ವಿಶ್ವ ಜಾಂಬೂರಿಗೆ ವಿದ್ಯಾರ್ಥಿಗಳ ಬೀಳ್ಕೊಡುಗೆ: ಅನುಭವ, ಪಾಠಕ್ಕೆ ಜಾಂಬೂರಿ ಅತ್ಯುತ್ತಮ ಅವಕಾಶ- ಡಾ. ಮೋಹನ ಆಳ್ವ

ವಿಶ್ವ ಜಾಂಬೂರಿಗೆ ವಿದ್ಯಾರ್ಥಿಗಳ ಬೀಳ್ಕೊಡುಗೆ: ಅನುಭವ, ಪಾಠಕ್ಕೆ ಜಾಂಬೂರಿ ಅತ್ಯುತ್ತಮ ಅವಕಾಶ- ಡಾ. ಮೋಹನ ಆಳ್ವ





'ವಿಶ್ವ ಜಾಂಬೂರಿ ವಿದ್ಯಾರ್ಥಿಗಳಿಗೆ ಆಗಾಧ ಅನುಭವದ ಮೂಟೆಯನ್ನು ನೀಡಲಿದೆ. ಈ ಮೂಲಕ ಜೀವನದ ಉತ್ತಮ ಪಾಠ ಕಲಿಯಬೇಕಿದೆ. ಅನುಭವಕ್ಕೆ ಜಾಂಬೂರಿ ಅತ್ಯುನ್ನತ ಅವಕಾಶ’ ಎಂದು ಸ್ಕೌಟ್ಸ್-ಗೈಡ್ಸ್ ಜಿಲ್ಲಾ ಮುಖ್ಯ ಆಯುಕ್ತ ಹಾಗೂ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಹೇಳಿದರು.


2023ರ ಆಗಸ್ಟ್ 1ರಿಂದ 12ರ ವರೆಗೆ ದಕ್ಷಿಣ ಕೊರಿಯಾದಲ್ಲಿ ವಿಶ್ವ ಜಾಂಬೂರಿ ನಡೆಯಲಿದೆ. ಆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ವಿದ್ಯಾರ್ಥಿಗಳು ಹಾಗೂ ಶಿಕ್ಷಕರಿಗೆ ನಡೆದ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು.


ಜಾಂಬೂರಿ ವಿದ್ಯಾರ್ಥಿಗಳಿಗೆ ಉತ್ತಮ ಪಾಠ ನೀಡಲಿದೆ. ಜಿಲ್ಲೆ, ರಾಜ್ಯ ಹಾಗೂ ರಾಷ್ಟ್ರವನ್ನು ಪ್ರತಿನಿಧಿಸುವ ಅವರು ಸಾಕಷ್ಟು ಉತ್ತಮ ಪಾಠ ಕಲಿಯಬೇಕಿದೆ ಎಂದು ಅವರು ಹೇಳಿದರು.

ಸ್ಕೌಟ್ಸ್ ಗೈಡ್ಸ್ ವಿದ್ಯಾರ್ಥಿಗಳು ಶಿಸ್ತು, ಸೇವಾ ಮನೋಭಾವ ಹಾಗೂ ಸ್ನೇಹ ಸೌಹಾರ್ದ ಮೈಗೂಡಿಸಿಕೊಳ್ಳಬೇಕು. ಕಠಿಣ ಪರಿಸ್ಥಿತಿ ಎದುರಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಅವರು ಆಶಯ ವ್ಯಕ್ತಪಡಿಸಿದರು.


ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಉಪಾಧ್ಯಕ್ಷ ವಸಂತ್ ರಾವ್ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಜಿಲ್ಲಾ ಸಂಘಟನಾ ಆಯುಕ್ತೆ ಸುನೀತಾ, ಜಿಲ್ಲಾ ಕೋಶಾಧಿಕಾರಿ ಅನಿಲ್ ಕುಮಾರ್, ಹಿರಿಯ ಗೈಡ್ಸ್ ಶುಭಾ ವಿಶ್ವನಾಥ್, ರಾಜ್ಯ ಸಹಾಯಕ ಸಂಘಟನಾ ಆಯುಕ್ತರಾದ ಶುಭಾ ವಿಶ್ವನಾಥ್ ಮತ್ತು ಸಂಧ್ಯಾ ಇದ್ದರು.


ಜಿಲ್ಲಾ ಗೈಡ್ಸ್ ಆಯುಕ್ತೆ ಮತ್ತು ಜಿಲ್ಲಾ ಜಂಟಿ ಕಾರ್ಯದರ್ಶಿ ಜಯವಂತಿ ಸೋನ್ಸ್ ಸ್ವಾಗತಿಸಿದರು. ಜಿಲ್ಲಾ ಕಾರ್ಯದರ್ಶಿ ಎಂ. ಜಿ. ಕಜೆ ವಂದಿಸಿದರು, ರಾಜ್ಯ ಸಹಾಯಕ ಸಂಘಟನಾ ಆಯುಕ್ತ ಭರತ್ ರಾಜ್ ಕಾರ್ಯಕ್ರಮ ನಿರ್ವಹಿಸಿದರು.


ಆಳ್ವಾಸ್‍ನಲ್ಲಿ ನಡೆದಿದ್ದ ಸಾಂಸ್ಕೃತಿಕ ಜಾಂಬೂರಿ

ಸರಾಸರಿ 5 ವರ್ಷಕ್ಕೊಮ್ಮೆ ವಿಶ್ವ ಜಾಂಬೂರಿ ನಡೆಯುತ್ತಿದ್ದು, 24ನೇ ವಿಶ್ವ ಜಾಂಬೂರಿಯನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು ಮೂಡುಬಿದಿರೆಯಲ್ಲಿ ಸಾಂಸ್ಕೃತಿಕ ಜಾಂಬೂರಿಯಾಗಿ ಅದ್ದೂರಿಯಿಂದ ಆಚರಿಸಿತ್ತು.


ಆಳ್ವಾಸ್‍ನಲ್ಲಿ ಜರುಗಿದ್ದು ಸಾಂಸ್ಕೃತಿಕ ಜಾಂಬೂರಿಯಲ್ಲಿ 60 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಹಾಗೂ 10 ಸಾವಿರಕ್ಕೂ ಹೆಚ್ಚು ಶಿಕ್ಷಕರು ಭಾಗವಹಿಸಿದ್ದರು.


25ನೇ ವಿಶ್ವ ಜಾಂಬೂರಿ ಆಗಸ್ಟ್ 1 ರಿಂದ 12ರ ವರೆಗೆ ದಕ್ಷಿಣ ಕೊರಿಯಾದಲ್ಲಿ ನಡೆಯಲಿದೆ. ಇಲ್ಲಿ 153 ದೇಶಗಳ, 50 ಸಾವಿರ ಶಿಬಿರಾರ್ಥಿಗಳು ಭಾಗಿಯಾಗಲಿದ್ದಾರೆ.


ಈ ಪೈಕಿ ದಕ್ಷಿಣ ಕನ್ನಡ ಜಿಲ್ಲೆಯ 58 ಶಿಬಿರಾರ್ಥಿಗಳು(28 ಸ್ಕೌಟ್ಸ್, 18 ಗೈಡ್ಸ್, 5 ಶಿಕ್ಷಕರು, 7 ಐಎಸ್‍ಟಿ) ಸೇರಿದಂತೆ ರಾಜ್ಯದ 124 ಹಾಗೂ ದೇಶದ 380 ಶಿಬಿರಾರ್ಥಿಗಳು ಪಾಲ್ಗೊಳ್ಳುವರು ಎಂದು ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಮುಖ್ಯ ಆಯುಕ್ತ ಡಾ. ಎಂ. ಮೋಹನ ಆಳ್ವ ತಿಳಿಸಿದರು.


BREAKING NEWS
Loading latest news...
Join our WhatsApp Channel Powered By : Online Pudu