ಬಂಟ್ವಾಳ: ಸೀಮಂತ ನಿಗದಿಯಾಗಿದ್ದ ಗರ್ಭಿಣಿಯ ಕೊಂದು ಪತಿ ಆತ್ಮಹತ್ಯೆ
Thursday, June 19, 2025
ಮಂಗಳೂರು: ಸೀಮಂತದ ದಿನ ನಿಗದಿಯಾಗಿದ್ದ ಗರ್ಭಿಣಿಯನ್ನು ಕೊಲೆಗೈದು ಪತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ದ.ಕ ಜಿಲ್ಲೆಯ ಬಂಟ್ವಾಳ ತಾಲೂಕಿನ ನಾವೂರು ಬಡಗುಂಡಿಯಲ್ಲಿ ನಡೆದಿದೆ.
ಸಜೀಪಮೂಡ ಗ್ರಾಮದ ಮಿತ್ತಮಜಲು ನಿವಾಸಿ ತಿಮ್ಮಪ್ಪ ಮೂಲ್ಯ ಹಾಗೂ ಪತ್ನಿ ಜಯಂತಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾದ ದಂಪತಿ. ತಿಮ್ಮಪ್ಪ ಮೂಲ್ಯರ ಮೃತದೇಹ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾದರೆ, ಅವರ ಪತ್ನಿ ಜಯಂತಿ ಮೃತದೇಹ ಬೆಡ್ ಮೇಲೆ ಬಿದ್ದಿದ್ದು ಮೃತದೇಹದ ಕುತ್ತಿಗೆ ಭಾಗದಲ್ಲಿ ಗಾಯದ ಗುರುತುಗಳಿವೆ. ಪತ್ನಿಯನ್ನು ಕೊಲೆಗೈದು ಪತಿ ನೇಣಿಗೆ ಶರಣಾಗಿದ್ದಾರೆಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.
ತಿಮ್ಮಪ್ಪ ಮೂಲ್ಯರ ಮನೆ ಮಿತ್ತಮಜಲಿನಲ್ಲಿದ್ದು, ಪತ್ನಿಯ ತವರು ಮನೆ ಬಡಾಗುಂಡಿಯಲ್ಲಿದೆ. ಕಳೆದ 15 ವರ್ಷಗಳ ಹಿಂದೆ ವಿವಾಹವಾಗಿದ್ದ ಇವರಿಗೆ, ಈವರೆಗೆ ಮಕ್ಕಳಾಗಿರಲಿಲ್ಲ. ಸದ್ಯ ಪತ್ನಿ ಜಯಂತಿ ಗರ್ಭಿಣಿಯಾಗಿದ್ದು, ಜು.2ಕ್ಕೆ ಸೀಮಂತದ ದಿನಾಂಕವೂ ನಿಗದಿಯಾಗಿತ್ತು. ಇದೀಗ ತಿಮ್ಮಪ್ಪ ಮೂಲ್ಯರೇ ತಮ್ಮ ಪತ್ನಿಯನ್ನು ಕೊಂದು ಪತಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಅನುಮಾನ ವ್ಯಕ್ತವಾಗಿದೆ. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಇನ್ಸ್ಪೆಕ್ಟರ್ ಶಿವಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.