ರಜೆ ಮಾಡದ ರಾಜ ಹಾಸ್ಯಗಾರ ವಳಕುಂಜ ಅವರಿಗೆ ಕದ್ರಿ ವಿಷ್ಣು ಪ್ರಶಸ್ತಿ

ರಜೆ ಮಾಡದ ರಾಜ ಹಾಸ್ಯಗಾರ ವಳಕುಂಜ ಅವರಿಗೆ ಕದ್ರಿ ವಿಷ್ಣು ಪ್ರಶಸ್ತಿ

ರಜೆ ಮಾಡದ ರಾಜ ಹಾಸ್ಯಗಾರ ವಳಕುಂಜ ಅವರಿಗೆ ಕದ್ರಿ ವಿಷ್ಣು ಪ್ರಶಸ್ತಿ

ಮಂಗಳೂರು: 27 ವರ್ಷಗಳ ಶ್ರೀ ಕಟೀಲು ಮೇಳದ ತಿರುಗಾಟದಲ್ಲಿ 19 ವರ್ಷ ಒಂದೇ ಒಂದು ರಜೆ ಪಡೆಯದೆ ದಾಖಲೆ ಮಾಡಿರುವ ಅಪೂರ್ವ ಕಲಾರಾಧಕ, ತೆಂಕು ತಿಟ್ಟಿನ ಪ್ರಾತಿನಿಧಿಕ ಯಕ್ಷಗಾನ ರಾಜ ಹಾಸ್ಯಗಾರ ರವಿಶಂಕರ್ ವಳಕುಂಜ ಅವರಿಗೆ "ಕದ್ರಿ ವಿಷ್ಣು ಪ್ರಶಸ್ತಿ -2025" ನೀಡಿ ಗೌರವಿಸಲಾಯಿತು.
ಕಟೀಲು ಕ್ಷೇತ್ರದ ಅನುವಂಶಿಕ ಅರ್ಚಕರಾದ ಲಕ್ಷ್ಮೀ ನಾರಾಯಣ ಆಸ್ರಣ್ಣ ಅವರು ಕಳೆದ 9 ವರ್ಷಗಳಿಂದ ಕದ್ರಿ ದೇವಸ್ಥಾನದ ಅಂಗಣದಲ್ಲಿ ಕಟೀಲು ಮೇಳದ ಸೇವೆ ಬಯಲಾಟ ನಡೆಸಿಕೊಂಡು ಬರುತ್ತಿರುವ ಕದ್ರಿ ಯಕ್ಷ ಬಳಗವು ಕೊಡಮಾಡುವ ಕದ್ರಿ ವಿಷ್ಣು ಪ್ರಶಸ್ತಿ ಪ್ರದಾನಿಸಿದರು.
ಕದ್ರಿ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಡಾ. ಎ. ಜೆ. ಶೆಟ್ಟಿ ಅವರ ಅಧ್ಯಕ್ಷತೆವಹಿಸಿದ್ದರು. ಖ್ಯಾತ ವೈದ್ಯ ಡಾ. ಜಯಶಂಕರ್ ಮಾರ್ಲ, ಲೀಲಾಕ್ಷ ಬಿ. ಕರ್ಕೇರ, ಬೊಂಡಾಲ ಸಚ್ಚಿದಾನಂದ ಶೆಟ್ಟಿ, ಸಿ. ಎಸ್. ಭಂಡಾರಿ, ರವೀಂದ್ರನಾಥ್ ಶೆಟ್ಟಿ, ರವೀಂದ್ರ ಶೇಟ್, ಸುಣ್ಣಂಬಳ ವಿಶ್ವೇಶ್ವರ ಭಟ್, ಜಯಶೀಲ ಅಡ್ಯಂತಾಯ, ಮೂಲ್ಕಿ ಕರುಣಾಕರ ಶೆಟ್ಟಿ, ದಿವಾಕರ ಶೆಟ್ಟಿ ಪರಾರಿ ಗುತ್ತು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡರು.
ಅಭಿನಂದನಾ ಭಾಷಣ ಮಾಡಿದ ಯಕ್ಷ ಬಳಗದ ಅಧ್ಯಕ್ಷ ಕದ್ರಿ ನವನೀತ ಶೆಟ್ಟಿ ಅವರು “ರವಿಶಂಕರ್ ಅವರು, ಹಾಸ್ಯ ರತ್ನ ನಯನ ಕುಮಾರ್, ಉಂಡೆಮನೆ ಶ್ರೀ ಕೃಷ್ಣ ಭಟ್ ಅವರಿಂದ ಯಕ್ಷ ಶಿಕ್ಷಣ ಪಡೆದು ಕಟೀಲು ಮೇಳಕ್ಕೆ ಸೇರಿದ ಮೂರು ವರ್ಷದಲ್ಲೇ ಪ್ರಧಾನ ಹಾಸ್ಯಗಾರರಾಗಿ ಮುನ್ನಡೆದವರು. ಯಕ್ಷಗಾನ ಪ್ರಸಂಗ ದೃಶ್ಯಾವಳಿ, ವಾಚಿಕ ಸಮಾರಾಧನೆ, ಯಕ್ಷ ಪಾತ್ರ ದೀಪಿಕಾ, ಪ್ರಸಂಗ ವಾಚಿಕ, ಯಕ್ಷಗಾನ ಪ್ರಸಂಗಗಳಲ್ಲಿ ನಾರದ, ರಂಗ ನಡೆಗೊಂದು ಕೈಪಿಡಿ ಮೊದಲಾದ ಅನುಭವ ಜನ್ಯ ಅಪೂರ್ವ ಸಾಹಿತ್ಯ ಕೃತಿಗಳನ್ನು ಯಕ್ಷ ರಂಗಕ್ಕೆ ನೀಡಿದ ಯಕ್ಷ ಸಾಹಿತಿ, ಸಂಪಾದಕ, ತಾಳಮದ್ದಳೆ ಅರ್ಥಧಾರಿ, ಸಂಪನ್ಮೂಲ ವ್ಯಕ್ತಿ” ಎಂದು ಶ್ಲಾಘಿಸಿದರು.

ಕದ್ರಿ ವಿಷ್ಣು ಸಂಸ್ಮರಣೆ

ಇಚ್ಲಂಪಾಡಿ, ಕೂಡ್ಲು, ಕೊರಕೋಡು, ಅಡೂರು, ಕುಂಡಾವು, ಕದ್ರಿ, ಧರ್ಮಸ್ಥಳ, ಕಟೀಲು ಮೇಳಗಳಲ್ಲಿ ತೆಂಕು ತಿಟ್ಟಿನ ರಾಜಕಿರೀಟ ವೇಷದಲ್ಲಿ ಅಪೂರ್ವ ಸಾಧನೆ ಗೈದಿದ್ದ, ಅರ್ಜುನ, ಋತುಪರ್ಣ, ಇಂದ್ರಜಿತು, ಹಿರಣ್ಯಾಕ್ಷ ಮೊದಲಾದ ಪಾತ್ರಗಳಲ್ಲಿ ಮೆರೆದಿದ್ದ ಮೇರು ಕಲಾವಿದ ಕದ್ರಿ ವಿಷ್ಣು. ಕಟೀಲು ಮೇಳದ ತಿರುಗಾಟದಿಂದ ನಿವೃತ್ತಿ ಪಡೆಯುವ ಸಂದರ್ಭದಲ್ಲಿ ಕದ್ರಿ ದೇವಸ್ಥಾನದಲ್ಲಿ ಐದು ದಶಕಗಳ ಪೂರ್ವದಲ್ಲಿ ನಡೆದಿದ್ದ ಅದ್ದೂರಿಯ “ಕದ್ರಿ ವಿಷ್ಣು ಸನ್ಮಾನ” ಕಾರ್ಯಕ್ರಮದ ಮೆಲುಕಿನೊಂದಿಗೆ ಸಂಸ್ಮರಣೆ ನಡೆಸಲಾಯಿತು.
ಕದ್ರಿ ಯಕ್ಷ ಬಳಗದ ಗೌರವ ಅಧ್ಯಕ್ಷ ಪ್ರದೀಪ ಕುಮಾರ ಕಲ್ಕೂರ, ತಾರಾನಾಥ ಶೆಟ್ಟಿ ಬೋಳಾರ, ಶಿವ ಪ್ರಸಾದ್ ಪ್ರಭು, ಎಲ್ಲೂರು ರಾಮಚಂದ್ರ ಭಟ್, ಸುಧಾಕರ್ ಶೆಟ್ಟಿ ದೋಣಿಗೆ ಗುತ್ತು, ಕೃಷ್ಣ ಶೆಟ್ಟಿ ತಾರೆಮಾರ್, ಹರೀಶ್ ಕುಮಾರ್, ನಿವೇದಿತಾ ಎನ್ ಶೆಟ್ಟಿ, ಬೆಟ್ಟಂಪಾಡಿ ಸುಂದರ ಶೆಟ್ಟಿ, ಮಧುಸೂದನ ಅಲೆವೂರಾಯ ಉಪಸ್ಥಿತರಿದ್ದರು.
ಪ್ರಧಾನ ಕಾರ್ಯದರ್ಶಿ ಪ್ರದೀಪ್ ಆಳ್ವ ಕದ್ರಿ ಸನ್ಮಾನ ಪತ್ರ ವಾಚಿಸಿದರು. ಕಾರ್ಯಾಧ್ಯಕ್ಷ ಪುರುಷೋತ್ತಮ ಭಂಡಾರಿ ಅಡ್ಯಾರ್ ಕಾರ್ಯಕ್ರಮ ನಿರೂಪಿಸಿದರು. ಸುಧಾಕರ ರಾವ್ ಪೇಜಾವರ ಧನ್ಯವಾದ ಸಮರ್ಪಿಸಿದರು.
ಕಟೀಲು ಮೇಳದವರಿಂದ “ದಶಾವತಾರ” ಯಕ್ಷಗಾನ ಬಯಲಾಟ ಜರಗಿತು.
BREAKING NEWS
Loading latest news...
Join our WhatsApp Channel Powered By : Online Pudu