈ ರಾಜ್ಯಪಾಲರಿಂದ ಅನುಮತಿ ಪಡೆದು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿಯೇ ಬಿಟ್ಟರು. ಒಂದೇ ಒಂದು ಶಾಸಕರನ್ನು ಬಿಜೆಪಿ ಕಡೆ ವಾಲದಂತೆ ನೋಡಿಕೊಂಡ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ರಚನೆಯಾಗಿ ಯಡಿಯೂರಪ್ಪ ಕೇವಲ ಒಂದೂವರೆ ದಿನದಲ್ಲಿ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ರು.



14 ತಿಂಗಳ ವನವಾಸದ ಬಳಿಕ ಅದೇ ಆಪರೇಷನ್ ಕಮಲದ ಅನೈತಿಕ ದಾರಿಯಲ್ಲಿ ಯಡಿಯೂರಪ್ಪ ಅಧಿಕಾರಕ್ಕೇರುವಲ್ಲಿ ಯಶಸ್ವಿಯಾದರು. ಅಧಿಕಾರ ಕಳೆದುಕೊಂಡ ಕಾಂಗ್ರೆಸ್-ಜೆಡಿಎಸ್ ತಮ್ಮ 17 ಶಾಸಕರನ್ನು ಕಳೆದುಕೊಂಡು ನಿಸ್ಸಾಹಾಯಕವಾದ್ವು. ರಾಜ್ಯದಲ್ಲಿ ಪ್ರತಿಪಕ್ಷವೇ ಇಲ್ಲವೆನೋ ಎಂಬಂತೆ ಹೊಂದಾಣಿಕೆ ರಾಜಕಾರಣ ಶುರುವಾಯ್ತು. ಉಪಚುನಾವಣೆಯಲ್ಲೂ ಜಯಭೇರಿ ಬಾರಿಸುವ ಮೂಲಕ ಯಡಿಯೂರಪ್ಪ ಕುರ್ಚಿ ಮತ್ತಷ್ಟು ಭದ್ರವಾಯ್ತು.



ಇಂತಹ ಅವಕಾಶವನ್ನು ಬಳಸಿಕೊಂಡು ಚುನಾವಣೆ ಸಂದರ್ಭದಲ್ಲಿ ನೀಡಿದ ಭರವಸೆಯಂತೆ ಆಡಳಿತ ನಡೆಸಿದ್ದರೆ ಯಡಿಯೂರಪ್ಪ ತಂಟೆಗೆ ಬರುವ ಧೈರ್ಯ ಯಾರಿಗೂ ಇರುತ್ತಿರಲಿಲ್ಲ. ಕರ್ನಾಟಕ ಪಾಲಿಗೆ ಯಡಿಯೂರಪ್ಪನೇ ಹೈಕಮಾಂಡ್. ಬಿಜೆಪಿ ನಾಯಕರು ಸಹ ಬಿಎಸ್‌ವೈಗೆ ಸಂಪೂರ್ಣ ಸಹಕಾರ ನೀಡುತ್ತಿದ್ರು. ಸಿಎಂ ವೈಖರಿಯನ್ನು ಪ್ರಶ್ನೆ ಮಾಡುವ ತಾಕತ್ತು ಯಾರಿಗೂ ಇರುತ್ತಿರಲಿಲ್ಲ.



ಆದರೆ ಸಿಎಂ ಯಡಿಯೂರಪ್ಪ ಮಾಡಿದ್ದು 2008 ರ ಪುನರಾವರ್ತನೆ ತಪ್ಪುಗಳನ್ನು. ಕುಟುಂಬದ ಹಸ್ತಕ್ಷೇಪದಿಂದ ಮೊದಲ ಅವಧಿಯಲ್ಲಿ ಅಧಿಕಾರ ಕಳೆದುಕೊಂಡಿದ್ದರು. ಆ ತಪ್ಪುಗಳನ್ನು ಮತ್ತೆ ಮಾಡಲು ಸಾಧ್ಯವಿಲ್ಲ. ಅನುಭವಿ ರಾಜಕಾರಣಿ ಬಿಎಸ್‌ವೈ ಹಗಲು ಕಂಡ ಬಾವಿಗೆ ರಾತ್ರಿ ಬೀಳುವ ತಪ್ಪು ಮಾಡಲ್ಲ ಅಂತ ಎಲ್ಲರೂ ಅಂದುಕೊಂಡಿದ್ದರು. ರಾಜಕೀಯ ವಿಶ್ಲೇಷಕರ ಲೆಕ್ಕಾಚಾರವನ್ನೇ ಬುಡಮೇಲು ಮಾಡಿದ ಯಡಿಯೂರಪ್ಪ ವಿಧಾನಸೌಧದ ಮೂರನೆ ಮಹಡಿಯ ಸಂಪೂರ್ಣ ಹೊಣೆಗಾರಿಕೆಯನ್ನು ಬಿಟ್ಟುಕೊಟ್ಟಿದ್ದು ತಮ್ಮ ಪುತ್ರ ಬಿ ವೈ ವಿಜಯೇಂದ್ರನಿಗೆ.



ಗೃಹ, ಲೋಕೋಪಯೋಗಿಯಂತಹ ಪ್ರಮುಖ ಖಾತೆಗಳನ್ನು ತಮ್ಮ ಪರಮಾಪ್ತರಿಗೆ ನೀಡುವಲ್ಲಿ ಸಿಎಂ ಯಶಸ್ವಿಯಾದರು. ಆದರೆ ಆ ಖಾತೆಗಳನ್ನು ನಿಭಾಯಿಸುತ್ತಿರೋದು ಆ ಸಚಿವರಲ್ಲ. ಬದಲಿಗೆ ತಮ್ಮ ಪುತ್ರ ವಿಜಯೇಂದ್ರ ಅನ್ನೋದು ಜಗಜ್ಜಾಹೀರಾಯ್ತು. ಆಪ್ತರ ಪ್ರಮುಖ ಖಾತೆಗಳಷ್ಟೆ ಅಲ್ಲದೆ, ಸಿಎಂ ಬಳಿ ಇದ್ದ ಇಂಧನ, ಹಣಕಾಸು ಸೇರಿದಂತೆ ಎಲ್ಲಾ ಇಲಾಖೆಗಳ ಉಸ್ತುವಾರಿ ಸಚಿವರಾಗಿದ್ದು ಪುತ್ರ ವಿಜಯೇಂದ್ರ.

ಯಡಿಯೂರಪ್ಪ ಪರಮಾಪ್ತೆ ಶೋಭಾ ಕರಂದ್ಲಾಜೆಯನ್ನೂ ಸಿಎಂ ರಾಜಕೀಯ ಪಡಸಾಲೆಯಿಂದ ದೂರ ಇರಿಸುವಲ್ಲಿ ವಿಜಯೇಂದ್ರ ಯಶಸ್ವಿಯಾದರು. ನನ್ನ ಪುತ್ರನೇ ನನ್ನ ಕುರ್ಚಿಗೆ ರಕ್ಷಾಕವಚವಾಗಿರ್ತಾನೆ ಅಂತ ನಂಬಿದ ಯಡಿಯೂರಪ್ಪ ಸಂಪೂರ್ಣ ಅಧಿಕಾರವನ್ನು ಪುತ್ರನಿಗೆ ಬಿಟ್ಟುಕೊಟ್ಟರು. ವಿಜಯೇಂದ್ರನನ್ನು ಕೇಳದೆ ಒಂದು ಹುಲ್ಲುಕಡ್ಡಿಯೂ ಅಲುಗಾಡದು ಎನ್ನುವ ಪರಿಸ್ಥಿತಿ ನಿರ್ಮಾಣವಾಯ್ತು. ಸಿಎಂ ಮಾಧ್ಯಮ ಸಲಹೆಗಾರರಿಬ್ಬರು ಚಾಪೆ ಸುತ್ತಿಕೊಂಡು ಮನೆಕಡೆ ಹೋಗುವಂತೆ ಮಾಡಿದ್ದು ವಿಜಯೇಂದ್ರನೆ.

ಇದು ನಿಷ್ಠಾವಂತ ಬಿಜೆಪಿ ಶಾಸಕರನ್ನು ಕೆರಳಿ ಕೆಂಡವಾಗುವಂತೆ ಮಾಡಿತು. ಕರ್ನಾಟಕದಲ್ಲಿ ನಡೆಯುತ್ತಿರುವುದು ಯಡಿಯೂರಪ್ಪ ಸರ್ಕಾರ ಅಲ್ಲ. ಬದಲಿಗೆ ವಿಜಯೇಂದ್ರ ತನ್ನ ಕಬಂಧಬಾಹುಗಳನ್ನು ಚಾಚುತ್ತಿದ್ದಾರೆ. ಹೀಗೆ ಬಿಟ್ಟರೆ ಮುಂದೊಂದು ದಿನ ಬಿಜೆಪಿ ಅಪ್ಪ-ಮಕ್ಕಳ ಪಕ್ಷವಾಗುತ್ತೆ. ನಮಗೆ ಉಳಿಗಾಲವಿಲ್ಲ ಅನ್ನೋದನ್ನು ಹೈಕಮಾಂಡ್ ಮಹೋದಯರಿಗೆ ಆಗಿಂದಾಗ್ಗೆ ಮುಟ್ಟಿಸುತ್ತಾ ಬಂದ್ರು.

ಎಲ್ಲಾ ಬೆಳವಣಿಗೆಯನ್ನು ಸೂಕ್ಷ್ಮವಾಗಿ ಅವಲೋಕಿಸಿದ ಮೋದಿ, ಅಮಿತ್ ಶಾ ನಾಯಕತ್ವ ಬದಲಾವಣೆಯೇ ಸೂಕ್ತ ಅನ್ನೊ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ. ಒಂದು ವೇಳೆ ಬಿಹಾರದಲ್ಲಿ ಎನ್‌ಡಿಎಗೆ ಅಧಿಕಾರ ತಪ್ಪಿದ್ದರೆ ಯಡಿಯೂರಪ್ಪ ಆಯಸ್ಸು ಇನ್ನೂ ಆರೇಳು ತಿಂಗಳು ಹೆಚ್ಚಾಗುತ್ತಿತ್ತೊ ಏನೊ. ಬಿಎಸ್‌ವೈ ದುರುದೃಷ್ಟಕ್ಕೆ ಬಿಹಾರದಲ್ಲಿ ಎನ್‌ಡಿಎ ಹರಸಾಹಸಪಟ್ಟು ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾಯ್ತು. ಇದು ಬಿಎಸ್‌ವೈ ಕುರ್ಚಿ ಆಯಸ್ಸನ್ನು ಕ್ಷೀಣಗೊಳಿಸಿತು. 


ಎನ್‌ಡಿಎ ತೆಕ್ಕೆಗೆ ಬಿಹಾರ ಸೇರ್ಪಡೆಯಾಗುತ್ತಿದ್ದಂತೆ ಏನಾದರೂ ಆಗಲಿ ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆ ಮಾಡಿಯೇ ಬಿಡಬೇಕು ಅನ್ನೋ ನಿರ್ಧಾರಕ್ಕೆ ಬಿಜೆಪಿ ಚುನಾವಣಾ ಚಾಣಕ್ಯ ಬಂದು ತಲುಪಿದ್ದಾರೆ. 2008ರಲ್ಲಿ ತಮ್ಮ ಕುಟುಂಬ ಹಸ್ತಕ್ಷೇಪದೊಂದಿಗೆ ಅಧಿಕಾರ ಕಳೆದುಕೊಂಡಿದ್ದ ಬಿಎಸ್‌ವೈ ಮತ್ತೊಮ್ಮೆ ಅದೇ ವಿಷಯಕ್ಕೆ ತಮ್ಮ ಬಹುಕಾಲದ ಆಸೆಯಾದ ಮುಖ್ಯಮಂತ್ರಿ ಕುರ್ಚಿಯನ್ನು ಕಳೆದುಕೊಳ್ಳುವ ಹಂತಕ್ಕೆ ಬಂದು ತಲುಪಿದ್ದಾರೆ. 

Ads on article

Advertise in articles 1

advertising articles 2

Advertise under the article