ಬೆಂಗಳೂರು: ಗೋವಾಕ್ಕೆ ಹನಿಮೂನ್ಗೆ ಕರೆದೊಯ್ದ ಪ್ರಿಯಕರ ಪ್ರೇಯಸಿಯ ಕತ್ತು ಸೀಳಿ ಕೊಲೆ
Thursday, June 19, 2025
ಬೆಂಗಳೂರು: ರಾಜ್ಯ ರಾಜಧಾನಿಯ ಯುವತಿಯೊಬ್ಬಳು ಗೋವಾದಲ್ಲಿ ತನ್ನ ಪ್ರಿಯಕರನಿಂದಲೇ ಕೊಲೆಯಾಗಿದ್ದಾಳೆ. ಕೊಲೆ ಮಾಡಿದ ಆರೋಪಿಯೂ ಬೆಂಗಳೂರಿನವನೇ. ಆದರೆ, ಆರೋಪಿ ಸಿಕ್ಕಿಬಿದ್ದಿದ್ದು ಹುಬ್ಬಳ್ಳಿಯಲ್ಲಿ. ಆತನ ತಾನು ಪ್ರೀತಿಸಿದ ಯುವತಿಯ ಕತ್ತು ಸೀಳಿ ಕೊಲೆ ಮಾಡಿದ ಪ್ರಿಯಕರ ಹುಬ್ಬಳ್ಳಿ ಪೊಲೀಸರ ಕೈಯಲ್ಲಿ ಲಾಕ್ ಆಗಿದ್ದಾನೆ.
ಬೆಂಗಳೂರಿನ ಲಿಂಗರಾಜಪುರ ಬಡಾವಣೆಯ ಡಾನ್ ಬಾಸ್ಕೋ ಶಾಲೆ ಸಮೀಪ ವಾಸವಾಗಿದ್ದ 22ವರ್ಷದ ರೋಶನಿ ಗೋವಾದಲ್ಲಿ ಬರ್ಬರವಾಗಿ ಕೊಲೆಯಾಗಿದ್ದಾರೆ. ಗೋವಾ ರಾಜ್ಯದ ಪೋಂಡಾ ಪೊಲೀಸ್ ಠಾಣಾ ವ್ಯಾಪ್ತಿಯ ಪ್ರತಾಪನಗರ ಬಳಿಯಿರುವ ಅರಣ್ಯ ಪ್ರದೇಶದಲ್ಲಿ ಜೂನ್ 16 ರಂದು ರೋಶನಿ ಮೃತದೇಹ ಪತ್ತೆಯಾಗಿತ್ತು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ಗೋವಾ ಪೊಲೀಸರು, ರೋಶನಿ ಹಿನ್ನೆಲೆ ಕಲೆಹಾಕಲು ಆರಂಭಿಸಿದರು. ಆಗ, ಕೆಲ ದಿನಗಳ ಹಿಂದಷ್ಟೇ ರೋಶನಿ ತಾನು ವಾಸವಾಗಿರುವ ಲಿಂಗರಾಜಪುರ ಬಡಾವಣೆಯ ನಿವಾಸಿಯಾಗಿದ್ದ ಸಂಜಯ್ ಕೇವಿನ್ ಎಂಬುವನೊಂದಿಗೆ ಗೋವಾಕ್ಕೆ ಬಂದಿರುವ ವಿಚಾರ ಗೊತ್ತಾಗಿದೆ.
ರೋಶನಿ ಮತ್ತು ಸಂಜಯ್ ಕೇವಿನ್ ಪರಸ್ಪರ ಪ್ರೀತಿಸುತ್ತಿದ್ದರಂತೆ. ಮದುವೆಯಾಗಲು ಇಬ್ಬರು ನಿರ್ಧರಿಸಿದ್ದರಂತೆ. ಗೋವಾದಲ್ಲಿಯೇ ಮದುವೆಯಾಗಲು ನಿರ್ಧರಿಸಿ ಇಬ್ಬರು ಕೆಲ ದಿನಗಳ ಹಿಂದೆ ಗೋವಾಕ್ಕೆ ಬಂದಿದ್ದರಂತೆ. ಆದರೆ, ಗೋವಾದಲ್ಲಿ ಇಬ್ಬರ ನಡುವೆ ಯಾವುದೋ ಕಾರಣಕ್ಕೆ ಮನಸ್ತಾಪವಾಗಿದೆ. ಇದೇ ಕಾರಣದಿಂದ, ಪ್ರಿಯಕರ ಸಂಜಯ್ ಕೆವಿನ್ ಪ್ರೇಯಸಿ ರೋಶನಿಯನ್ನು ಕತ್ತು ಸೀಳಿ ಕೊಲೆ ಮಾಡಿ, ಗೋವಾ ಹೊರವಲಯದ ಅರಣ್ಯ ಪ್ರದೇಶದಲ್ಲಿ ಶವ ಬಿಸಾಡಿ ಪರಾರಿಯಾಗಿದ್ದಾನೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಗೋವಾದ ಪೋಂಡಾ ಪೊಲೀಸರು, ತನಿಖೆ ಆರಂಭಿಸಿದರು. ಗೋವಾದಲ್ಲಿ ಕೊಲೆ ಮಾಡಿದ್ದ ಆರೋಪಿ, ಹುಬ್ಬಳ್ಳಿಯಲ್ಲಿ ಪೊಲೀಸರ ಬಲೆಗೆ ಬಿದ್ದಿದ್ದಾನೆ. ರೋಶನಿಯನ್ನು ಕೊಲೆ ಮಾಡಿರುವ ಆರೋಪ ಹೊತ್ತಿರುವ ಸಂಜಯ್ ಕೆವಿನ್, ಹುಬ್ಬಳ್ಳಿಯಲ್ಲಿ ಪೊಲೀಸರ ಬಲೆಗೆ ಬಿದ್ದಿದ್ದಾನೆ.
ಸಂಜಯ್ ಕೆವಿನ್ ಜೂನ್ 16 ರಂದು ಹುಬ್ಬಳ್ಳಿ ನಗರದ ಬೆಂಡಿಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದಾಗ, ಪೊಲೀಸರ ಕಣ್ಣಿಗೆ ಬಿದ್ದಿದ್ದಾನೆ. ಅನುಮಾನಗೊಂಡ ಪೊಲೀಸರು ಸಂಜಯ್ ಕೇವಿನ್ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದರು. ಆಗ, ಸಂಜಯ್ ಕೆವಿನ್, ತಾನು ಮೂಲತಃ ಬೆಂಗಳೂರು ನಿವಾಸಿ ಎಂದು ಹೇಳಿದ್ದಾನೆ. ಇನ್ನೊಂದಡೆ, ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದ ಪೋಂಡಾ ಪೊಲೀಸರಿಗೆ, ಆರೋಪಿ ಸಂಜಯ್ ಕೆವಿನ್ನ ಮೊಬೈಲ್ ಟವರ್ ಲೊಕೇಶನ್ ಹುಬ್ಬಳ್ಳಿಯಲ್ಲಿ ತೋರಿಸುತ್ತಿತ್ತು. ಹೀಗಾಗಿ, ಆತನ ಬಗ್ಗೆ ಹುಬ್ಬಳ್ಳಿ ಪೊಲೀಸರಿಗೆ ಪೋಂಡಾ ಪೊಲೀಸರು ಮಾಹಿತಿ ನೀಡಿದ್ದಾರೆ.
ಆಗ, ಬೆಂಡಿಗೇರಿ ಪೊಲೀಸರು ಸಂಜಯ್ ಕೆವಿನ್ನನ್ನು ಹಿಡಿದು ಠಾಣೆಯಲ್ಲಿ ಕೂರಿಸಿಕೊಂಡಿರುವ ಬಗ್ಗೆ ಪೋಂಡಾ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಹುಬ್ಬಳ್ಳಿಗೆ ಆಗಮಿಸಿದ ಪೋಂಡಾ ಪೊಲೀಸರು, ಆರೋಪಿ ಸಂಜಯ್ ಕೆವಿನ್ನನ್ನು ಬಂಧಿಸಿ, ಗೋವಾಕ್ಕೆ ಕರೆದುಕೊಂಡು ಹೋಗಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ಹುಬ್ಬಳ್ಳಿ-ಧಾರವಾಡ ನಗರ ಪೊಲೀಸ್ ಕಮಿಷನರ್ ಎನ್ ಶಶಿಕುಮಾರ್, “ಸಂಜಯ್ ಕೆವಿನ್ನನ್ನು ಬೆಂಡಿಗೇರಿ ಪೊಲೀಸರು ವಶಕ್ಕೆ ಪಡಿದಿದ್ದರು. ಆತ ಕೊಲೆ ಮಾಡಿರುವ ಬಗ್ಗೆ ಗೋವಾ ಪೊಲೀಸರು ಮಾಹಿತಿ ನೀಡಿದ್ದರು. ಆರೋಪಿಯನ್ನು ಈಗಾಗಲೇ ಗೋವಾ ಪೊಲೀಸರಿಗೆ ನೀಡಲಾಗಿದೆ ಎಂದು ಹೇಳಿದರು.
ಪ್ರೀತಿಸಿದ ಹುಡುಗಿಯನ್ನು ಕೊಲೆ ಮಾಡಿ, ತಲೆ ಮರೆಸಿಕೊಂಡಿದ್ದ ಆರೋಪಿ ಹುಬ್ಬಳ್ಳಿಯಲ್ಲಿ ಸಿಕ್ಕಿಬಿದ್ದಿದ್ದಾನೆ. ಗೋವಾ ಪೊಲೀಸರಿಗೆ ಆರೋಪಿ ಹಸ್ತಾಂತರ ಮಾಡಿರುವುದರಿಂದ, ಅಲ್ಲಿನ ಪೊಲೀಸರು ಕೊಲೆ ಬಗ್ಗೆ ಹೆಚ್ಚಿನ ಮಾಹಿತಿ ಸಂಗ್ರಹ ಮಾಡುತ್ತಿದ್ದಾರಂತೆ. ತನಿಖೆ ಪೂರ್ಣಗೊಂಡ ಬಳಿಕ ರೋಶನಿ ಕೊಲೆಗೆ ಅಸಲಿ ಕಾರಣವೇನು ಎಂಬುವುದು ಗೊತ್ತಾಗಲಿದೆ.