ಮಲಗಿದ್ದ ಜೋಡಿಯಲ್ಲಿ ಮಹಿಳೆಯನ್ನು ಎಬ್ಬಿಸಿ ಮಂಚಕ್ಕೆ ಕರೆದ: ಪತ್ನಿಯೊಂದಿಗೆ ಜಗಳವಾಡಿ ಮನೆ ತೊರೆದವನು ಬೀದಿ ಹೆಣವಾದ
ಚಿಕ್ಕಬಳ್ಳಾಪುರ: ಇಲ್ಲಿನ ಬಿಬಿ ರಸ್ತೆಯ ಸುಮಾ ಆಗ್ರೋ ಸೀಡ್ಸ್ ಅಂಗಡಿ ಮುಂಭಾಗ ಜೂನ್ 4 ರಂದು ನಡೆದ ಅಂಬೇಡ್ಕರ್ ಕಾಲನಿ ನಿವಾಸಿ ಶ್ರೀಕಾಂತ್ ಕೊಲೆಗೆ ಬಿಗ್ ಟ್ವಿಸ್ಟ್ ದೊರಕಿದ್ದು, ಕೊಲೆಯ ಕಾರಣವನ್ನು ಪೊಲೀಸರು ಬಯಲಿಗೆಳೆದಿದ್ದಾರೆ.
ಕೊಲೆ ನಡೆದ ಸ್ಥಳದಲ್ಲಿನ ಸಿಸಿ ಕ್ಯಾಮರಾ ಪರಿಶೀಲಿಸಿ ದೊಡ್ಡಬಳ್ಳಾಪುರ ಮೂಲದ ನರಸಿಂಹಮೂರ್ತಿ ಅಲಿಯಾಸ್ ಕೆಂಪ ಹಾಗೂ ಆತನ ಪ್ರೇಯಸಿ ತಿಪ್ಪೇನಹಳ್ಳಿ ನಿವಾಸಿ ಲಕ್ಷ್ಮಿದೇವಿಯನ್ನು ಬಂಧಿಸಿ ವಿಚಾರಣೆ ನಡೆಸಿದಾಗ ನಿಜ ಬಯಲಿಗೆ ಬಂದಿದೆ.
ಶ್ರೀಕಾಂತ್ ಕೊಲೆ ನಡೆದ ಸ್ಥಳದಲ್ಲಿ ಸಿಸಿಟಿವಿ ಕ್ಯಾಮರಾಗಳಿದ್ದು, ಓರ್ವ ಮಹಿಳೆ ಹಾಗೂ ಪುರುಷ ಬಂದು ಹೋಗಿರುವ ದೃಶ್ಯ ಸೆರೆಯಾಗಿತ್ತು. ಇದರ ಆಧಾರದಲ್ಲಿ ಪೊಲೀಸರು ತನಿಖೆ ಕೈಗೊಂಡಿದ್ದರು. ನಂತರ ಆರೋಪಿಗಳನ್ನು ಬಂಧಿಸಿದ್ದಾರೆ.
ಶ್ರೀಕಾಂತ್ ಜೂನ್ 3ರಂದು ರಾತ್ರಿ, ಕೆಂಪ ಹಾಗೂ ಲಕ್ಷ್ಮಿ ಮಲಗಿದ್ದ ಜಾಗಕ್ಕೆ ಹೋಗಿದ್ದ. ಅಲ್ಲಿ, ಲಕ್ಷ್ಮಿಯನ್ನು ಎಬ್ಬಿಸಿ ಹಣದ ಆಮಿಷವೊಡ್ಡಿ, ತನ್ನೊಂದಿಗೆ ಲೈಂಗಿಕ ಸಂಪರ್ಕ ಬೆಳೆಸಲು ಕರೆದಿದ್ದಾನೆ. ಆಗ ಆಕೆ ತನ್ನೊಂದಿಗಿದ್ದ ಕೆಂಪನನ್ನು ಎಚ್ಚರಗೊಳಿಸಿದ್ದಾಳೆ. ಆದರೂ ಮಾತು ಕೇಳದ ಶ್ರೀಕಾಂತ್, ಲಕ್ಷ್ಮಿಯ ಮೇಲೆ ಬಲಾತ್ಕಾರಕ್ಕೆ ಯತ್ನಿಸಿದ್ದಾನೆ. ಇದರಿಂದ ಕೆರಳಿದ ಆಕೆಯ ಪ್ರಿಯಕರ ಕೆಂಪ, ಶ್ರೀಕಾಂತ್ನಿಗೆ ಕಲ್ಲಿನಿಂದ ಜಜ್ಜಿ ಮರ್ಮಾಂಗಕ್ಕೆ ಒದ್ದು ಅಲ್ಲಿಂದ ಪರಾರಿಯಾಗಿದ್ದಾನೆ. ಈ ಹಲ್ಲೆಯಿಂದ ಶ್ರೀಕಾಂತ್ ಪ್ರಾಣ ಬಿಟ್ಟಿದ್ದಾನೆ.
ಮನೆಯಲ್ಲಿ ಪತ್ನಿಯಿದ್ದರೂ ಶ್ರೀಕಾಂತ್, ಆಕೆಯೊಂದಿಗೆ ಜಗಳ ಮಾಡಿಕೊಂಡು ಬೀದಿಗೆ ಬಂದಿದ್ದ. ಬೀದಿಯಲ್ಲಿ ಬೇರೊಬ್ಬ ಮಹಿಳೆಯ ಮೇಲೆ ಕಣ್ಣು ಹಾಕಿದ್ದಾನೆ. ಅದುವೇ ಆತನನ್ನು ಸಾವಿನ ಮನೆ ಸೇರುವಂತೆ ಮಾಡಿದೆ.