ಮಂಗಳೂರು: ಐದನೇ ಅಂತಸ್ತಿನಿಂದ ಬಿದ್ದು 13ವರ್ಷದ ವಿದ್ಯಾರ್ಥಿ ಮೃತ್ಯು


ಮಂಗಳೂರು: 13ವರ್ಷದ ಬಾಲಕನೋರ್ವನು ಐದನೇ ಮಹಡಿಯಿಂದ ಆಕಸ್ಮಿಕವಾಗಿ ಬಿದ್ದು ಗಂಭೀರವಾಗಿ ಗಾಯಗೊಂಡು ಮೃತಪಟ್ಟ ಘಟನೆ ಶನಿವಾರ ಬೆಳಗ್ಗೆ ನಗರದ ಮೇರಿಹಿಲ್‌ನ ಮಾತಾ ರೆಸಿಡೆನ್ಸಿಯಲ್ಲಿ ನಡೆದಿದೆ.




ಇರಾ ಕಿನ್ನಿಮಜಲು ಬೀಡು ಸುದೇಶ್ ಭಂಡಾರಿ ಎಂಬವರ ಪುತ್ರ ಸಮರ್ಜಿತ್ ಭಂಡಾರಿ (13) ಮೃತಪಟ್ಟ ಬಾಲಕ. ಈತ ಮೇರಿಹಿಲ್‌ನ ಮೌಂಟ್ ಕಾರ್ಮೆಲ್ ಸೆಂಟ್ರಲ್ ಸ್ಕೂಲ್‌ನಲ್ಲಿ 6ನೇ ತರಗತಿ ವ್ಯಾಸಂಗ ಮಾಡುತ್ತಿದ್ದ.

ಶನಿವಾರ ಬೆಳಗ್ಗೆ 5.30 - 6.50ರ ನಡುವೆ ಸಮರ್ಜಿತ್ ಯಾವುದೋ ಕಾರಣಕ್ಕೆ ಅಪಾರ್ಟ್ಮೆಂಟ್ 5ನೇ ಮಹಡಿಗೆ ಹೋಗಿದ್ದಾನೆ. ಅಲ್ಲಿಂದ ಆಕಸ್ಮಿಕವಾಗಿ ಕೆಳಕ್ಕೆ ಬಿದ್ದಿದ್ದಾನೆ. ಪರಿಣಾಮ ತಲೆ ಮತ್ತು ಬೆನ್ನು ಮೂಳೆಗೆ ತೀವ್ರ ಪೆಟ್ಟುಬಿದ್ದು ಗಂಭೀರ ಗಾಯಗೊಂಡಿದ್ದನು. ತಕ್ಷಣ ಆತನನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ 6.57ರ ವೇಳೆಗೆ ಆತ ಮೃತಪಟ್ಟಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಕಾವೂರು ಠಾಣೆಯಲ್ಲಿ ಬಿಎನ್‌ಎಸ್ ಕಾಯ್ದೆ 194ರಡಿ ಅಸಹಜ ಸಾವು ಪ್ರಕರಣ ದಾಖಲಾಗಿದೆ..




ಬಾಲಕ ಬೀಳುವ ಒಂದು ಹಂತದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಆದರೆ ಮಹಡಿ ಮೇಲಿನ ದೃಶ್ಯಗಳು ಕ್ಯಾಮರಾದಲ್ಲಿಲ್ಲ. ಆದ್ದರಿಂದ ಆತ ಬೀಳಲು ಕಾರಣವೇನು ಎಂಬುದು ಇನ್ನೂ ನಿಗೂಢವಾಗಿದೆ.

ಸಮರ್ಜಿತ್ ಚುರುಕಿನ ಹುಡುಗನಾಗಿದ್ದು, ಕಲಿಕೆಯಲ್ಲೂ ಮುಂದಿದ್ದ. ಈಜು, ಕೀಬೋರ್ಡ್ ಸೇರಿದಂತೆ ವಿವಿಧ ಪಠೇತರ ಚಟುವಟಿಕೆಗಳಲ್ಲೂ ತೊಡಗಿಸಿಕೊಂಡು ಬಹುಮಾನಗಳನ್ನು ಪಡೆಯುತ್ತಿದ್ದ. ಸಣ್ಣ ವಯಸ್ಸಿನಲ್ಲಿಯೇ ಯೂಟ್ಯೂಬ್ ವೀಡಿಯೋ ಮಾಡುವ ಮೂಲಕ ಎಲ್ಲರ ಮೆಚ್ಚುಗೆ ಪಡೆದಿದ್ದ. ತಂದೆ, ತಾಯಿ ಮತ್ತು ತಂಗಿಯನ್ನು ಅಗಲಿದ್ದಾನೆ.
BREAKING NEWS
Loading latest news...
Join our WhatsApp Channel Powered By : Online Pudu