ಬೆಂಗಳೂರು: ಟೂರ್ ಗೆಂದು ಕರೆದೊಯ್ದ 'ಬಾ ನಲ್ಲೆ ಮಧುಚಂದ್ರಕೆ' ಸಿನಿಮಾ ಮಾದರಿಯಲ್ಲಿ ಪತ್ನಿಯನ್ನು ಕೊಲೆಗೈದ ಪತಿ

ಬೆಂಗಳೂರು: ಟೂರ್ ಗೆಂದು ಕರೆದೊಯ್ದ 'ಬಾ ನಲ್ಲೆ ಮಧುಚಂದ್ರಕೆ' ಸಿನಿಮಾ ಮಾದರಿಯಲ್ಲಿ ಪತ್ನಿಯನ್ನು ಪತಿಯೇ ಕೊಲೆಗೈದಿರುವ ಪ್ರಕರಣವೊಂದು ನಡೆದಿದ್ದು, ಆರೋಪಿ ಪತಿಯನ್ನು ಮಡಿವಾಳ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಪೃಥ್ವಿರಾಜ್ ( 30 ) ಕೊಲೆಗೈದಿರುವ  ಆರೋಪಿ ಪತಿ. ಕೊಲೆಗೆ ಸಹಕರಿಸಿರುವ ತಲೆಮರೆಸಿಕೊಂಡ ಈತನ ಸ್ನೇಹಿತ, ಬಿಹಾರ ಮೂಲದ ಸಮೀರ್ ಕುಮಾರ್ ಪತ್ತೆಗಾಗಿ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ಬಿಕಾಂ ಪದವೀಧರೆ ಜ್ಯೋತಿಕುಮಾರಿ ಎಂಬಾಕೆಯನ್ನು ಪೃಥ್ವಿರಾಜ್‌ ಪ್ರೀತಿಸಿ 2021ರ ನವೆಂಬರ್ ನಲ್ಲಿ ವಿವಾಹವಾಗಿದ್ದ. ಈಕೆ ಬಿಕಾಂ ಪದವೀಧರೆಯಾಗಿದ್ದು ಎರಡು ಬಾರಿ ಯುಪಿಎಸ್ಸಿ ಪರೀಕ್ಷೆಯನ್ನು ಕಟ್ಟಿದ್ದಳು. ಇತ್ತೀಚೆಗೆ ಈಕೆ ಜಗಳ ಕಾಯ್ದುಕೊಂಡು ಟಾರ್ಚರ್ ಕೊಡುತ್ತಿದ್ದಳು. ಅಲ್ಲದೆ ಪರ ಪುರುಷನೊಂದಿಗೆ ಆಕೆಗೆ ಸಂಬಂಧವಿತ್ತು ಎಂದು ಈ ಕೊಲೆ ಮಾಡಿದ್ದಾಗಿ ಆತ ಒಪ್ಪಿದ್ದಾನೆ‌.

ಪತ್ನಿಯನ್ನು ಕೊಲೆ ಮಾಡಲು ಪ್ಲ್ಯಾನ್ ಹಾಕಿರುವ ಪೃಥ್ವಿರಾಜ್ ಆಕೆಯ ಮನವೊಲಿಸಿ ಆ .1 ರಂದು ಝೂಮ್ ಕಾರನ್ನು ಬಾಡಿಗೆಗೆ ಪಡೆದುಕೊಂಡು ಪತ್ನಿ ಹಾಗೂ ಸ್ನೇಹಿತನನ್ನು ಉಡುಪಿ ಬಳಿಯ ಮಲ್ಪೆ ಬೀಚ್‌ಗೆ ಹೋಗಿದ್ದಾನೆ. ಅಲ್ಲಿ ಆಕೆಯನ್ನು ಸಮುದ್ರದಲ್ಲಿ ಮುಳುಗಿಸಿ ಸಹಜ ಸಾವು ಎಂದು ಬಿಂಬಿಸಲು ಪ್ಲ್ಯಾನ್ ಹಾಕಿದ್ದ. ಆದರೆ ಅಲ್ಲಿ ಸಮುದ್ರಕ್ಕೆ ಇಳಿಯಬಾರದೆಂದು ಬೋರ್ಡ್ ನೋಡಿ ಆ .2ರಂದು ಮಲ್ಪೆಯಿಂದ ಬೆಂಗಳೂರಿಗೆ ವಾಪಸ್ ಹೊರಟಿದ್ದಾನೆ. ಈ ವೇಳೆ ಮಾರ್ಗ ಮಧ್ಯದ ಶಿರಾಡಿಘಾಟ್‌ನ ರಾಜಘಟ್ಟದ ಬಳಿ ಕಾರಿನ ಮುಂಭಾಗದ ಸೀಟಿನಲ್ಲಿ ಕುಳಿತಿದ್ದ ಜ್ಯೋತಿಕುಮಾರಿಯ ವೇಲ್‌ನಿಂದ ಕುತ್ತಿಗೆ ಬಿಗಿದು ಸ್ನೇಹಿತನ ನೆರವಿನಿಂದ ಉಸಿರುಗಟ್ಟಿಸಿ ಸಾಯಿಸಿದ್ದಾನೆ ಎನ್ನಲಾಗಿದೆ. 

ಮೃತದೇಹವನ್ನು ಯಾರಿಗೂ ಗೊತ್ತಾಗದಂತೆ ಅರಣ್ಯ ಪ್ರದೇಶದಲ್ಲಿ ಎಸೆದು, ಸಾಕ್ಷ್ಯನಾಶಪಡಿಸಿ ವಾಪಸ್ ಬೆಂಗಳೂರಿಗೆ ಬಂದು, ಪತ್ನಿ ಕಾಣೆಯಾಗಿದ್ದಾಳೆ ಎಂದು ಮಡಿವಾಳ ಠಾಣೆ ಪೊಲೀಸರಿಗೆ ದೂರು ನೀಡಿದ್ದಾನೆ.

ಪ್ರಕರಣ ದಾಖಲಿಸಿಕೊಂಡ ಪೊಲಿಸರು ತನಿಖೆ ಕೈಗೊಂಡಿದ್ದಾರೆ. ಈ ವೇಳೆ ಪೊಲೀಸರಿಗೆ ಪೃಥ್ವಿರಾಜ್‌ ಮೇಲೆಯೇ ಅನುಮಾನ ಬಂದು ವಿಚಾರಣೆ ನಡೆಸಿದಾಗ ಆತ ತಾನೇ ಕೊಲೆಗೈದಿರುವುದಾಗಿ ಸತ್ಯ ಬಾಯಿಬಿಟ್ಟಿದ್ದಾನೆ.
BREAKING NEWS
Loading latest news...
Join our WhatsApp Channel Powered By : Online Pudu