ತಾಯಿಗೆ ಬರ್ತ್ ಡೇ ವಿಶ್ ಮಾಡಲು ಫೋನ್ ಕೊಡಲಿಲ್ಲವೆಂದು ಹಾಸ್ಟೆಲ್ ನಲ್ಲಿ ಬಾಲಕ ಆತ್ಮಹತ್ಯೆ!

ಉಳ್ಳಾಲ: ತಾಯಿಯ ಹುಟ್ಟುಹಬ್ಬಕ್ಕೆ ಶುಭಾಶಯ ತಿಳಿಸಲೆಂದು ಹಾಸ್ಟೆಲ್ ವಾರ್ಡನ್ ಮೊಬೈಲ್‌ ಫೋನ್‌ ನೀಡದ್ದರಿಂದ ಮನನೊಂದ ವಿದ್ಯಾರ್ಥಿಯೋರ್ವನು ಡೆತ್​​ನೋಟ್‌ ಬರೆದಿಟ್ಟು, ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಿನ್ಯಾ ಶಾರದಾ ವಿದ್ಯಾನಿಕೇತನದಲ್ಲಿ ನಡೆದಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ಮೂಲದ 14 ವರ್ಷದ ಬಾಲಕ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ. ಜೂನ್​ 11ರಂದು ಬಾಲಕನ ತಾಯಿಯ ಹುಟ್ಟುಹಬ್ಬದ ದಿನವಾಗಿತ್ತು. ಆದ್ದರಿಂದ ತಾಯಿಹೆ ಬರ್ತ್ ಡೇ ವಿಶ್ ಮಾಡಲು ಮೊಬೈಲ್‌ ಕೇಳಿದ್ದಾರೆ. ಆದರೆ ಶಾಲಾ ಆಡಳಿತ ಮಂಡಳಿಯ ನಿಯಮದಂತೆ ಹಾಸ್ಟೆಲ್‌ ವಾರ್ಡನ್‌ ಮೊಬೈಲ್ ಕೊಡಲು ತಿರಸ್ಕರಿಸಿದ್ದಾರೆ ಎನ್ನಲಾಗಿದೆ. ಮನೆ ಮಂದಿಯೂ ಬಾಲಕನನ್ನು ಸಂಪರ್ಕಿಸಲು ಸುಮಾರು ಸಲ ಕರೆ ಮಾಡಿದ್ದರೂ ವಾರ್ಡನ್‌ ಮಾತನಾಡಲು ಬಿಟ್ಟಿರಲಿಲ್ಲ. ಆದ್ದರಿಂದ ಬಾಲಕ ರಾತ್ರಿ 12 ಗಂಟೆಯವರೆಗೂ ಮಂಕಾಗಿ ಕುಳಿತಿದ್ದ ಈತ ಹಾಸ್ಟೆಲ್‌ ಕೋಣೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೋಷಕರು ಆರೋಪಿಸಿದ್ದಾರೆ.

 'ತಾಯಿಗೆ ಹುಟ್ಟುಹಬ್ಬದ ಶುಭಾಶಯಗಳು. ಎಲ್ಲರೂ ಖುಷಿಯಾಗಿರಿ. ಶಾಲೆಗೆ ತನಗಾಗಿ ಕಟ್ಟಿರುವ ಶುಲ್ಕವನ್ನು ವಾಪಸ್​​ ಪಡೆದುಕೊಳ್ಳಿ. ನಿಮ್ಮಿಂದ ನಾನು ದೂರವಾಗುತ್ತಿದ್ದೇನೆ. ನೀವು ನನ್ನನ್ನು ದುಃಖಕ್ಕೆ ತಳ್ಳಿದಿರಿ. ಯಾರೂ ಅಳಬೇಡಿ' ಎಂದು ಬಾಲಕ ಇಂಗ್ಲಿಷ್​ನಲ್ಲಿ ಬರೆದಿರುವ ಡೆತ್‌ ನೋಟ್​​ ಲಭ್ಯವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಭಾನುವಾರ ಬೆಳಗ್ಗೆ ಈ ಘಟನೆ ಬೆಳಕಿಗೆ ಬಂದಿದೆ. ಸದ್ಯ ಮೃತದೇಹದ ಮಹಜರು ನಡೆದಿದ್ದು, ಉಳ್ಳಾಲ ಠಾಣೆ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.