ಶಿವಮೊಗ್ಗ: ಸ್ವಾತಂತ್ರ್ಯೋತ್ಸವದ ದಿನವೇ ಸಾವರ್ಕರ್ - ಟಿಪ್ಪು ಭಾವಚಿತ್ರ ಅಳವಡಿಕೆ ವಿಚಾರದಲ್ಲಿ ಜಟಾಪಟಿ: ಹಿಂದೂ ಯುವಕನಿಗೆ ಚಾಕು ಇರಿತ, ನಿಷೇಧಾಜ್ಞೆ ಜಾರಿ

ಶಿವಮೊಗ್ಗ: ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಪ್ರಯುಕ್ತ ಶಿವಮೊಗ್ಗದ ಮಾಲ್ ನಲ್ಲಿ ಸಾವರ್ಕರ್ ಫೋಟೋ ಹಾಕಿರೋದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಎಸ್ ಡಿಪಿಐ ಕಾರ್ಯಕರ್ತರು ಟಿಪ್ಪೂ ಸುಲ್ತಾನ್ ಫೋಟೋ ಅಳವಡಿಸಿದ್ದರು‌. ಈ ಹಿನ್ನೆಲೆಯಲ್ಲಿ ಎರಡು ಗುಂಪುಗಳ ನಡುವೆ ನಡೆದ ಘರ್ಷಣೆ ತೀವ್ರ ಸ್ವರೂಪ ಪಡೆದು ಹಿಂದೂ ಯುವಕನಿಗೆ ಚೂರಿ ಇರಿತವಾಗಿದೆ. ಇದೀಗ ಶಿವಮೊಗ್ಗದಲ್ಲಿ ನಿಷೇಧಾಜ್ಞೆ ಜಾರಿಯಾಗಿದೆ.

ಶಿವಮೊಗ್ಗದ ಅಮೀರ್ ಅಹ್ಮದ್ ವೃತ್ತದಲ್ಲಿ ಭಾರೀ ಜಗಳವೊಂದು ನಡೆದಿತ್ತು. ಈ ವೇಳೆ ಗುಂಪು ಚದುರಿಸಲು ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದರು. ಆದರೆ ಈ ನಡುವೆ ಪ್ರೇಮ್ ಸಿಂಗ್ ಎಂಬ ಯುವಕನಿಗೆ ಅನ್ಯಕೋಮಿನ ವ್ಯಕ್ತಿ ಚೂರಿಯಿಂದ ಇರಿದಿದ್ದಾನೆ. ಪರಿಣಾಮ ಶಿವಮೊಗ್ಗದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಗಾಯಗೊಂಡ ಪ್ರೇಮ್ ಸಿಂಗ್ ನನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸ್ವಾತಂತ್ರ್ಯ ಅಮೃತೋತ್ಸವದ ಹಿನ್ನೆಲೆಯಲ್ಲಿ ಮಾಲ್ ನಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಭಾವಚಿತ್ರವನ್ನು ಹಾಕಲಾಗಿತ್ತು. ಅದರಲ್ಲಿ ಸಾವರ್ಕರ್ ಭಾವಚಿತ್ರವನ್ನು ಹಾಕಲಾಗಿತ್ತು. ಇದರಿಂದ ಎಸ್ ಡಿಪಿಐ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿ, ಟಿಪ್ಪುಸುಲ್ತಾನ್ ಭಾವಚಿತ್ರವನ್ನು ಅಳವಡಿಸಲು ಯತ್ನಿಸಿದ್ದಾರೆ. ಈ ವೇಳೆ ಎರಡೂ ತಂಡಗಳ ನಡುವೆ ಜಟಾಪಟಿ ನಡೆದಿದೆ.