ಮಂಗಳೂರು: ದಂತವೈದ್ಯೆ ಪಾಂಡೇಶ್ವರ ಪಿಜಿಯಲ್ಲಿ ಅಸಹಜ ಸಾವು - ಕೆಲಸಕ್ಕೆ ಹಾಜರಾಗಬೇಕಿದ್ದ ದಿನವೇ ನಡೆಯಿತು ದುರ್ಘಟನೆ


ಮಂಗಳೂರು: ದಂತ ವೈದ್ಯಕೀಯ ಪದವಿ ಪಡೆದು ಇಂದೇ ಕೆಲಸಕ್ಕೆ ಹಾಜರಾಗಬೇಕಿದ್ದ ಯುವತಿಯೊಬ್ಬಳು ಮಂಗಳೂರಿನ ಪಾಂಡೇಶ್ವರದಲ್ಲಿರುವ ಪಿಜಿಯಲ್ಲಿ ಅಸಹಜವಾಗಿ ಮೃತಪಟ್ಟಿದ್ದಾರೆ.

ಉಳ್ಳಾಲ ತಾಲೂಕಿನ ನರಿಂಗಾನ ನಿವಾಸಿ, ದಂತ ಬಿಡಿಎಸ್ ಪದವಿಧರೆ ಸ್ವಾತಿ ಶೆಟ್ಟಿ (24) ಮೃತಪಟ್ಟ ದುರ್ದೈವಿ.

ಎ.ಜೆ. ಆಸ್ಪತ್ರೆಯಲ್ಲಿ ಬಿಡಿಎಸ್ ಪದವಿ ಪೂರೈಸಿದ್ದ ಸ್ವಾತಿ ಪಾಂಡೇಶ್ವರದ ಕ್ಲಿನಿಕ್ ಒಂದರಲ್ಲಿ ಎ.16ರಂದು ಕೆಲಸಕ್ಕೆ ಹಾಜರಾಗಬೇಕಿತ್ತು. ನಿನ್ನೆಯಷ್ಟೇ ತಾಯಿಯೊಂದಿಗೆ ಬಂದು ಪಾಂಡೇಶ್ವರ ಕ್ಲಿನಿಕ್ ನಲ್ಲಿ ಕೆಲಸದ ಬಗ್ಗೆ ಮಾತನಾಡಿ, ಅಲ್ಲಿಯೇ ಪಿಜಿಯಲ್ಲಿ ಉಳಿದುಕೊಂಡಿದ್ದರು. ರಾತ್ರಿ ತಾಯಿಯೊಂದಿಗೆ ಮೊಬೈಲ್ ನಲ್ಲಿ ಮಾತನಾಡಿದ್ದ ಸ್ವಾತಿ ಶೆಟ್ಟಿ, ವಿಪರೀತ ತಲೆನೋವು ಎಂದು ಹೇಳಿದ್ದರು. ಬಳಿಕ ನಾಳೆ ಮಾತನಾಡುತ್ತೇನೆ ಎಂದು ಹೇಳಿ ಕರೆ ಕಟ್ ಮಾಡಿದ್ದರು.

ಮಲಗಿದ್ದ ಸ್ವಾತಿಯ ದೇಹ ಬೆಳಗ್ಗೆ ತಣ್ಣಗಾಗಿದ್ದನ್ನು ನೋಡಿ ಪಿಜಿಯಲ್ಲಿದ್ದ ಇತರರು ಪಿಜಿಯ ಸೂಪರ್ ವೈಸರ್ ಗಮನಕ್ಕೆ ತಂದಿದ್ದಾರೆ. ತಕ್ಷಣ ಆಕೆಯನ್ನು ವೆನ್ ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಆಕೆ ಮೃತಪಟ್ಟಿದ್ದಾಳದು ವೈದ್ಯರು ತಿಳಿಸಿದ್ದರು. ಸ್ವಾತಿ ಶೆಟ್ಟಿ ಬಾಯಲ್ಲಿ ನೊರೆ ಬಂದಿತ್ತು ಎಂದು ಜೊತೆಗಿದ್ದವರು ತಿಳಿಸಿದ್ದರು. ಫಿಟ್ಸ್ ಕಾಯಿಲೆ ಇದ್ದಿರುವ ಬಗ್ಗೆ ಮನೆಯವರು ತಿಳಿಸಿದ್ದಾರೆ. ಘಟನೆ ಬಗ್ಗೆ ಮನೆಮಂದಿ ಸಂಶಯ ವ್ಯಕ್ತಪಡಿಸಿಲ್ಲ. ಸಹಜ ಸಾವು ಆಗಿರಬಹುದೆಂದು ಮನೆಯವರು ದೂರು ಕೊಟ್ಟಿಲ್ಲ ಎನ್ನಲಾಗಿದೆ.
BREAKING NEWS
Loading latest news...
Join our WhatsApp Channel Powered By : Online Pudu