ಬೇಡಿಕೆ ಈಡೇರದಿದ್ದರೆ ಸೆ.5ರಿಂದ ಕೆಲಸ ಸ್ಥಗಿತ: ಪಾಲಿಕೆಗಳ ನೌಕರರ ನಿರ್ಧಾರ


ಬೆಂಗಳೂರು: ರಾಜ್ಯ ಸರ್ಕಾರ 10 ಮನಪಾಗಳ ನೌಕರರ ಬೇಡಿಕೆ ಈಡೇರಿಸದಿದ್ದರೆ ಸೆ.5ರಿಂದ ಕೆಲಸ ಸ್ಥಗಿತಗೊಳಿಸಲು ಕರ್ನಾಟಕ ರಾಜ್ಯ ಮನಪಾ ನೌಕರರ ಸಂಘ ತೀರ್ಮಾನಿಸಿದೆ.

ವೃಂದ ಮತ್ತು ನೇಮಕಾತಿ ನಿಯಮಗಳ ತಿದ್ದುಪಡಿ ಮತ್ತು ಪಾಲಿಕೆ ಅಧಿಕಾರಿ/ ನೌಕರರಿಗೂ ಸಹ ಕೆ.ಜಿ.ಐ.ಡಿ. ಮತ್ತು ಜಿ.ಪಿ.ಎಫ್ ಸೌಲಭ್ಯ ನೀಡಬೇಕು. ಎರವಲು ಸೇವೆ ಅಧಿಕಾರಿ ಮತ್ತು ನೌಕರರನ್ನು ಮಾತೃ ಇಲಾಖೆಗೆ ಹಿಂತಿರುಗಿಸಿ ಮತ್ತು ಖಾಲಿ ಇರುವ ಎಲ್ಲಾ ವೃಂದದ ಮುಂಬಡ್ತಿ ನೀಡಬೇಕು ಎಂದು ಕರ್ನಾಟಕ ರಾಜ್ಯ ಮನಪಾ ನೌಕರರ ಸಂಘ ಬೇಡಿಕೆಗಳನ್ನು ಮುಂದಿರಿಸಿದೆ.

ಮಂಗಳವಾರ ನಡೆದ ಸಂಘದ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ. ಬೇಡಿಕೆಗಳ ಈಡೇರಿಸಲು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಮನವಿ ಮಾಡಲಾಗಿದೆ. 5 ಪ್ರಮುಖ ಬೇಡಿಕೆಗಳನ್ನು ಈಡೇರಿಸಲು ಸೆ.4ರವರೆಗೆ ಗಡುವು ನೀಡಲಾಗಿದೆ. ಅಲ್ಲಿಯವರೆಗೆ ಬೇಡಿಕೆ ಈಡೇರದಿದ್ದರೆ ಕೆಲಸ ಸ್ಥಗಿತ, ಪ್ರತಿಭಟನೆ ಮಾಡಲು ನಿರ್ಧರಿಸಲಾಯಿತು ಎಂದು ಸಂಘದ ಅಧ್ಯಕ್ಷ ಎ. ಅಮೃತ್‌ರಾಜ್‌ ತಿಳಿಸಿದರು.

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ, ಸಚಿವಾಲಯ ನೌಕರರ ಸಂಘದ ಅಧ್ಯಕ್ಷ ರಮೇಶ್ ಸಂಗಾ, ಪಾಲಿಕೆ ನೌಕರರ ಸಂಘದ ರಾಜ್ಯ ಘಟಕದ ಉಪಾಧ್ಯಕ್ಷ ವಿ.ವೆಂಕಟರಾಮ್, ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ.ಸಿ.ಬಸವರಾಜಯ್ಯ, ಸಂಚಾಲಕ ಪ್ರಹ್ಲಾದ್ ಕುಲಕರ್ಣಿ ನೇತೃತ್ವದಲ್ಲಿ ಸಭೆ ನಡೆಯಿತು.
BREAKING NEWS
Loading latest news...
Join our WhatsApp Channel Powered By : Online Pudu