ಇಂದೋರ್: ಮಧ್ಯಪ್ರದೇಶದಲ್ಲಿ 12 ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಇಬ್ಬರು ಆರೋಪಿಗಳ ಮನೆಗಳನ್ನು ಅಧಿಕಾರಿಗಳು ಬುಲ್ಡೋಜರ್ ನುಗ್ಗಿಸಿ ಧ್ವಂಸ ಮಾಡಿದ್ದಾರೆ.
ರಾಜ್ಯದ ಸಾತ್ನಾ ಜಿಲ್ಲೆಯ ಮೈಹರ್ ನಗರದ ಜನಪ್ರಿಯ ದೇಗುಲ ವೊಂದರ ಆಡಳಿತ ಮಂಡಳಿಯಲ್ಲಿ ದಿನಗೂಲಿ ಕಾರ್ಮಿಕರಾಗಿ ಕಾರ್ಯನಿರ್ವಹಿಸುತ್ತಿದ್ದರವೀಂದ್ರ ಚೌಧರಿ ಮತ್ತು ಅತುಲ್ ಬಧಲಿಯಾ ಎಂಬುವವರು ಆರೋಪಿಗಳು.
ಇವರು 12 ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದರು. ಗುರುವಾರ ನಡೆದ ಪ್ರಕರಣ ಬಯಲಿಗೆ ಬಂದ ಬಳಿಕ ಇಬ್ಬರನ್ನೂ ದೇಗುಲದ ಆಡಳಿತ ಮಂಡಳಿಯು ಕೆಲಸದಿಂದ ವಜಾ ಮಾಡಿತ್ತು. ಪೊಲೀಸರು ಆರೋಪಿಗಳನ್ನು ಬಂಧಿಸಿದ್ದರು.
ಘಟನೆಯು ತೀವ್ರ ಜನಾಕ್ರೋಶಕ್ಕೆ ಕಾರಣವಾದ ಬೆನ್ನಲ್ಲೇ, ಅಧಿಕಾರಿಗಳು ವಿದಿಶಾ ಜಿಲ್ಲೆಯ ಉದಯ್ ಪುರದಲ್ಲಿರುವ ಆರೋಪಿ ರವೀಂದ್ರನ ಮನೆಯನ್ನು ಧ್ವಂಸ ಮಾಡಿದ್ದಾರೆ. ನ್ಯೂ ಬಸ್ತಿಯ ಮಲಿಯಾನ್ ತೋಲಾದಲ್ಲಿರುವ ಮತ್ತೊಬ್ಬ ಆರೋಪಿ ಅತುಲ್ಗೆ ಸೇರಿದ ಮನೆಯನ್ನೂ ಧ್ವಂಸ ಮಾಡಲಾಗಿದೆ. ಭಾರಿ ಪೊಲೀಸ್ ಬಂದೋಬಸ್ತ್ ನೊಂದಿಗೆ ನಡೆದಮನೆ ತೆರವು ಕಾರ್ಯಾಚರಣೆಗೆ ಭಾರಿ ಜನಸ್ತೋಮ ಸಾಕ್ಷಿಯಾಯಿತು.
ಲೈಂಗಿಕ ದೌರ್ಜನ್ಯದಿಂದ ತೀವ್ರವಾಗಿ ಗಾಯಗೊಂಡಿರುವ
ಬಾಲಕಿಯನ್ನು ರೇವಾದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.