-->
ಸೋನಂ ತನ್ನ ಮೊಬೈಲ್‌ನಿಂದ 234ಬಾರಿ ಫೋನ್ ಕರೆಮಾಡಿದ ಸಂಜಯ್ ವರ್ಮ ಯಾರು ಗೊತ್ತಾ?: ಕೊನೆಗೂ ಮೇಘಾಲಯ ಹನಿಮೂನ್ ಪ್ರಕರಣ ಬಯಲು

ಸೋನಂ ತನ್ನ ಮೊಬೈಲ್‌ನಿಂದ 234ಬಾರಿ ಫೋನ್ ಕರೆಮಾಡಿದ ಸಂಜಯ್ ವರ್ಮ ಯಾರು ಗೊತ್ತಾ?: ಕೊನೆಗೂ ಮೇಘಾಲಯ ಹನಿಮೂನ್ ಪ್ರಕರಣ ಬಯಲು


ಮೇಘಾಲಯ ಹನಿಮೂನ್ ಕೊಲೆ ಪ್ರಕರಣ ದೇಶದಲ್ಲಿ ಭಾರೀ ಚರ್ಚೆ ಹುಟ್ಟು ಹಾಕಿದ್ದು ಎಲ್ಲರಿಗೂ ಗೊತ್ತಿದೆ. ಹನಿಮೂನ್ ಹೆಸರಿನಲ್ಲಿ ತನ್ನ ಪತಿ ರಾಜಾ ರಘುವಂಶಿಯನ್ನು ಮೇಘಾಲಯಕ್ಕೆ ಕರೆದೊಯ್ದ ಪತ್ನಿ ಸೋನಂ, ಸುಪಾರಿ ಹಂತಕರಿಂದ ಕೊಲೆ ಮಾಡಿಸಿದಳು. ಅಲ್ಲದೆ, ಮೃತದೇಹವನ್ನು ಕಣಿವೆಗೆ ಎಸೆಯಲು ಸಹಾಯ ಮಾಡಿದಳು. ಈ ಸುದ್ದಿ ದೇಶದೆಲ್ಲೆಡೆ ಸಂಚಲನ ಮೂಡಿಸಿ, ಎಲ್ಲರನ್ನೂ ಬೆಚ್ಚಿಬೀಳಿಸಿತು. ಸೋನಂ ತನ್ನ ಪ್ರಿಯಕರನಿಗಾಗಿ ಈ ದುಷ್ಕೃತ್ಯ ಎಸಗಿದ್ದಾಳೆ. ಇದೀಗ ಈ ಪ್ರಕರಣದ ತನಿಖೆಯಲ್ಲಿ ಮತ್ತೊಂದು ಸ್ಫೋಟಕ ಸಂಗತಿಗಳು ಬೆಳಕಿಗೆ ಬಂದಿದೆ.

ಆರೋಪಿ ಸೋನಂ ರಘುವಂಶಿ ಮದುವೆಗೂ ಮುನ್ನ ಮತ್ತು ಆ ಬಳಿಕ ಓರ್ವ ವ್ಯಕ್ತಿಯೊಂದಿಗೆ 234 ಬಾರಿ ಫೋನ್ ಕರೆಯಲ್ಲಿ ಮಾತನಾಡಿರುವ ವಿಚಾರ ಬೆಳಕಿಗೆ ಬಂದಿದೆ. ಕರೆ ದಾಖಲೆಗಳ ಪ್ರಕಾರ, ಮಾರ್ಚ್ 1ರಿಂದ ಎ.8ರವರೆಗೆ 39ದಿನಗಳ ಅವಧಿಯಲ್ಲಿ ಸೋನಂ ಮತ್ತು ಆ ವ್ಯಕ್ತಿ 234 ಕರೆಗಳನ್ನು ವಿನಿಮಯ ಮಾಡಿಕೊಂಡಿದ್ದಾರೆ. ಪೊಲೀಸರು ತನಿಖೆ ನಡೆಸಿದಾಗ ಆ ಫೋನ್ ನಂಬ‌ರ್ ಸಂಜಯ್ ವರ್ಮ ಎಂಬ ಮಾಹಿತಿ ದೊರಕಿದೆ. ಪ್ರಸ್ತುತ ಸಂಜಯ್ ಫೋನ್ ನಂಬರ್ ಸ್ವಿಚ್ ಆಫ್ ಆಗಿದ್ದು, ಈ ವ್ಯಕ್ತಿ ಯಾರು, ಸೋನಂಗೂ ಈತನಿಗೂ ಏನು ಸಂಬಂಧ, ರಾಜಾ ರಘುವಂಶಿ ಕೊಲೆ ಪ್ರಕರಣದಲ್ಲಿ ಈತನ ಪಾತ್ರ ಇದೆಯೇ ಎಂಬ ಆಯಾಮದಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದರು. ಕೊನೆಗೂ ಸಂಜಯ್ ವರ್ಮ ಯಾರು ಎಂಬ ನಿಗೂಢ ಬಯಲಾಗಿದೆ.

ಪ್ರಕರಣದ ತನಿಖೆ ನಡೆಸುತ್ತಿರುವ ಮೇಘಾಲಯ ಪೊಲೀಸರು, ಸಂಜಯ್ ವರ್ಮ ಬೇರಾರೂ ಅಲ್ಲ, ಆತ ಸೋನಂನ ಪ್ರೇಮಿ ರಾಜ್ ಕುಶ್ವಾಹ ಎಂಬ ಸತ್ಯ ಬಯಲಾಗಿದೆ. ಸೋನಂ ತನ್ನ ಫೋನ್‌ನಲ್ಲಿ ರಾಜ್ ಕುಶ್ವಾಹ ನಂಬ‌ರ್ ಅನ್ನು ಸಂಜಯ್ ವರ್ಮ ಹೆಸರಿನಲ್ಲಿ ಸೇವ್ ಮಾಡಿಕೊಂಡಿದ್ದಳು. ಯಾವುದೇ ಅನುಮಾನ ಬರಬಾರದೆಂದು ಈ ರೀತಿ ಮಾಡಿದ್ದಳು ಎಂದು ಪೊಲೀಸರು ನಂಬಿದ್ದಾರೆ.

ಪ್ರಕರಣದ ಎಲ್ಲ ಆರೋಪಿಗಳನ್ನು ಬಂಧಿಸಿ ಪೊಲೀಸರ ಮುಂದೆ ಶರಣಾದ ದಿನ ಜೂನ್ 8 ರಂದು ಸಂಜಯ್ ವರ್ಮ ಮೊಬೈಲ್ ಸಂಖ್ಯೆ ಕೊನೆಯ ಬಾರಿಗೆ ವಾಟ್ಸಾಪ್‌ನಲ್ಲಿ ಸಕ್ರಿಯವಾಗಿತ್ತು. ಜೂನ್ 18ರಂದು ಸೋನಂ ಸಹೋದರ ಗೋವಿಂದ್ ಅವರು ಸಂಜಯ್ ಹೆಸರಿನ ಯಾವುದೇ ವ್ಯಕ್ತಿಯ ಪರಿಚಯ ನಮಗಿಲ್ಲ ಎಂದು ಹೇಳಿದರು. ಆದರೆ, ಸಂಜಯ್ ಬೇರೆ ಯಾರೂ ಅಲ್ಲ, ಅದು ರಾಜ್ ಕುಶ್ವಾಹ್ ಎಂದು ಬಯಲಾಗಿದೆ. ಪ್ರಕರಣದ ದಿಕ್ಕು ತಪ್ಪಿಸಲು ಸೋನಂ ಹೆಸರು ಬದಲಾಯಿಸಿದ್ದಳು. ಅಲ್ಲಿಗೆ ಇಡೀ ಪ್ರಕರಣದ ಪ್ರಮುಖ ಸಂಚುಕೋರರು ಸೋನಂ ಮತ್ತು ರಾಜ್ ಕುಶ್ವಾಹ್ ಎಂದು ಬಯಲಾಗಿದ್ದು, ಈ ಪ್ರಕರಣ ಕೊನೆಗೂ ಇತ್ಯರ್ಥಗೊಂಡಿದೆ.

ಪ್ರಕರಣದ ಹಿನ್ನೆಲೆ ಏನು?

ಮಧ್ಯಪ್ರದೇಶದ ಇಂದೋರ್ ಮೂಲದ ರಾಜಾ ರಘುವಂಶಿ ಮತ್ತು ಸೋನಂನ ವಿವಾಹ ಮೇ 11 ರಂದು ನಡೆದಿತ್ತು. ಮೇ 20ರಂದು ದಂಪತಿ ಹನಿಮೂನ್‌ಗಾಗಿ ಮೇಘಾಲಯಕ್ಕೆ ತೆರಳಿದರು. ಆರಂಭದಲ್ಲಿ, ಅವರು ಜಮ್ಮು ಮತ್ತು ಕಾಶ್ಮೀರಕ್ಕೆ ಹೋಗಲು ಯೋಜಿಸಿದ್ದರು. ಆದರೆ, ಪಹಲ್ಗಾಮ್ ಭಯೋತ್ಪಾದಕ ದಾಳಿ ನಡೆದಿದ್ದರಿಂದ ಮೇಘಾಲಯಕ್ಕೆ ತಮ್ಮ ಪ್ಲಾನ್ ಬದಲಾಯಿಸಿದರು. ಮೇ 23 ರಂದು ತಮ್ಮ ವಸತಿಗೃಹದಿಂದ ಸ್ಕೂಟಿಯಲ್ಲಿ ಹೊರಟ ರಾಜಾ ಸೂರ್ಯವಂಶಿ ಹಾಗೂ ಸೋನಂ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದರು. ಸ್ಕೂಟರ್ ಒಂದು ಹಳ್ಳಿಯ ಹೊರವಲಯದಲ್ಲಿ ಪತ್ತೆಯಾಗಿತ್ತು. ಆದರೂ, ಅವರು ಕಣ್ಮರೆಯಾದ 11 ದಿನಗಳ ಬಳಿಕ (ಜೂನ್ 2 ರಂದು), ಪೊಲೀಸರು ರಘುವಂಶಿ ಅವರ ಶವವನ್ನು ಸೊಹ್ರಾದಲ್ಲಿನ ಜಲಪಾತದ ಬಳಿಯ ಆಳವಾದ ಕಣಿವೆಯಲ್ಲಿ ಪತ್ತೆ ಮಾಡಿದ್ದರು.

ರಾಜಾ ಸೂರ್ಯವಂಶಿ ಮೃತದೇಹದ ಮೇಲೆ ಚಾಕುವಿನಿಂದಾದ ಗಾಯಗಳಿದ್ದ ಕಾರಣ, ಪೊಲೀಸರು ಇದೊಂದು ಕೊಲೆ ಎಂದು ಶಂಕಿಸಿದ್ದರು. ಸೋನಂ ಎಲ್ಲಿದ್ದಾರೆಂದು ಪತ್ತೆಯಾಗದ ಕಾರಣ ಎಲ್ಲರೂ ಭಯಭೀತರಾಗಿದ್ದರು. ಈ ಮಧ್ಯೆ, ವಿಶೇಷ ಪಡೆ ಆಕೆಗಾಗಿ ಕಾಡಿನಲ್ಲಿ ಹುಡುಕಾಟ ನಡೆಸಿತು. ಮತ್ತೊಂದೆಡೆ, ಪೊಲೀಸರು ಪ್ರಕರಣದ ತನಿಖೆಯ ವೇಗವನ್ನು ಹೆಚ್ಚಿಸಿದರು.

ಸೋನಂ ಮತ್ತು ಕುಶ್ವಾಹ ಅವರ ಯೋಜನೆಯಂತೆಯೇ ಎಲ್ಲವೂ ನಡೆದಿತ್ತು. ಆದರೆ, ಕೊಲೆಗೆ ಅವರು ಬಳಸಿದ್ದ ಹರಿತವಾದ ಆಯುಧ ಎಲ್ಲವನ್ನೂ ತಲೆಕೆಳಗು ಮಾಡಿತು. ರಘುವಂಶಿ ಕೊಲೆ ಪ್ರಕರಣದ ತನಿಖೆಯ ಸಮಯದಲ್ಲಿ, ಸೋನಂ ಜೀವಂತವಾಗಿದ್ದಾಳೆ ಎಂಬ ಅನುಮಾನ ಮೂಡಿತು. ಅಲ್ಲದೆ, ಆಕೆಯೇ ಕೊಲೆ ಮಾಡಿರಬಹುದು ಎಂಬ ಅನುಮಾನವನ್ನು ಹುಟ್ಟುಹಾಕಿತು. ಸಾಮಾನ್ಯವಾಗಿ, ಮೇಘಾಲಯದಲ್ಲಿ ಅಂತಹ ಆಯುಧವನ್ನು ಬಳಸಲಾಗುವುದಿಲ್ಲ. ಹೀಗಾಗಿ ಹೊರಗಿನವರು ಭಾಗಿಯಾಗಿರುವ ಬಗ್ಗೆ ಪೊಲೀಸರಿಗೆ ಅನುಮಾನ ಮೂಡಿತು. ಬಳಿಕ ಕರೆ ದಾಖಲೆಗಳನ್ನು ಪರಿಶೀಲಿಸಿದಾಗ ಸೋನಂ, ರಾಜ್ ಕುಶ್ವಾಹ ಜತೆ ನಿಯಮಿತವಾಗಿ ಸಂಪರ್ಕದಲ್ಲಿರುವುದು ತಿಳಿದು ಬಂದಿದೆ. ಸೋನಮ್ ಅವರು ರಾಜಾ ರಘುವಂಶಿ ಅವರ ತಾಯಿಯೊಂದಿಗೆ ಮಾತನಾಡಿದ ಕೊನೆಯ ಮಾತುಗಳು ಸಹ ಪೊಲೀಸರಿಗೆ ಅನುಮಾನ ಉಂಟುಮಾಡಿದವು. ಅಲ್ಲದೆ, ಅವರಿಬ್ಬರೂ ಒಟ್ಟಿಗೆ ಇರುವ ಫೋಟೋಗಳ ಯಾವುದೇ ಸ್ಟೇಟಸ್‌ಗಳನ್ನು ಪೋಸ್ಟ್ ಮಾಡದ ಕಾರಣ ಅನುಮಾನಗಳು ಇನ್ನಷ್ಟು ಬಲಗೊಂಡವು.

ಅಂದಹಾಗೆ, ಸೋನಂ ತನ್ನ ತಂದೆಯ ಕಂಪೆನಿಯಲ್ಲಿ ಕೆಲಸ ಮಾಡುವ ರಾಜ್ ಕುಶ್ವಾಹನನ್ನು ಪ್ರೀತಿಸುತ್ತಿದ್ದಳು. ಆದರೆ, ಆ ಬಗ್ಗೆ ಹಿರಿಯರಲ್ಲಿ ಹೇಳುವ ಧೈರ್ಯ ಅವರಿಗಿರಲಿಲ್ಲ. ಆದ್ದರಿಂದ, ಅವಳು ರಾಜಾ ರಘುವಂಶಿಯನ್ನು ಮದುವೆಯಾದಳು. ಬಳಿಕ ತಮ್ಮ ಪ್ರೇಮಕ್ಕೆ ರಘುವಂಶಿ ಅಡ್ಡಿಯಾಗುತ್ತಾನೆಂದು ಭಾವಿಸಿ, ಆತನನ್ನು ಕೊಲ್ಲಲು ಸೋನಂ ಮತ್ತು ಕುಶ್ವಾಹ ಸಂಚು ರೂಪಿಸಿದರು. ಅದನ್ನು ಕಾರ್ಯಗತಗೊಳಿಸಲು, ಸುಪಾರಿ ಹಂತಕರನ್ನು ಏರ್ಪಡಿಸಿದರು. ಸೋನಂ ಮೇಘಾಲಯಕ್ಕೆ ಹನಿಮೂನ್ ಪ್ಲಾನ್ ಮಾಡಿದಳು. ಆದರೆ, ಕುಶ್ವಾಹ ಮೇಘಾಲಯಕ್ಕೆ ಹೋಗಲಿಲ್ಲ. ಬದಲಾಗಿ ಫೋನ್‌ನಲ್ಲಿ ಸೋನಂನೊಂದಿಗೆ ಸಂಪರ್ಕದಲ್ಲಿದ್ದನು. 

ಯೋಜನೆಯ ಪ್ರಕಾರ, ಸೋನಂ, ರಾಜಾ ರಘುವಂಶಿಯನ್ನು ಚಿರಾಪುಂಜಿಯ ಸಂಚಾರವಿಲ್ಲದ ರಸ್ತೆಗೆ ಕರೆದೊಯ್ದಳು. ಅಲ್ಲಿ, ಸುಪಾರಿ ಹಂತಕರು ಆತನನ್ನು ಕೊಂದಿದ್ದಾರೆ. ಬಳಿಕ, ಸೋನಂ ಸೇರಿದಂತೆ ಮೂವರು ಆರೋಪಿಗಳು ಅಸ್ಸಾಂನ ಗುವಾಹಟಿಗೆ ಹೋಗಿ, ಅಲ್ಲಿಂದ ಬೇರೆ ಬೇರೆಯಾದರು. ಈ ನಡುವೆ ಸೋನಂ, ಪೊಲೀಸರಿಗೆ ರಘುವಂಶಿಯನ್ನು ತಾನು ಕೊಂದಿಲ್ಲ, ಬದಲಿಗೆ ಯಾರೋ ಅವರನ್ನು ಅಪಹರಿಸಿದ್ದಾರೆ ಎಂದು ಹೇಳಿದಳು. ಆದರೆ, ತನಿಖೆಯಲ್ಲಿ ಆಕೆಯ ಕಳ್ಳಾಟ ಎಲ್ಲವು ಬಯಲಾಯಿತು. ಕೊನೆಗೂ ಸೋನಂ ಕೂಡ ತನ್ನ ತಪ್ಪನ್ನು ಒಪ್ಪಿಕೊಂಡಳು.

ಮತ್ತೊಂದೆಡೆ, ಈ ಪ್ರಕರಣದಲ್ಲಿ ಇಂದೋರ್‌ನ ವಿಶಾಲ್ ಸಿಂಗ್ ಚೌಹಾಣ್ (22), ಉತ್ತರ ಪ್ರದೇಶದ ಲಲಿತಪುರದ ರಾಜ್ ಸಿಂಗ್ ಕುಶ್ವಾಹ (21) ಮತ್ತು ಆಕಾಶ್ ರಜಪೂತ್ (19) ಎಂಬುವರನ್ನು ಬಂಧಿಸಲಾಗಿದೆ. 

Ads on article

Advertise in articles 1

advertising articles 2

Advertise under the article