ವಾಟ್ಸ್ಆ್ಯಪ್ ನಲ್ಲಿಯೇ ಕೋಟ್ಯಂತರ ರೂಪಾಯಿ ವಂಚಿಸಿ ಐಷಾರಾಮಿ ಜೀವನ: ತನಿಖೆಯಲ್ಲಿ ಕಳ್ಳನ ಚಾಲಾಕಿತನ ಬಯಲು


ಪಟ್ಟಣಂತಿಟ್ಟ: ಇಂದಿನ ಡಿಜಿಟಲ್​ ಯುಗದಲ್ಲಿ ಎಲ್ಲಾ ವ್ಯವಹಾರಗಳು ಆನ್​ಲೈನ್​ನಲ್ಲೇ ನಡೆಯುತ್ತಿದೆ. ಪರಿಣಾಮ ನಗದು ಚಲಾವಣೆ ಪ್ರಮಾಣ ಕಡಿಮೆಯಾಗುತ್ತಿದೆ. ಇದರಿಂದ ಹಣಗಳವು ಪ್ರಕರಣಗಳು ಕಡಿಮೆಯಾಗಬಹುದೆಂದುಕೊಂಡರೆ ಅದು ತಪ್ಪು ಕಲ್ಪನೆ. ಕಳ್ಳರು ಸಹ ಇದೀಗ ಡಿಜಿಟಲ್​ ಯುಗಕ್ಕೆ ಬದಲಾಗಿದ್ದು, ಹೊಸ ಹೊಸ ರೀತಿಯಲ್ಲಿ ವಂಚನೆ ಮಾಡಲು ಆರಂಭಿಸಿದ್ದಾರೆ.

ಇದಕ್ಕೆ ತಾಜಾ ಉದಾಹರಣೆ ಕೇರಳದ ಪಟ್ಟಣಂತಿಟ್ಟ ಜಿಲ್ಲೆಯಲ್ಲಿ ನಡೆದ ಘಟನೆ. ವಂಚಕನೊಬ್ಬ ವಾಟ್ಸ್​ಆ್ಯಪ್​ ನಲ್ಲಿ ಕೋಟ್ಯಂತರ ರೂ. ನಗದು ವಂಚನೆ ಮಾಡಿದ್ದಾನೆ. ಕೇರಳ ಕೃಷಿ ಇಲಾಖೆಯ ನಕಲಿ ದಾಖಲೆಗಳನ್ನು ಇಟ್ಟುಕೊಂಡು, ಮಲೇಷಿಯಾದ ತೆಂಗಿನ ಸಸಿಗಳು ಸೇರಿದಂತೆ ಉತ್ತಮ ಗುಣಮಟ್ಟದ ಬೆಳೆಗಳನ್ನು ಕೊಡಿಸುವುದಾಗಿ ಸಾಕಷ್ಟು ಮಂದಿಯನ್ನು ನಂಬಿಸಿ ವಂಚನೆ ಎಸಗಿದ್ದಾನೆಂದು ಪುನ್ನವೇಲಿ ಮೂಲದ ವಿಪಿ ಜೇಮ್ಸ್ ಎಂಬಾತನನ್ನು ತಿರುವಳ್ಳ ಪೊಲೀಸರು ಬಂಧಿಸಿದ್ದಾರೆ. 

ವಾಟ್ಸ್​ಆ್ಯಪ್​ ಮತ್ತು ಆಫ್‌ಲೈನ್ ಮೂಲಕ ಕೇರಳದ ಅಗ್ರಿಕಲ್ಚರಲ್ ಫಾರ್ಮ್‌ನ ನಕಲಿ ಐಡಿಗಳೊಂದಿಗೆ ತನ್ನನ್ನು ಈತ ಪರಿಚಯಿಸಿಕೊಳ್ಳುತ್ತಿದ್ದ. ಬಳಿಕ ತನ್ನಲ್ಲಿ ಗುಣಮಟ್ಟದ ಬೀಜಗಳಿವೆ ಎಂದು ಜನರನ್ನು ನಂಬಿಸುತ್ತಿದ್ದ. ಇದೇ ರೀತಿ ಮಲೇಷಿಯಾದ ತೆಂಗಿನ ಸಸಿ ಕೊಡುವುದಾಗಿ ಹೇಳಿ ತಿರುವಳ್ಳ ನಿವಾಸಿಯಿಂದ 6 ಲಕ್ಷಕ್ಕೂ ಅಧಿಕ ಹಣ ಸುಲಿಗೆ ಮಾಡಿದ್ದಾನೆ.

ರಂಬುಟಾನ್ ಸಸಿ, ಅಡಕೆ, ತೆಂಗಿನ ಸಸಿ, ಹಲಸಿನ ಸಸಿಗಳನ್ನು ಕೊಡಿಸುವುದಾಗಿ ಹೇಳಿ ಕೇರಳ ರಾಜ್ಯದಾದ್ಯಂತ ಹಲವರನ್ನು ವಂಚಿಸಿದ್ದಾನೆ. ಪೊಲೀಸರಿಗೆ ಬಂದಿರುವ ದೂರುಗಳ ಪ್ರಕಾರ ಜೇಮ್ಸ್ 1.20 ಕೋಟಿ ರೂಪಾಯಿ ವಂಚನೆ ಮಾಡಿದ್ದಾನೆ. ಇನ್ನೂ ಹೆಚ್ಚಿನ ದೂರುಗಳು ಬರಲಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಯು ಸ್ಥಳೀಯರನ್ನು ವಂಚಿಸಿದ ಹಣದಲ್ಲಿ ಐಷಾರಾಮಿ ಜೀವನ ನಡೆಸುತ್ತಿದ್ದ. ಸದ್ಯ ಬಂಧಿತ ಆರೋಪಿಯನ್ನು ತಿರುವಳ್ಳ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ರಿಮ್ಯಾಂಡ್​ಗೆ ನೀಡಲಾಗಿದೆ.

BREAKING NEWS
Loading latest news...
Join our WhatsApp Channel Powered By : Online Pudu