ಮಂಗಳೂರು: ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ ನಿಟ್ಟೆ ವಿನಯ ಹೆಗ್ಡೆ ಅವರ ಜೀವನ ಶೈಲಿ ಎಲ್ಲರಿಗೂ ಆದರ್ಶ, ಅವರ ಕೊಡುಗೆ ಸಮಾಜಕ್ಕೆ ದೊಡ್ಡದು. ಅವರ ನೆನಪು ಶಾಶ್ವತ. ಸರಳ ಸಜ್ಜನಿಕೆಯ ವ್ಯಕ್ತಿತ್ವದ ವಿನಯ ಹೆಗ್ಡೆ ಅವರು ನಮ್ಮೆಲ್ಲರ ಮನಸ್ಸಿನಲ್ಲಿ ಚಿರಕಾಲ ಉಳಿಯುತ್ತದೆ ಎಂದು ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷರಾದ ಕೆ ಅಜಿತ್ ಕುಮಾರ್ ರೈ ಮಾಲಾಡಿ ತಿಳಿಸಿದರು.
ಬಂಟ್ಸ್ ಹಾಸ್ಟೇಲ್ ಶ್ರೀರಾಮಕೃಷ್ಣ ಕಾಲೇಜ್ ಬಳಿ ಇರುವ ಶ್ರೀಮತಿ ಗೀತಾ ಎಸ್ ಎಂ ಶೆಟ್ಟಿ ಸಭಾಂಗಣದಲ್ಲಿ ಇತ್ತೀಚೆಗೆ ಅಗಲಿದ ನಿಟ್ಟೆ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ವಿನಯ ಹೆಗ್ಡೆಯವರಿಗೆ ಸಲ್ಲಿಸಿದ ಶ್ರದ್ದಾಂಜಲಿ ನುಡಿನಮನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ವಿನಯ ಹೆಗ್ಡೆಯವರ ಜೀವನ ಶೈಲಿ ನಮಗೆಲ್ಲರಿಗೂ ಮಾದರಿ. ಅವರಂತೆ ಇನ್ನೋರ್ವ ಬಂಟ ಇಲ್ಲ. ವಿನಯ ಹೆಗ್ಡೆಯವರ ನೆನಪು ನಮ್ಮ ಮನಸ್ಸಿನಲ್ಲಿ ಚಿರಕಾಲ ಉಳಿಯುತ್ತದೆ. ಅವರು ನಡೆದ ಹಾದಿಯಲ್ಲಿ ನಾವು ಮುನ್ನಡೆಯೋಣ ಎಂದರು.
ಕರ್ನಲ್ ಶರಶ್ಚಂದ್ರ ಭಂಡಾರಿ ಮಾತನಾಡಿ ವಿನಯ ಹೆಗ್ಡೆಯವರ ಆದರ್ಶ ಜೀವನ ಒಳ್ಳೆಯ ಗುಣಗಳನ್ನು ನಮ್ಮ ಜೀವನದಲ್ಲಿ ಅಳವಡಿಸೋಣ. ಮಂಗಳೂರು ನಗರದಲ್ಲಿ ವಿನಯ ಹೆಗ್ಡೆಯವರ ಮೂರ್ತಿಯನ್ನು ಪ್ರತಿಷ್ಢಾಪಿಸಿ ಅವರ ಹೆಸರನ್ನು ರಸ್ತೆ ಮತ್ತು ಸರ್ಕಲ್ ಗೆ ಇಡೋಣ ಎಂದರು.
ವಿದ್ಯಾಧರ ಶೆಟ್ಟಿ ಕೊಲ್ನಾಡ್ ಗುತ್ತು ಮಾತನಾಡಿ ವಿನಯ ಹೆಗ್ಡೆಯವರ ನಿಧನ ಸಮಾಜಕ್ಕೆ ತುಂಬಲಾರದ ನಷ್ಟ. ಅವರ ಸರಳ ಬದುಕಿನಲ್ಲಿ ಕೆಲಸದ ಬಗ್ಗೆ ಬದ್ದತೆಯನ್ನು ಕಾಣಬಹುದಿತ್ತು. ಬಂಟ ಸಮಾಜದಲ್ಲಿ ಅವರ ಜೀವನ ವ್ಯರ್ಥ ಆಗಲಿಲ್ಲ ಎಂದರು.
ಬಂಟರ ಯಾನೆ ನಾಡವರ ಮಾತೃ ಸಂಘದ ಪ್ರಧಾನ ಕಾರ್ಯದರ್ಶಿ ಕೆ ಎಂ ಶೆಟ್ಟಿ, ಮಾಜಿ ಮೇಯರ್ ಶಶಿಧರ ಹೆಗ್ಡೆ, ಡಾ ಆಶಾ ಜ್ಯೋತಿ ರೈ ಭಾಸ್ಕರ ರೈ ಕುಕ್ಕುವಳ್ಳಿ ಮಾತನಾಡಿದರು. ಸಂಘದ ಉಪಾಧ್ಯಕ್ಷ ಕಾವು ಹೇಮನಾಥ ಶೆಟ್ಟಿ, ನಿಟ್ಟೆ ಗುತ್ತು ರವಿರಾಜ ಶೆಟ್ಟಿ, ಶೆಡ್ಡೆ ಮಂಜುನಾಥ ಭಂಡಾರಿ, ಉಮೇಶ್ ರೈ ಪದವು ಮೇಗಿನ ಮನೆ, ಕೃಷ್ಣಪ್ರಸಾದ್ ರೈ, ಜಯರಾಮ ಸಾಂತಾ ಮೊದಲಾದವರು ಉಪಸ್ಥಿತರಿದ್ದರು. ಕೆ ಪುರುಷೋತ್ತಮ ಭಂಡಾರಿ ಅಡ್ಯಾರ್ ಕಾರ್ಯಕ್ರಮ ನಿರ್ವಹಿಸಿದರು. ಕಾವು ಹೇಮನಾಥ ಶೆಟ್ಟಿ ವಂದಿಸಿದರು.