ನಾದಿನಿ ಮದುವೆ ಮಾಡಿದ್ದಕ್ಕೆ ಬಾವನಿಗೆ ಕೋಪ, ದಿನನಿತ್ಯ ಕರೆ ಮಾಡಿ ಬೆದರಿಕೆ-ಚಿತ್ರಹಿಂಸೆ: ಬೇಸತ್ತು ಮೂವರು ಆತ್ಮಹತ್ಯೆ
ಹರಿಯಾಣ: ನಾದಿನಿಗೆ ಮದುವೆ ಮಾಡಿರುವುದಕ್ಕರ ಕುಪಿತನಾದ ಬಾವನ ಬೆದರಿಕೆಗೆ ಬೇಸತ್ತು ಅತ್ತೆ ತನ್ನ ಇಬ್ಬರು ವಿವಾಹಿತ ಪುತ್ರಿಯರೊಂದಿಗೆ ಆತ್ಮಹತ್ಯೆ ಮಾಡಿಕೊಂಡ ಘಟನೆ ಹರಿಯಾಣದ ಕೈಥಾಲ್ನಲ್ಲಿ ನಡೆದಿದೆ.
ಅತ್ತೆ ಗುಡ್ಡಿ ದೇವಿಯ ಮೃತದೇಹ ಮನೆಯ ಶೌಚಾಲಯದಲ್ಲಿ ಪತ್ತೆಯಾಗಿದ್ದರೆ, ಇಬ್ಬರು ಪುತ್ರಿಯರಾದ ನಿಶಾ ಹಾಗೂ ಪೂಜಾ ಮೃತದೇಹ ಮಲಗುವ ಕೋಣೆಯಲ್ಲಿ ಪತ್ತೆಯಾಗಿದೆ. ಮೂವರನ್ನು ಆತ್ಮಹತ್ಯೆಗೆ ಪ್ರಚೋದಿಸಿರುವ ಆರೋಪ ಈಗ ಅಮೆರಿಕದಲ್ಲಿರುವ ಅಳಿಯ ಜಿತೇಂದ್ರನ ಮೇಲೆ ಬಂದಿದೆ.
ಪೂಜಾ ಪತಿ ಅನಿಲ್ ಈ ಆತ್ಮಹತ್ಯೆಗೆ ಜಿತೇಂದ್ರನೇ ಕಾರಣ ಎಂದು ಆರೋಪಿಸಿದ್ದಾರೆ. 2025ರ ಫೆಬ್ರವರಿಯಲ್ಲಿ ಪೂಜಾ ಹಾಗೂ ಅನಿಲ್ ಮದುವೆಯಾಗಿತ್ತು. ಈ ಮದುವೆ ಆಕೆಯ ಬಾವ ಜಿತೇಂದ್ರನಿಗೆ ಇಷ್ಟವಿರಲಿಲ್ಲ. ಅಂದಿನಿಂದ ಪೂಜಾ, ಆಕೆಯ ಪತಿ ಹಾಗೂ ಆಕೆಯ ಕುಟುಂಬಕ್ಕೆ ನಿರಂತರ ಬೆದರಿಕೆ ಹಾಕುತ್ತಲೇ ಇದ್ದ.
ಜಿತೇಂದ್ರನೊಂದಿಗೆ ಆತನ ಪತ್ನಿ ನಿಶಾಗೆ ಹೊಂದಿಕೆಯಾಗದೆ, ಆಕೆ ತನ್ನ ತವರು ಮನೆ ಸೇರಿದ್ದಳು. ಅನಿಲ್ ಹೇಳಿಕೆ ಪ್ರಕಾರ, ಜಿತೇಂದ್ರ ದಿನನಿತ್ಯವೂ ಹಲವು ಬಾರಿ ಪೂಜಾಗೆ ಕರೆ ಮಾಡಿ ಚಿತ್ರಹಿಂಸೆ ನೀಡುತ್ತಿದ್ದ. ಈ ಒತ್ತಡದಿಂದ ಆಕೆ ಎರಡು ದಿನಗಳ ಹಿಂದೆ ತನ್ನ ತವರು ಮನೆಗೆ ಬಂದಿದ್ದಳು. ಆದರೆ ಜಿತೇಂದ್ರನ ಕಾಲ್ ಮತ್ತು ಮೆಸೇಜ್ಗಳು ಬರುತ್ತಲೇ ಇತ್ತು. ಇವರು ಆತ್ಮಹತ್ಯೆ ಮಾಡಿಕೊಳ್ಳುವ ಸ್ವಲ್ಪ ಮೊದಲು ಕೂಡ ಆತನ ಮೆಸೇಜ್ ಬಂದಿತ್ತು. ಅನಿಲ್ ನೀಡಿರುವ ದೂರಿನ ಆಧಾರದಲ್ಲಿ ಪೊಲೀಸರು ಜಿತೇಂದ್ರನ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ
ಆರೋಪಿ ಜಿತೇಂದ್ರ ಅಮೆರಿಕದಲ್ಲಿ ನೆಲೆಸಿದ್ದು, ಅಲ್ಲಿಂದ ಬೇರೆ ಬೇರೆ ಸಂಖ್ಯೆಗಳಿಂದ ಕರೆ ಮಾಡಿ ಬೆದರಿಕೆ ಮತ್ತು ಸಂದೇಶಗಳನ್ನು ಕಳುಹಿಸುತ್ತಿದ್ದ ಎಂದು ಅನಿಲ್ ಹೇಳಿದ್ದಾರೆ. ಜಿತೇಂದ್ರ ಆಕೆಯನ್ನು ನಿಂದಿಸಿದ್ದಲ್ಲದೆ, ಆಕೆಯ ಸಂಬಂಧಿಕರಿಗೂ ಅದೇ ರೀತಿ ಬೆದರಿಕೆ ಹಾಕಿದ್ದಾನೆ.
ಒಂದು ಸಂಖ್ಯೆ ಬ್ಲಾಕ್ ಮಾಡಿದರೆ ಮತ್ತೊಂದು ಸಂಖ್ಯೆಯಿಂದ ಕಾಲ್ ಮಾಡಿ ಹಿಂಸೆ ಕೊಡುತ್ತಿದ್ದ. ಪೂಜಾಳ ಅಕ್ಕ ನಿಶಾ ಈಗಾಗಲೇ ಕರ್ನಾಲ್ನ ಮಜ್ರಾ ರೋಡನ್ ಗ್ರಾಮದಲ್ಲಿರುವ ತನ್ನ ಅತ್ತೆಯ ಮನೆಯಿಂದ ತನ್ನ ಹೆತ್ತವರ ಮನೆಗೆ ಬಂದಿದ್ದಳು. ಜಿತೇಂದ್ರನ ಕಾಟದಿಂದ ಬೇಸತ್ತು ಮೂವರು ಕೂಡ ತಮ್ಮ ಜೀವನ ಅಂತ್ಯಗೊಳಿಸುವ ತಪ್ಪು ನಿರ್ಧಾರ ಮಾಡಿದ್ದರು.