ಆನ್ಲೈನ್ ಫ್ರಾಡ್ ಗಳ ಅರೆಸ್ಟ್ ಗೆಂದು ಹೋದ ಬೆಂಗಳೂರು ಪೊಲೀಸರನ್ನೇ ಬಂಧಿಸಿದ ಕೇರಳ ಪೊಲೀಸರು


ಬೆಂಗಳೂರು: ಆರೋಪಿಗಳನ್ನು ಬಂಧಿಸಲೆಂದು ಕೇರಳಕ್ಕೆ ಹೋಗಿದ್ದ ಬೆಂಗಳೂರು ಪೊಲೀಸರನ್ನು ಕೇರಳದ ಕಲ್ಲಂಚೇರಿ ಪೊಲೀಸರು ಒಟ್ಟು ನಾಲ್ವರು ಬೆಂಗಳೂರು ಪೊಲೀಸರನ್ನು ಬಂಧಿಸಿದ್ದಾರೆ.

ವಂಚನೆ ಪ್ರಕರಣದಲ್ಲಿ ಆರೋಪಿಗಳ ಬಂಧನಕ್ಕೆ ತೆರಳಿದ್ದ ಪೊಲೀಸರು, ಹಣಕ್ಕಾಗಿ ಡಿಮ್ಯಾಂಡ್ ಮಾಡಿದ್ದಾರೆ ಎನ್ನುವ ಆರೋಪವನ್ನು ಹೊರಿಸಲಾಗಿದೆ. ಆದ್ದರಿಂದ ಆರೋಪಿಗಳು ಕಲ್ಲಂಚೇರಿ ಪೊಲೀಸರಿಗೆ ದೂರು ನೀಡಿದ್ದಾರೆ. ಆದ್ದರಿಂದ ಈ ಬಂಧನವಾಗಿದೆ.

ಈ ಹಿಂದೆ ಉದ್ಯೋಗ ಕೊಡಿಸುವುದಾಗಿ ಸಾಫ್ಟ್​ವೇರ್ ಇಂಜಿನಿಯರ್​ಗೆ ಮೋಸ ಮಾಡಲಾಗಿತ್ತು. ಈ ಬಗ್ಗೆ ಚಂದಕ್ ಶ್ರೀಕಾಂತ್ ಎಂಬುವವರು ಕೊಟ್ಟಿದ್ದ ದೂರಿನನ್ವಯ ಸಿಇಎನ್ ಇನ್ಸ್​ಪೆಕ್ಟರ್ ಶಿವಪ್ರಕಾಶ್ ಹಾಗೂ ತಂಡ, ಹಣದ ರಿಕವರಿಗೆಂದು ಕೇರಳಕ್ಕೆ ಬಂದಿತ್ತು. ಶ್ರೀಕಾಂತ್​ ಎನ್ನುವವರಿಗೆ ಕೇರಳ ಮೂಲದ ಆರೋಪಿಗಳು ಆನ್​ಲೈನ್ ಮೂಲಕ 26 ಲಕ್ಷ ರೂ. ಹಣ ವಂಚನೆ ಮಾಡಿದ್ದರು ಎಂದು ಆರೋಪಿಸಲಾಗಿದೆ. ವೈಟ್​ಫೀಲ್ಡ್​ನ ಸಿಇಎನ್ ಪೊಲೀಸರಿಗೆ ಮೊದಲಿಗೆ ಮಡಿಕೇರಿಯ ಆರೋಪಿ ಐಸಾಕ್ ಎಂಬವನ ಸುಳಿವು ಸಿಕ್ಕಿತ್ತು. ಅಲ್ಲಿ ಹೋಗಿ ಪರಿಶೀಲನೆ ನಡೆಸಿದಾಗ ಐಸಾಕ್ ಅಕೌಂಟ್​ನಲ್ಲಿ 2 ಕೋಟಿ ರೂ. ಟ್ರಾನ್ಷಕ್ಷನ್ ಆಗಿರುವುದು ಪತ್ತೆಯಾಗಿದೆ.

ಇದರ ಜಾಡನ್ನೇ ಹಿಡಿದು ಶಿವಪ್ರಕಾಶ್ ಹಾಗೂ ತಂಡ ಕೇರಳಕ್ಕೆ ಹೊರಟಿತ್ತು. ಈ ಸಂದರ್ಭ, ನೌಶಾದ್ ಎಂಬುವನಿಂದ ಆನ್​ಲೈನ್ ಫ್ರಾಡ್ ಬಗ್ಗೆ ಸಾಕ್ಷಿ ದೊರಕಿದೆ. ಈ ಹಿನ್ನೆಲೆಯಲ್ಲಿ ಅರೆಸ್ಟ್ ಮಾಡಲು ತೆರಳಿದ್ದ ಬೆಂಗಳೂರು ಪೊಲೀಸರು ಕೇರಳದ ಕೊಚ್ಚಿ ನಗರದ ಕಲ್ಲಂಚೇರಿಗೆ ತೆರಳಿದ್ದರು. ಈ ವೇಳೆ 3 ಲಕ್ಷ ರೂ. ನೀಡುವಂತೆ ಇನ್ಸ್​ಪೆಕ್ಟರ್ ಶಿವಪ್ರಕಾಶ್ ಬೇಡಿಕೆ ಇಟ್ಟಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ. ಹೀಗೆಂದು ನೌಶಾದ್ ಕಲ್ಲಂಚೇರಿ ಪೊಲೀಸರಿಗೆ ದೂರು ನೀಡಿದ್ದ. 

ಬೆಂಗಳೂರು ಪೊಲೀಸರು ಪ್ರಕರಣದ ತನಿಖೆಗೆಂದು ಬಂದಿರುವುದಾಗಿ ತಿಳಿಸಿದ್ದರೂ, ಇನ್ಸ್​ಪೆಕ್ಟರ್ ಶಿವಪ್ರಕಾಶ್ ಸೇರಿದಂತೆ ಮೂವರನ್ನು ಕಲ್ಲಂಚೇರಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅಷ್ಟೇ ಅಲ್ಲದೇ ನಿನ್ನೆಯೇ ಕಲ್ಲಂಚೇರಿ ಪೊಲೀಸರು ಎಫ್ಐಆರ್ ದಾಖಲು ಕೂಡ ಮಾಡಿದ್ದಾರೆ. ಸದ್ಯಕ್ಕೆ ಇನ್ಸ್​ಪೆಕ್ಟರ್​ ಶಿವಪ್ರಕಾಶ್ ಹಾಗೂ ಸಿಬ್ಬಂದಿಗಳು ಕೇರಳ ಪೊಲೀಸರ ವಶದಲ್ಲೇ ಇದ್ದಾರೆ.