ಬೆಳ್ತಂಗಡಿ: ಚಾರ್ಮಾಡಿಯಲ್ಲಿ ಬಸ್ ಗಾಗಿ ವಿದ್ಯಾರ್ಥಿಗಳಿಂದ ದಾಂಧಲೆ - ಪೊಲೀಸ್ ಎದುರೇ ಹಲ್ಲೆಗೆ ಮುಂದಾದ ಪುಂಡರು


ಬೆಳ್ತಂಗಡಿ: ದ.ಕ.ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಚಾರ್ಮಾಡಿಯಲ್ಲಿ ವಿದ್ಯಾರ್ಥಿಗಳ ತಂಡವೊಂದು ಬಸ್ ವಿಚಾರದಲ್ಲಿ ದಾಂಧಲೆ ಮೆರೆದು ಪೊಲೀಸ್ ಎದುರೇ ಪ್ರಯಾಣಿಕನೋರ್ವನಿಗೆ ಹಲ್ಲೆಗೆತ್ನಿಸಿರುವ ಘಟನೆ ನಡೆದಿದೆ.

ಉಜಿರೆಯಿಂದ ಚಾರ್ಮಾಡಿಗೆ ತೆರಳಬೇಕಿದ್ದ ವಿದ್ಯಾರ್ಥಿಗಳ ಗುಂಪೊಂದು ಸಂಚಾರದಲ್ಲಿದ್ದ ಬಸ್ ಅನ್ನು ನಿಲ್ಲಿಸಲು ಯತ್ನಿಸಿದೆ. ಆದರೆ ಬಸ್ ನಿಲ್ಲಿಸದ ಹಿನ್ನೆಲೆಯಲ್ಲಿ ದಾಂಧಲೆ ನಡೆಸಿರುವ ವಿದ್ಯಾರ್ಥಿಗಳ ತಂಡವು ಬೇರೆ ಯುವಕರನ್ನು ಕರೆಸಿ ಬಸ್ ಅನ್ನು ಚಾರ್ಮಾಡಿಯಲ್ಲಿ ಅಡ್ಡ ಹಾಕಿ ದಾಂಧಲೆ ನಡೆಸಿದೆ. ಅಲ್ಲದೆ ಕಂಡಕ್ಟರ್ ಗೆ ಆವಾಜ್ ಹಾಕಿದೆ. ಈ ವೇಳೆ ಕಂಡೆಕ್ಟರ್ 'ಇದು ಎಕ್ಸ್‌ಪ್ರೆಸ್‌ ಬಸ್ ಆಗಿರೋದರಿಂದ ಕಂಡಕಂಡಲ್ಲಿ ಸ್ಟಾಪ್ ಕೊಡಲು ಸಾಧ್ಯವಿಲ್ಲ' ಎಂದಿದ್ದಾರೆ. ಪರಿಣಾಮ ವಿದ್ಯಾರ್ಥಿಗಳು ಹಾಗೂ ಕಂಡೆಕ್ಟರ್ ನಡುವೆ ವಾಗ್ವಾದ ನಡೆದಿದೆ.

ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಧಾವಿಸಿ ವಿದ್ಯಾರ್ಥಿಗಳನ್ನು, ಬಸ್ ಸಿಬ್ಬಂದಿಯನ್ನು ಸಮಾಧನ ಪಡಿಸಲು ಯತ್ನಿಸಿದ್ದಾರೆ. ಆಗ ಬಸ್ ಪ್ರಯಾಣಿಕರೋರ್ವರು ಕಂಡೆಕ್ಟರ್ ಮಾತಿಗೆ ಬೆಂಬಲ ಸೂಚಿಸಿದ್ದಾರೆ. ಇದರಿಂದ ರೊಚ್ಚಿಗೆದ್ದ ವಿದ್ಯಾರ್ಥಿಗಳ ಗುಂಪು ಪ್ರಯಾಣಿಕನ ಮೇಲೆ‌ ಮುಗಿಬಿದ್ದು 'ಬಸ್ ನಿಂದ ಇಳಿ ನಿನ್ನನ್ನು ನೋಡಿಕೊಳ್ಳುತ್ತೇವೆ. ಬೆಳ್ತಂಗಡಿಗೆ ಬಾ' ಎಂದು ಹೇಳಿದ್ದಲ್ಲದೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಹೊರಗಡೆಯಿಂದಲೇ ಬಸ್ ಕಿಟಕಿ ಮೂಲಕ ಅವರ ಮೇಲೆ ಹಲ್ಲೆಗೆತ್ನಿಸಿದೆ. ವಿದ್ಯಾರ್ಥಿಗಳ ಪುಂಡಾಟಿಕೆಯನ್ನು ಪೊಲೀಸರು ತಡೆಯಲೆತ್ನಿಸಿದರೂ ಸಾಧ್ಯವಾಗದೆ ಅವರು ಮೂಕಪ್ರೇಕ್ಷಕರಾಗಿದ್ದಾರೆ. ವಿದ್ಯಾರ್ಥಿಗಳ ಗೂಂಡಾಗಿರಿಯನ್ನು ಬಸ್ ನಲ್ಲಿದ್ದ ಪ್ರಯಾಣಿಕರು ಯಾರೋ ಮೊಬೈಲ್ ನಲ್ಲಿ ಚಿತ್ರೀಕರಿಸಿದ್ದಾರೆ. ಇದೀಗ ಈ ವೀಡಿಯೋ ವೈರಲ್ ಆಗುತ್ತಿದೆ. ಘಟನೆಯ ಬಗ್ಗೆ ಪೊಲೀಸ್ ಠಾಣೆಯಲ್ಲಿ ಈವರೆಗೆ ಯಾವುದೇ ದೂರು ದಾಖಲಾಗಿಲ್ಲ.
BREAKING NEWS
Loading latest news...
Join our WhatsApp Channel Powered By : Online Pudu