ಬೆಂಗಳೂರು ತೊರೆಯಲು ನಿರ್ಧರಿಸಿದ್ದಾರೆ‌ ಈ ಯುವ ಉದ್ಯಮಿ ದಂಪತಿ- ಕಾರಣ ಕೇಳಿದ್ರೆ ಶಾಕ್ ಆಗ್ತೀರಾ (VIDEO)


ಎಲ್ಲರೂ ಉದ್ಯೋಗ ಹರಸುತ್ತಾ ರಾಜ್ಯ ರಾಜಧಾನಿ ಬೆಂಗಳೂರಿನತ್ತ ಬರುತ್ತಾರೆ. ಹೀಗೆ ಬಂದವರಲ್ಲಿ ಕೆಲವರು ದುಬಾರಿ ಬೆಂಗಳೂರಿನಲ್ಲಿ ಬದುಕುವುದು ಕಷ್ಟ, ಆರೋಗ್ಯ ಕೈಕೊಡುತ್ತಿದೆ ಎಂದು ನಾನಾ ಕಾರಣಕ್ಕೆ ಬೆಂಗಳೂರನ್ನು ತೊರೆದಿದ್ದಾರೆ. ಇದೀಗ ಕಳೆದ ಎರಡು ವರ್ಷಗಳಿಂದ ಬೆಂಗಳೂರಿನಲ್ಲಿ ವಾಸವಿರುವ ಯುವ ಉದ್ಯಮಿ ಅಶ್ವಿನ್ ಹಾಗೂ ಅಪರ್ಣಾ ದಂಪತಿ ಬೆಂಗಳೂರನ್ನು ತೊರೆಯುವ ನಿರ್ಧಾರ ಮಾಡಿದ್ದಾರೆ. ತಮ್ಮ ಈ ಕಠಿಣ ನಿರ್ಧಾರಕ್ಕೆ ಮೂಲ ಕಾರಣವೇನು? ಎಂಬುದನ್ನೂ ಇವರು ಹೇಳಿಕೊಂಡಿದ್ದು, ಅದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

zindagified ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋವನ್ನು ಶೇರ್ ಮಾಡಿಕೊಳ್ಳಲಾಗಿದೆ. ಉದ್ಯಮಿ ಅಶ್ವಿನಿ ಹಾಗೂ ಅಪರ್ಣ ದಂಪತಿ ತಾವು ಬೆಂಗಳೂರನ್ನು ತೊರೆದು ಹೋಗುತ್ತಿರುವ ಹಿಂದಿನ ಕಾರಣವನ್ನು ತಿಳಿಸಿದ್ದಾರೆ. ಈ ವಿಡಿಯೋದೊಂದಿಗೆ, ನಾವು ಫೆಬ್ರವರಿಯಲ್ಲಿ, ವಾಯು ಗುಣಮಟ್ಟ ಸೂಚ್ಯಂಕವನ್ನು ಪರಿಶೀಲಿಸಿದಾಗ ಅದು 297 ಕ್ಕೆ ತಲುಪಿರುವುದನ್ನು ನೋಡಿ ಶಾಕ್ ಆದೆವು. ನಮ್ಮ ಬೆಂಗಳೂರು ಅದ್ಭುತ. ಬ್ಯುಸಿನೆಸ್ ಪ್ರಾರಂಭಿಸಲು ಅತ್ಯುತ್ತಮ ಸ್ಥಳವಾಗಿದೆ. ಆದರೆ ನಾವು ಸಾಧ್ಯವಾದಷ್ಟು ಬೇಗ ಬೇರೆ ಆಯ್ಕೆಯನ್ನು ಮಾಡಬೇಕಾಗಿತ್ತು. ಈ ನಗರವು ನಮ್ಮನ್ನು ಮುಳುಗಿಸುವ ಮೊದಲು, ನಾವು ಬೆಂಗಳೂರು ತೊರೆದಿದ್ದೇವೆ” ಎಂದು ಶೀರ್ಷಿಕೆಯಲ್ಲಿ ಬರೆದುಕೊಂಡಿದ್ದಾರೆ.

ಈ ಇಬ್ಬರೂ ಕಾರ್ಪೋರೇಟ್ ಕಂಪೆನಿಯಲ್ಲಿ ಕೆಲಸ ಮಾಡಿದ್ದು, ತಮ್ಮದೇ ಬ್ಯುಸಿನೆಸ್ ಕೂಡ ಇದೆ. ಆದರೆ ಬೆಂಗಳೂರಿನ ಗಾಳಿಯ ಗುಣಮಟ್ಟ ಹದಗೆಡುತ್ತಿರುವುದೇ ತಾವು ಬೆಂಗಳೂರನ್ನು ತ್ಯಜಿಸಲು ಮುಖ್ಯ ಕಾರಣ ಎಂದಿದ್ದಾರೆ. ಈ ವಿಡಿಯೋದ ಪ್ರಾರಂಭದಲ್ಲಿ ಈ ದಂಪತಿಗಳು ನೀವು ನಮ್ಮನ್ನು ದ್ವೇಷಿಸಬಹುದು. ಆದರೆ ಬೆಂಗಳೂರು ನಿಧಾನವಾಗಿ ನಮ್ಮನ್ನು ಕೊಲ್ಲುತ್ತಿದೆ ಎನ್ನುವ ಕಹಿ ಸತ್ಯವನ್ನು ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ತಾಜಾ ಗಾಳಿ ಮತ್ತು ಉತ್ತಮ ಹವಾಮಾನವಿದೆ ಎಂದು ಹೆಚ್ಚಿನವರು ಹೇಳುತ್ತಾರೆ. ಆದರೆ, ನಾವು ಇಲ್ಲಿಗೆ ಬಂದ ಬಳಿಕ ಅನಾರೋಗ್ಯಕ್ಕೆ ಒಳಗಾಗಲು ಪ್ರಾರಂಭಿಸಿದೆವು. ನನಗೆ ಉಸಿರಾಟದ ತೊಂದರೆ ಮತ್ತು ಅಲರ್ಜಿಗಳು ಬಂದವು” ಎಂದು ಅಶ್ವಿನ್ ಹೇಳಿದರೆ, ಶೀತ ಕೂಡ ಬರದ ನನಗೆ ಇಲ್ಲಿಗೆ ಬಂದ ಬಳಿಕ ಕೆಮ್ಮು, ನೆಗಡಿ ಹಾಗೂ ಜ್ವರದಿಂದ ಬಳಲುತ್ತಿದ್ದೇನೆ ಎಂದಿದ್ದಾರೆ ಅಪರ್ಣ. ಬೆಂಗಳೂರಿನ ಗಾಳಿಯ ಗುಣಮಟ್ಟವು ತಮ್ಮ ಸಮಸ್ಯೆಗಳಿಗೆ ಮೂಲ ಕಾರಣ ಎಂದು ನಮಗೆ ಅರಿವಿಗೆ ಬಂದಿತು. ಹೀಗಾಗಿ ಈ ಬೆಂಗಳೂರನ್ನು ತ್ಯಜಿಸಲು ನಿರ್ಧರಿಸಿದೆವು ಎಂದಿದ್ದಾರೆ.

ಈ ವಿಡಿಯೋವೊಂದು ಒಂಭತ್ತು ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡಿದ್ದು, ಬಳಕೆದಾರರು ಈ ದಂಪತಿಗಳ ನಿರ್ಧಾರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಬಳಕೆದಾರರೊಬ್ಬರು, ನಿಮ್ಮ ನಿರ್ಧಾರರಿಂದ ಬೆಂಗಳೂರಿಗರಿಗೆ ಖುಷಿಯಾಯಿತು, ನೀವು ಇನ್ನಷ್ಟು ಜನರಿಗೆ ಸ್ಫೂರ್ತಿಯಾಗಿ ಎಂದಿದ್ದಾರೆ. ಮತ್ತೊಬ್ಬರು, ಉತ್ತಮ ನಿರ್ಧಾರ, ಈ ವಿಚಾರವನ್ನು ಎಲ್ಲೆಡೆ ತಿಳಿಸಿ, ನಿಮ್ಮೊಂದಿಗೆ ಎಲ್ಲರನ್ನು ಕರೆದುಕೊಂಡು ಹೋಗಿ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, ಮತ್ತೆ ಈ ಬೆಂಗಳೂರಿಗೆ ಬರಬೇಡಿ ಎಂದು ಹೇಳಿದ್ದಾರೆ.

BREAKING NEWS
Loading latest news...
Join our WhatsApp Channel Powered By : Online Pudu