ಪ್ರೀತಿಸಿದಾತ ಕೈಕೊಟ್ಟ: ಮನನೊಂದು ವಾರಗಳ ಕಾಲ ನರಳಿ ನರಳಿ ಪ್ರಾಣಬಿಟ್ಟ ಪ್ರೇಯಸಿ


ಮೈಸೂರು: ಪ್ರಿಯಕರ ಬೇರೊಬ್ಬಾಕೆಯೊಂದಿಗೆ ಸುತ್ತಾಡುತ್ತಿರುವುದ್ದನ್ನು ಕಂಡು ಮನನೊಂದ ಪ್ರೇಯಸಿ ಡೆತ್​ನೋಟ್​ ಬರೆದಿಟ್ಟು ಆತ್ಮಹತ್ಯೆಗೆ ಯತ್ನಿಸಿ ಚಿಕಿತ್ಸೆ ಫಲಿಸದೇ ಸಾವಿಗೀಡಾಗಿದ್ದಾಳೆ.

ಕೆ.ಆರ್. ನಗರ ತಾಲೂಕಿನ ಗೌಡನಹಳ್ಳಿ ಗ್ರಾಮದ ನಿವಾಸಿ ನಿಸರ್ಗ(20) ಮೃತಪಟ್ಟ ಯುವತಿ. ಪ್ರಿಯಕರನಿಂದ ಮೋಸ ಹೋದ ಆಕೆ ಮನನೊಂದು ಜು.9ರಂದು ಇಲಿ ಪಾಷಾಣ ಸೇವಿಸಿ ಪಾಲಕರಿಗೂ ತಿಳಿಸದೇ ಒಂದು ವಾರ ನೋವಿನಿಂದಲೇ ನರಳಿದ್ದಾಖೆ. ಕೊನೆಗೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ. ಈ ಬಗ್ಗೆ ಜುಲೈ 20 ರಂದು ನಿಸರ್ಗ ಪಾಲಕರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. 

ನಿಸರ್ಗ, ಕೆ. ಆರ್. ನಗರದ ಪ್ರಥಮ ದರ್ಜೆ ಕಾಲೇಜಿನಲ್ಲಿ ಅಂತಿಮ ವರ್ಷದ ಬಿ.ಕಾಂ ವಿದ್ಯಾರ್ಥಿನಿ. ಜುಲೈ 9 ರಂದು ನಿಸರ್ಗಳಿಗೆ ವಾಂತಿ ಬೇಧಿ ಆರಂಭವಾಗಿದೆ. ಪಾಲಕರು ಆಕೆಯನ್ನು ಕೆ.ಆರ್. ನಗರ ಆಸ್ಪತ್ರೆಗೆ ಕರೆದುದೊಯ್ದು ಚಿಕಿತ್ಸೆ ಕೊಡಿಸಿ ಬಂದಿದ್ದಾರೆ. ಆದರೆ, ಗುಣವಾಗದ ಹಿನ್ನೆಲೆಯಲ್ಲಿ ಜುಲೈ 11ರಂದು ಮತ್ತೆ ಆಸ್ಪತ್ರೆಗೆ ಹೋಗಿ ತೋರಿಸಿಕೊಂಡು ಬಂದಿದ್ದರು. ಜುಲೈ 12ರಂದು ನಿಸರ್ಗಗೆ ಹೊಟ್ಟೆ ನೋವು ಜಾಸ್ತಿಯಾಗಿದ್ದರಿಂದ ಮತ್ತೆ ಅದೇ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಜುಲೈ 13ರಂದು ಇದೇ ಪರಿಸ್ಥಿತಿ ಮುಂದುವರಿದಿದ್ದರಿಂದ ಮತ್ತೆ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಬಳಿಕ ವೈದ್ಯರ ಸಲಹೆ ಮೇರೆಗೆ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ಜುಲೈ 14ರಂದು ದಾಖಲಿಸಲಾಗಿದೆ. ಅಲ್ಲಿ ತಪಾಸಣೆ ಮಾಡಿದ ವೈದ್ಯರು ಇಲಿಪಾಷಾಣ ಸೇವನೆ ಮಾಡಿರಬಹುದು ಎಂದು ತಿಳಿಸಿದ್ದಾರೆ. ಇದರಿಂದ ಆಘಾತಗೊಂಡ ಪಾಲಕರು ನಿಸರ್ಗಳನ್ನು ವಿಚಾರ ಮಾಡಿದಾಗ ವಿಷ ಸೇವಿಸಿದ್ದಾಗಿ ಒಪ್ಪಿಕೊಂಡಿದ್ದಾಳೆ.

ತಾನು ಕಳೆದ 4 ವರ್ಷದಿಂದ ಸುಹಾಸ್ ರೆಡ್ಡಿ ಎಂಬಾತನನ್ನು ಪ್ರೀತಿಸುತ್ತಿದ್ದೆ. ಆತನೂ ನನ್ನನ್ನು ಪ್ರೀತಿ ಮಾಡುತ್ತಿದ್ದ. ನನ್ನೊಂದಿಗೆ ಚನ್ನಾಗಿಯೇ ಇದ್ದ. ನಾವಿಬ್ಬರೂ ಅನೇಕ ಕಡೆ ಸುತ್ತಾಡಿದೆವು. ಆತನನ್ನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದೆ. ಆದರೆ ಆತ ಅನನ್ಯಾ ಎಂಬ ಮತ್ತೊಬ್ಬಾಕೆಯನ್ನು ಪ್ರೀತಿಸಿ ನನಗೆ ಮೋಸ ಮಾಡಿದ್ದಾನೆ. ಅಲ್ಲದೆ, ನನ್ನ ಮುಂದೆಯೇ ಸುತ್ತಾಡಿ ನನಗೆ ಮಾನಸಿಕವಾಗಿ ಹಿಂಸೆ ನೀಡಿ ನೀನು ಇನ್ನೂ ಏಕೆ ಬದುಕಿದಿಯಾ ಸಾಯಿ ಎಂದು ಪದೇ ಪದೇ ಹೇಳುತ್ತಿದ್ದ.

ಅವರಿಬ್ಬರ ವರ್ತನೆಯಿಂದ ಮನನೊಂದು ಪ್ರೀತಿಯ ವಿಚಾರವನ್ನು ಅನನ್ಯಾ ತಂದೆ ಗೋಪಾಲಕೃಷ್ಣರಿಗೂ ತಿಳಿಸಿದ್ದೆ. ಆದರೆ, ಅವರು ನನಗೆ ಬೈಯ್ದು ನಿಂದಿಸಿ, ಸಾಯಿ ಎಂದಿದ್ದಾರೆ. ಬಳಿಕ ಸುಹಾಸ್‌ ರೆಡ್ಡಿ ತಂದೆ ಬಾಬುರೆಡ್ಡಿ, ತಾಯಿ ರೂಪರಿಗೂ ನಮ್ಮ ಪ್ರೀತಿಯ ವಿಚಾರವನ್ನು ತಿಳಿಸಿದ್ದೆ. ಅವರು ಕೂಡಾ ನನಗೆ ಬಾಯಿಗೆ ಬಂದಂತೆ ಬೈಯ್ದು ಅವಮಾನ ಮಾಡಿದರು. ಯಾರೂ ಕೂಡ ಸಹ ನನ್ನ ಸಹಾಯಕ್ಕೆ ಬರಲಿಲ್ಲ. ಎಲ್ಲರೂ ನನ್ನನ್ನು ನಿಂದಿಸಿ ಪದೇಪದೆ ಸಾಯಿ ಎಂದು ಪ್ರೇರಣೆ ನೀಡಿದ್ದರಿಂದ ನಾನು ಮನೆಯಲ್ಲಿದ್ದ ಇಲಿಪಾಷಾಣ ಸೇವಿಸಿದ್ದೆ. ಭಯದಿಂದ ಮನೆಯಲ್ಲಿ ಈ ವಿಚಾರವನ್ನು ಯಾರಿಗೂ ತಿಳಿಸಿರಲಿಲ್ಲ ಎಂದು ಸಾಯುವ ಮುನ್ನ ನಿಸರ್ಗ ಹೇಳಿದ್ದಾಳೆ.

ಡೆತ್​ನೋಟ್ ಬರೆದು ನನ್ನ ಬಾಗ್​ನಲ್ಲಿಟ್ಟಿದ್ದೇನೆ. ನನ್ನ ಸಾವಿಗೆ ಸುಹಾಸ್ ರೆಡ್ಡಿ, ಅನನ್ಯ, ಗೋಪಾಲಕೃಷ್ಣ, ಬಾಬು ರೆಡ್ಡಿ, ರೂಪ ಅವರೇ ಕಾರಣ ಎಂದು ನಿಸರ್ಗ ಡೆತ್​ನೋಟ್​ನಲ್ಲಿ ಉಲ್ಲೇಖಿಸಿದ್ದಾಳೆ. ಜುಲೈ 20 ರಂದು ಮದ್ಯಾಹ್ನ 3 ಗಂಟೆ ಚಿಕಿತ್ಸೆ ಫಲಕಾರಿಯಾಗದೇ ನಿಸರ್ಗ ಮೃತಪಟ್ಟಿದ್ದಾಳೆ.

ಈ ಸಂಬಂಧ ಕೆ.ಆರ್.ಪೊಲೀಸ್ ಠಾಣೆಯಲ್ಲಿ ಸುಹಾಸ್ ರೆಡ್ಡಿ ಸೇರಿದಂತೆ ಐವರ ವಿರುದ್ಧ ಎಫ್ಐಆರ್ ದಾಖಲಾಗಿದ್ದು, ನಿಸರ್ಗ ಆತ್ಮಹತ್ಯೆ ವಿಚಾರ ತಿಳಿಯುತ್ತಿದ್ದಂತೆ ಸುಹಾಸ್ ರೆಡ್ಡಿ ಎಸ್ಕೇಪ್ ಆಗಿದ್ದಾನೆ. ತಲೆಮರೆಸಿಕೊಂಡಿರುವ ಸುಹಾಸ್ ರೆಡ್ಡಿ ಬಂಧನಕ್ಕೆ ಪೊಲೀಸರಿಂದ ಶೋಧ ಕಾರ್ಯ ನಡೆಯುತ್ತಿದೆ

BREAKING NEWS
Loading latest news...
Join our WhatsApp Channel Powered By : Online Pudu