ಹಿಂದೂ ಧರ್ಮದ ಹುಟ್ಟಿನ ಬಗ್ಗೆ ವಿವಾದಾತ್ಮಕ ಹೇಳಿಕೆ: ಪರಮೇಶ್ವರ್ ಗೆ ಕೌಂಟರ್ ನೀಡಿದ ಬಿಜೆಪಿ


ಬೆಂಗಳೂರು: ಇತ್ತೀಚೆಗೆ ಸನಾತನ ಧರ್ಮದ ಕುರಿತು ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ಹೇಳಿಕೆ ತೀವ್ರ ಸ್ವರೂಪ ಪಡೆದುಕೊಂಡಿತ್ತು. ಇದರ ಬೆನ್ನಲ್ಲೇ, ತುಮಕೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಗೃಹಸಚಿವ ಡಾ.ಜಿ.ಪರಮೇಶ್ವರ್ ಅವರು ಹಿಂದೂ ಧರ್ಮದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಅವರು ಹಿಂದೂ ಧರ್ಮ ಹುಟ್ಟಿದ್ದು ಯಾವಾಗ, ಯಾರು ಹುಟ್ಟಿಸಿದರು ಎಂಬುದೇ ಪ್ರಶ್ನೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು.


ಇದೀಗ ಈ ಹೇಳಿಕೆಗೆ ಎಕ್ಸ್(ಟ್ವಿಟ್ಟರ್) ನಲ್ಲಿ ಟ್ವೀಟ್ ಮಾಡುವ ಮೂಲಕ ರಾಜ್ಯ ಬಿಜೆಪಿ ಪ್ರತ್ಯುತ್ತರ ನೀಡಿದೆ.  “ಯಾರಿಗಾದರೂ ಅವರ ಮುತ್ತಾತ, ತಾತನ ಹೆಸರು ಗೊತ್ತಿಲ್ಲವೆಂದರೆ ಅವರಿಗೆ ತಾತ-ತಂದೆಯಿಲ್ಲ ಎಂದು ಅರ್ಥವಲ್ಲ. ಬದಲಾಗಿ ಅವರಿಗೆ ಆ ಬಗ್ಗೆ ಜ್ಞಾನವಿಲ್ಲ ಎಂದಷ್ಟೇ. ಪಾಪ ಪರಮೇಶ್ವರ್ ಅವರ ಸ್ಮೃತಿ I.N.D.I.A ಮೈತ್ರಿಕೂಟದ ಪ್ರಭಾವದಿಂದ ಕೊಂಚ ಪಲ್ಲಟವಾದ ಹಾಗಿದೆ. ಹಿಂದೂ ಧರ್ಮ ಒಬ್ಬ ಪುರುಷ ಅಥವಾ ಒಂದು ಪುಸ್ತಕದಿಂದ ಹುಟ್ಟಿದ ಧರ್ಮವಲ್ಲ. ಅದಕ್ಕೆ ಆದಿಯೂ ಇಲ್ಲ, ಅಂತ್ಯವೂ ಇಲ್ಲ. ಇದೊಂದು ಸಹಸ್ರಾರು ವರ್ಷಗಳಿಂದ ನಡೆದು ಬಂದ, ಬಹು ಉಪಾಸನಾ ವಿಧದ ಜೀವನ ಪದ್ಧತಿ. ಈ ಕಾರಣಕ್ಕೇ ಇದು ಸನಾತನ ಧರ್ಮ ಮತ್ತು ಭಾರತ ಸನಾತನ ಭೂಮಿ.

ಔರಂಗಜೇಬನಿಂದ ಹಿಡಿದು ಉದಯನಿಧಿ ಸ್ಟಾಲಿನ್‌ವರೆಗೆ ಅವೆಷ್ಟೋ ದಾಳಿಕೋರರನ್ನು ಈ ಮಣ್ಣು ಕಂಡ ಮೇಲೂ ಹಿಂದೂ ಧರ್ಮ ತನ್ನ ಅಸ್ತಿತ್ವವನ್ನು ಉಳಿಸಿಕೊಂಡಿದೆ. ಧರ್ಮ ಜಿಜ್ಞಾಸೆಗಿಂತಲೂ ಹೆಚ್ಚು ಸದ್ಯಕ್ಕೆ ನಿಮ್ಮ ಪಕ್ಷದಲ್ಲೇ ನಿಮ್ಮ ಅಸ್ತಿತ್ವ ಉಳಿಸಿಕೊಳ್ಳುವ ಕಡೆಗೆ ಹೆಚ್ಚಿನ ಗಮನ ಕೊಡುವುದು ನಿಮ್ಮ ವೈಯಕ್ತಿಕ ಹಿತದ ದೃಷ್ಟಿಯಿಂದ ಒಳಿತು‌ ಎಂದು ಕೌಂಟರ್ ನೀಡಿದೆ.


BREAKING NEWS
Loading latest news...
Join our WhatsApp Channel Powered By : Online Pudu