ಕೆಯ್ಯೂರು: ಹಾವು ಕಡಿತಕ್ಕೊಳಗಾದ ತಾಯಿಯನ್ನು ಬಾಯಿಯಿಂದಲೇ ವಿಷ ಹೀರಿ ರಕ್ಷಿಸಿದ ಪುತ್ರಿ


ಪುತ್ತೂರು: ನಾಗರಹಾವು ಕಡಿತಕ್ಕೊಳಗಾದ ತಾಯಿಗೆ ಪುತ್ರಿಯೇ ಬಾಯಿಯಿಂದ ವಿಷ ಹೀರಿ ಪ್ರಥಮ ಚಿಕಿತ್ಸೆ ನೀಡಿ ರಕ್ಷಿಸಿರುವ ಅಪರೂಪದ ಘಟನೆ ಪುತ್ತೂರು ತಾಲೂಕಿನ ಕೆಯ್ಯೂರಿನಲ್ಲಿ ನಡೆದಿದೆ.

ಪುತ್ತೂರಿನ ವಿವೇಕಾನಂದ ಪದವಿ ಕಾಲೇಜಿನ ದ್ವಿತೀಯ ಬಿಸಿಎ ವಿದ್ಯಾರ್ಥಿನಿ, ಸ್ಕೌಟ್ಸ್‌ ಮತ್ತು ಗೈಡ್ಸ್ ನ ರೇಂಜರ್‌ ಕೂಡ ಆಗಿರುವ ಶ್ರಮ್ಯಾ ರೈ ಈ ರೀತಿ ಸಮಯಪ್ರಜ್ಞೆ ಮೆರೆದವರು. ಕೆಯ್ಯೂರು ಗ್ರಾ.ಪಂ. ಸದಸ್ಯೆಯಾಗಿರುವ ಮಮತಾ ರೈ ಘಟನೆಯಿಂದ ಪಾರಾಗಿರುವ ತಾಯಿ.‌ ಐದು ದಿನಗಳ ಹಿಂದೆ ಈ ಘಟನೆ ನಡೆದಿತ್ತು. ಇದೀಗ ಈ ಬಗ್ಗೆ ಸುದ್ದಿ ತಿಳಿದಿದ್ದು, ವಿದ್ಯಾರ್ಥಿನಿಯ ಸಮಯ ಪ್ರಜ್ಞೆ, ಸಾಹಸಕ್ಕೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗಿದೆ.

ಕೆಯ್ಯೂರಿನ ತಮ್ಮ ಮನೆಯ ಸಮೀಪದಲ್ಲಿಯೇ ಇರುವ ತವರು ಮನೆಗೆ ಶ್ರಮ್ಯಾಳ ತಾಯಿ ಮಮತಾ ರೈ ಹೋಗಿದ್ದರು. ಈ ವೇಳೆ ಅವರು ಪಂಪ್‌ ಸ್ವಿಚ್‌ ಹಾಕಲೆಂದು ತೋಟಕ್ಕೆ ತೆರಳಿ ಮರಳಿ ಬರುತ್ತಿರುವಾಗ ಕೆರೆಯ ಪಕ್ಕದಲ್ಲಿ ನಾಗರಹಾವನ್ನು ತುಳಿದಿದ್ದಾರೆ.  ಹಾವು ಅವರಿಗೆ ಕಚ್ಚಿತ್ತು. ಅವರು ತಕ್ಷಣ ಮನೆಗೆ ಬಂದ ಕೆಲಸದಾಳಿನ ಸಹಕಾದಿಂದ ಹಾವು ಕಚ್ಚಿದ ಸ್ಥಳದಿಂದ ಮೇಲ್ಭಾಗಕ್ಕೆ ವಿಷ ಏರದಂತೆ ಬೈ ಹುಲ್ಲು ಕಟ್ಟಿದ್ದರು. ಆದರೆ ಇದು ಹೆಚ್ಚು ಪ್ರಯೋಜನಕಾರಿ ಆಗಲಾರದು ಎಂದರಿತ ಶ್ರಮ್ಯಾ ರೈ ಹಾವು ಕಚ್ಚಿದ ಸ್ಥಳದಲ್ಲಿ ಬಾಯಿಯೂರಿ, ಹೀರಿ ವಿಷ ತೆಗೆದಿದ್ದಾರೆ. ಅದಾದ ಬಳಿಕ ಮಮತಾ ರೈ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಶ್ರಮ್ಯಾಳ ಸಮಯಪ್ರಜ್ಞೆಯಿಂದಾಗಿ ಮಮತಾ ರೈ ಅವರು ಯಾವುದೇ ತೊಂದರೆ ಇಲ್ಲದೆ ಪಾರಾಗಿದ್ದಾರೆ. ಶ್ರಮ್ಯಾ ರೈ ಈ ಸಾಹಸಕ್ಕೆ ಭಾರೀ ಪ್ರಶಂಸೆ ವ್ಯಕ್ತವಾಗಿದೆ.


BREAKING NEWS
Loading latest news...
Join our WhatsApp Channel Powered By : Online Pudu