ದೋಷದ ನೆಪವೊಡ್ಡಿ ನಕಲಿ ಜ್ಯೋತಿಷಿಯಿಂದ 5ವರ್ಷಗಳಿಂದ ಅತ್ಯಾಚಾರ: ವೀಡಿಯೋ ತೋರಿಸಿ ಬ್ಲ್ಯಾಕ್ ಮೇಲ್

ಕೆ.ಆರ್.ಪುರ: 'ತಮಗೂ, ತಮ್ಮ ಕುಟಂಬದವರಿಗೂ ದೋಷವಿದೆ. ನಿಮ್ಮ ಕುಟುಂಬದವರ ಪ್ರಾಣಕ್ಕೆ ಕುತ್ತು ಉಂಟಾಗಲಿದೆ’ ಎಂದು ನಂಬಿಸಿದ ನಕಲಿ ಜ್ಯೋತಿಷಿಯೊಬ್ಬ ಯುವತಿಯೊಬ್ಬಳ ಮೇಲೆ ಐದು ವರ್ಷಗಳಿಂದ ಲೈಂಗಿಕ ದೌರ್ಜನ್ಯ ಎಸಗಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಈ ಸಂಬಂಧ ಸಂತ್ರಸ್ತೆಯ ಹೆತ್ತವರು ಆರೋಪಿ ಆನಂದ್‌ಮೂರ್ತಿ ಹಾಗೂ ಆತನ ಪತ್ನಿ ಲತಾ ವಿರುದ್ಧ ಕೆ.ಆರ್‌.ಪುರ ಠಾಣೆಯಲ್ಲಿ ಅತ್ಯಾಚಾರ ಹಾಗೂ ಬ್ಲ್ಯಾಕ್‌ಮೇಲ್‌ ಆರೋಪದಡಿ ದೂರು ದಾಖಲಿಸಿದ್ದಾರೆ.

ಆವಲಹಳ್ಳಿ ಪೊಲೀಸ್‌ ಠಾಣೆ ವ್ಯಾಪ್ತಿಯ ಹಿರಂಡಹಳ್ಳಿಯಲ್ಲಿ ನಕಲಿ ಜ್ಯೋತಿಷಿ ಆನಂದಮೂರ್ತಿ, ಆಶ್ರಮ ಮಾಡಿಕೊಂಡಿದ್ದಾನೆ. ಈತ ಇದೇ ರೀತಿ ಹಲವು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಬ್ಲ್ಯಾಕ್‌ಮೇಲ್‌ ಮಾಡಿದ್ದಾರೆ ಎಂದೂ ಅವರು ಆರೋಪಿಸಿದ್ದಾರೆ.

ಸಂತ್ರಸ್ತ ಯುವತಿ ಐದಾರು ವರ್ಷಗಳ ಹಿಂದೆ ಸ್ನೇಹಿತೆಯ ಮನೆಯಲ್ಲಿ ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದಳು. ಈ ವೇಳೆ ಆಕೆ ಆರೋಪಿ ಆನಂದ ಮೂರ್ತಿಯನ್ನು ಭೇಟಿಯಾಗಿದ್ದಳು. ಆಗ ಯುವತಿಯನ್ನು ನೋಡಿ “ನಿಮ್ಮ ಜೀವನದಲ್ಲಿ ಗಂಡಾಂತರವಿದೆ. ಅದರಿಂದ ನಿಮ್ಮ ಕುಟುಂಬ ಸದಸ್ಯರಿಗೂ ತೊಂದರೆಯಾಗಲಿದೆ. ಪ್ರಾಣ ಕಳೆದುಕೊಳ್ಳುವ ಭೀತಿಯಿದೆ. ನಾನು ಕಾಳಿದೇವಿಯ ಆರಾಧಕನಾಗಿದ್ದು ನಿಮ್ಮ ಕಷ್ಟಗಳನ್ನು ನಿವಾರಿಸುವೆ’' ಎಂದು ಸಂತ್ರಸ್ತೆಯನ್ನು ನಂಬಿಸಿದ್ದಾನೆ. 

ಆತನ ಮಾತು ನಂಬಿದ ಸಂತ್ರಸ್ತ ಯುವತಿ ಆತ ಹೇಳಿದ್ದಲ್ಲಿ ಹೋಗಿದ್ದಾಳೆ. ಈ ವೇಳೆ ಆಕೆಗೆ ಪ್ರಜ್ಞೆ ತಪ್ಪುವ ಪದಾರ್ಥ ತಿನ್ನಿಸಿ ಆಕೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅದಕ್ಕೆ ಸ್ವಾಮೀಜಿಯ ಪತ್ನಿ ಲತಾ ಕೂಡ ಸಹಕರಿಸಿ, ಆ ಸಂದರ್ಭದ ದೃಶ್ಯವನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಿಕೊಂಡಿದ್ದಾಳೆ. ಯಾರಿಗಾದರೂ ವಿಷಯ ತಿಳಿಸಿದರೆ ಸಾಯಿಸುವುದಾಗಿ ಬೆದರಿಕೆ ಹಾಕಿದ್ದರು. ಹೀಗಾಗಿ ಸಂತ್ರಸ್ತೆ ತನ್ನ ಮನೆಯವರಿಗೆ ಹೇಳಿರಲಿಲ್ಲ. ಹೀಗಾಗಿ ಆರೋಪಿ ಸಂತ್ರಸ್ತೆ ಮೇಲೆ ಸುಮಾರು ನಾಲ್ಕೈದು ವರ್ಷಗಳಿಂದ ಆಕೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಸಂತ್ರಸ್ತೆ ಪೋಷಕರು ಆರೋಪಿಸಿದ್ದಾರೆ.

ಇದೀಗ ಸಂತ್ರಸ್ತೆಗೆ ನಿಶ್ಚಿತಾರ್ಥವಾಗಿದೆ. ಈ ವಿಚಾರ ತಿಳಿದ ಆರೋಪಿಗಳು, ಮದುವೆಯಾಗುವ ಯುವಕನನ್ನು ಭೇಟಿಯಾಗಿ ಯುವತಿಯೊಂದಿಗಿನ ಅಶ್ಲೀಲ ವೀಡಿಯೋ ತೋರಿಸಿ ನಿಶ್ಚಿತಾರ್ಥ ರದ್ದುಪಡಿಸಿದ್ದಾರೆ. ಅಲ್ಲದೆ, ಯುವತಿ ಪೋಷಕರಿಗೂ ಬೇರೆರೊಬ್ಬರೊಂದಿಗೆ ಮದುವೆ ಮಾಡಿದರೆ ವಿಡಿಯೋ ಮತ್ತು ಫೋಟೋಗಳನ್ನು ವೈರಲ್‌ ಮಾಡುವುದಾಗಿ ಬ್ಲ್ಯಾಕ್‌ಮೇಲ್ ಮಾಡಿದ್ದಾರೆ. ಈ ಸಂಬಂಧ ಸಂತ್ರಸ್ತೆ ಪೋಷಕರು ದೂರು ನೀಡಿದ್ದಾರೆ. ಆರೋಪಿ ಪರಾರಿಯಾಗಿದ್ದು, ಆತನಿಗಾಗಿ ಶೋಧ ನಡೆಯುತ್ತಿದೆ ಎಂದು ಪೊಲೀಸರು ಹೇಳಿದರು.
BREAKING NEWS
Loading latest news...
Join our WhatsApp Channel Powered By : Online Pudu