ಮಂಗಳೂರು: ಬೆಳಗಾವಿಯ ಸುವರ್ಣಸೌಧದಲ್ಲಿ ವಿಧಾನ ಪರಿಷತ್ತಿನ ಕಲಾಪದಲ್ಲಿ ಎಂಎಲ್ಸಿ ಐವನ್ ಡಿಸೋಜ ಅವರು ಮಂಗಳೂರಿನಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಯ ಧ್ವನಿ ಎತ್ತಿದ್ದಾರೆ.
ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಕೊಡಗು ಜಿಲ್ಲೆಗಳ ವ್ಯಾಪ್ತಿಗೊಳಪಡುವ ಉಚ್ಚ ನ್ಯಾಯಾಲಯ ಪೀಠವನ್ನು ಮಂಗಳೂರಿನಲ್ಲಿ ಸ್ಥಾಪನೆ ಮಾಡುವಂತೆ ಐವನ್ ಡಿಸೋಜ ಸದನದ ಗಮನ ಸೆಳೆದು ಸರ್ಕಾರಕ್ಕೆ ಒತ್ತಾಯಿಸಿದರು.
ಒಂದು ಲಕ್ಷದವರೆಗೆ ಕೇಸುಗಳು ಬಾಕಿಯಿವೆ. ಈ ಕೇಸುಗಳ ಇತ್ಯರ್ಥಕ್ಕೆ ಹೈಕೋರ್ಟ್ಗೆ ಹೋಗಬೇಕಾದರೆ 380ಕಿ.ಮೀ. ದೂರ ಬೆಂಗಳೂರಿಗೆ ಹೋಗಬೇಕಾಗುತ್ತದೆ. ಜನರಿಗೆ ನ್ಯಾಯ ಬಹಳ ಸುಲಭವಾಗಿ, ಕಡಿಮೆ ವೆಚ್ಚದಲ್ಲಿ ಮನೆಬಾಗಿಲಿಗೆ ಬರುವಂತಾಗಬೇಕು ಎಂಬುದು ಸರಕಾರದ ನೀತಿ. ನಮ್ಮ ರಾಜ್ಯದಲ್ಲಿ ಮೂರು ಹೈಕೋರ್ಟ್ಗಳಿದ್ದು, ಧಾರವಾಡ ಹಾಗೂ ಕಲಬುರಗಿಯಲ್ಲಿ ಎರಡು ವಿಭಾಗೀಯ ಪೀಠಗಳಿವೆ. ಧಾರವಾಡ ಹಾಗೂ ಕಲಬುರಗಿಯಲ್ಲಿ 30ಸಾವಿರ ಕೇಸ್ಗಳಿದ್ದರೆ, ಕರಾವಳಿ ಜಿಲ್ಲೆಗಳಲ್ಲಿ 70ಸಾವಿರ ಕೇಸ್ಗಳಿವೆ. ಆದ್ದರಿಂದ ಹೈಕೋರ್ಟ್ ಪೀಠ ಮಂಗಳೂರಿನಲ್ಲಿ ಸ್ಥಾಪನೆಯಾಗಬೇಕೆಂದು ಐವನ್ ಡಿಸೋಜ ಮನವಿ ಮಾಡಿದರು.