ಭೀತಿ ಸೃಷ್ಟಿಯ ಪುಕ್ಸಟ್ಟೆ ಹೇಳಿಕೆ ಬೇಡ.. ಅವೈಜ್ಞಾನಿಕ ಕಾಮಗಾರಿ, ಕೃತಕ ನೆರೆ ಬಗ್ಗೆ ಗಮನ ನೀಡಿ- ವೇದವ್ಯಾಸರಿಗೆ ಪದ್ಮರಾಜ್ ತಿರುಗೇಟು
ರಾಜ್ಯದಲ್ಲಿ ಮತ್ತೆ ಕೋಮು ಸಂಘರ್ಷದ ವಾತಾವರಣ ಸೃಷ್ಟಿಯಾಗಿದೆ ಎಂಬ ಶಾಸಕ ವೇದವ್ಯಾಸ್ ಕಾಮತ್ ಅವರ ಹೇಳಿಕೆ ವ್ಯಾಪಕ ಟೀಕೆಗೆ ಗುರಿಯಾಗಿದೆ. ಈ ಹೇಳಿಕೆಗೆ ತಿರುಗೇಟು ನೀಡಿರುವ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್ ಆರ್. ಮೊದಲು ಅಭಿವೃದ್ಧಿ ಕಾಮಗಾರಿಯತ್ತ ಗಮನ ಹರಿಸುವಂತೆ ಶಾಸಕರಿಗೆ ಸಲಹೆ ನೀಡಿದ್ದಾರೆ.
ಕೋಮು ಭೀತಿ ಇದೆ ಎಂಬ ಪುಕ್ಸಟ್ಟೆ ಹೇಳಿಕೆ ನೀಡುವುದನ್ನು ಮೊದಲು ನಿಲ್ಲಿಸಿ. ನಗರದಲ್ಲಿ ನಡೆದಿರುವ ಅವೈಜ್ಞಾನಿಕ ಕಾಮಗಾರಿಯಿಂದ ಆದ ಕೃತಕ ನೆರೆ ಭೀತಿಯತ್ತ ಮೊದಲು ಗಮನ ಕೊಡಿ ಎಂದು ಶಾಸಕ ವೇದವ್ಯಾಸರಿಗೆ ಪದ್ಮರಾಜ್ ಖಡಕ್ ವಾರ್ನಿಂಗ್ ನೀಡಿದ್ದಾರೆ.
ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಜನ ನೆಮ್ಮದಿಯ ಜೀವನವನ್ನು ಬದುಕುತ್ತಿದ್ದಾರೆ. ರಾಜ್ಯದಲ್ಲಿ ಕೋಮು ಸಾಮರಸ್ಯದ ಉತ್ತಮ ವಾತಾವರಣ ನೆಲೆಸಿದೆ. ಕಾಂಗ್ರೆಸ್ಗೂ ಸಂಸ್ಕೃತಿ- ಸಂಸ್ಕಾರದ ಬಗ್ಗೆ ಚೆನ್ನಾಗಿ ಅರಿವು ಇದೆ ಎಂದು ಹೇಳಿರುವ ಪದ್ಮರಾಜ್, ಬಿಜೆಪಿ ನಾಯಕರು ಜನರನ್ನು ಭಾವನಾತ್ಮಕವಾಗಿ ಮರುಳು ಮಾಡುವುದನ್ನು ಬಿಟ್ಟು ರಾಜ್ಯದ ಅಭಿವೃದ್ಧಿಗಾಗಿ ಸರ್ಕಾರದ ಜೊತೆಗೆ ಕೈಜೋಡಿಸಲಿ ಎಂದು ಸಲಹೆ ನೀಡಿದ್ದಾರೆ.
ರಾಜ್ಯದಲ್ಲಿ ಸಂಘರ್ಷದ ವಾತಾವರಣವನ್ನು ಸೃಷ್ಟಿಸುವುದೇ ಬಿಜೆಪಿಯ ಆದ್ಯ ಗುರಿಯಾಗಿದೆ. ಆದರೆ, ಈ ಬಾರಿ ಇಂತಹ ನಾಟಕಗಳು ನಡೆಯುವುದಿಲ್ಲ. ಬೆಲೆ ಏರಿಕೆಯಿಂದ ತತ್ತರಿಸಿರುವ ಜನತೆಗೆ ನೆಮ್ಮದಿಯ ದಿನಗಳನ್ನು ಮರಳಿಸಲು ಕಾಂಗ್ರೆಸ್ ಸರ್ಕಾರ ಸದಾ ಶ್ರಮಿಸಲಿದೆ ಎಂದು ಅವರು ಹೇಳಿದ್ದಾರೆ.
.