ಬೆಳ್ತಂಗಡಿ: ತಾಲೂಕಿನ ಮುಂಡಾಜೆ ಗ್ರಾಮದ ಸೋಮಂತಡ್ಕದ ಅಗರಿ- ಹುರ್ತಾಜೆ ರಸ್ತೆಯಲ್ಲಿ ದುರುಳರು ವಿಷಾಹಾರವಿಟ್ಟ ಪರಿಣಾಮ ಅದನ್ನು ಸೇವಿಸದ 10ಕ್ಕಿಂತಲೂ ಅಧಿಕ ಸಾಕುನಾಯಿಗಳು ಹಾಗೂ ಬೀದಿನಾಯಿಗಳು ಮೃತಪಟ್ಟಿದೆ.
ಶನಿವಾರ ರಾತ್ರಿ ಇಲ್ಲಿನ ರಸ್ತೆಯುದ್ದಕ್ಕೂ ವಿಷ ಮಿಶ್ರಿತ ಆಹಾರವನ್ನು ಅಲ್ಲಲ್ಲಿ ಹಾಕಲಾಗಿತ್ತು. ಅದನ್ನು ಸೇವಿಸಿರುವ ನಾಯಿಗಳು ಸತ್ತು ಬಿದ್ದಿವೆ. ತಡರಾತ್ರಿ ಈಸ್ಟರ್ ಹಬ್ಬದಿಂದ ತೆರಳುತ್ತಿದ್ದವರು ಇದನ್ನು ಗಮನಿಸಿ ತಕ್ಷಣ ಪಂಚಾಯತ್ ಅಧ್ಯಕ್ಷ ಗಣೇಶ್ ಬಂಗೇರರವರ ಗಮನಕ್ಕೆ ತಂದಿದ್ದಾರೆ. ಪರಿಶೀಲನೆ ನಡೆಸಿದಾಗ ಅಲ್ಲಿನ ಕೆಲ ಮನೆಗಳ ಶ್ವಾನಗಳು ಸತ್ತಿರುವುದು ಕಂಡು ಬಂದಿದೆ.
ಮೃತ ಶ್ವಾನಗಳ ಕಳೇಬರವನ್ನು ಪಂಚಾಯತ್ ವತಿಯಿಂದ ದಫನ ಮಾಡಲಾಯಿತು. ಎರಡು ವರ್ಷಗಳ ಹಿಂದೆಯೂ ಇದೇ ರೀತಿಯ ಘಟನೆ ಈ ಪರಿಸರದಲ್ಲಿ ನಡೆದಿತ್ತು ಎನ್ನಲಾಗುತ್ತಿದೆ.