
ದೆಹಲಿಯ ಬೃಹತ್ ಕಟ್ಟಡದಲ್ಲಿ ಬೆಂಕಿ ಅವಘಡ: 27 ಮಂದಿ ಸಜೀವ ದಹನ, ಅನೇಕರಿಗೆ ಗಂಭೀರ ಗಾಯ
5/13/2022 08:36:00 PM
ನವದೆಹಲಿ: ಇಲ್ಲಿನ ಮುಂಡ್ಕಾ ಮೆಟ್ರೋ ನಿಲ್ದಾಣ ಸಮೀಪದಲ್ಲಿರುವ ಬೃಹತ್ ಕಟ್ಟಡವೊಂದರಲ್ಲಿ ನಡೆದ ಬೆಂಕಿ ಅವಘಡದಲ್ಲಿ 27 ಮಂದಿ ಸಜೀವ ದಹನಗೊಂಡಿದ್ದು, ಇಬ್ಬರು ಗಾಯಗೊಂಡಿದ್ದಾರೆ. ಸ್ಥಳದಲ್ಲಿ ಭರದ ರಕ್ಷಣಾ ಕಾರ್ಯಚರಣೆ ನಡೆದಿದ್ದು ಸಾವು-ನೋವಿನ ಪ್ರಮಾಣ ಹೆಚ್ಚಾಗುವ ಸಾಧ್ಯತೆ ದಟ್ಟವಾಗಿದೆ.
ಶುಕ್ರವಾರ ಸಂಜೆಯ ವೇಳೆ ಮುಂಡ್ಕಾ ಪ್ರದೇಶದ ಮೂರು ಅಂತಸ್ತಿನ ಕಟ್ಟಡವೊಂದರಲ್ಲಿ ದಿಢೀರ್ ಬೆಂಕಿ ಕಾಣಿಸಿಕೊಂಡಿದೆ. ಪರಿಣಾಮ 16 ಮಂದಿ ದುರ್ಮರಣಕ್ಕೀಡಾಗಿದ್ದರು. ಸ್ಥಳದಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದು, ಹೆಚ್ಚಿನ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ದಾರೆ. ದೆಹಲಿ ಪೊಲೀಸರು ನೀಡಿರುವ ಮಾಹಿತಿ ಪ್ರಕಾರ, ಕಟ್ಟಡದಲ್ಲಿನ ಬೆಂಕಿ ಅವಘಡದ ಬಗ್ಗೆ ಸಂಜೆ 4.45ಕ್ಕೆ ಕರೆ ಬಂದಿದೆ. ತಕ್ಷಣವೇ ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಲಾಗಿತ್ತು. ಎರಡು ಮಹಡಿಯಲ್ಲಿ ಬೆಂಕಿ ಆವರಿಸಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ ಎಂದಿದ್ದಾರೆ.
ಈ ಕಟ್ಟಡದಲ್ಲಿ ಸುಗಂಧ ದ್ರವ್ಯ ಹಾಗೂ ಬೆಣ್ಣೆಯಂತಹ ಮಸಾಲೆ ಪದಾರ್ಥವಿತ್ತು. ಪರಿಣಾಮ ಬೆಂಕಿಯ ಜ್ವಾಲೆ ಅಧಿಕವಾಗಿದೆ ಎಂದು ತಿಳಿದು ಬಂದಿದೆ. ಪ್ರಾಣ ಉಳಿಸಿಕೊಳ್ಳಲು ಕೆಲವರು ಕಟ್ಟಡದಿಂದ ಕೆಳಗೆ ಜಿಗಿದಿದ್ದಾರೆ. ಇಲ್ಲಿ ಹೆಚ್ಚಾಗಿ ವಿವಿಧ ಅಂಗಡಿಗಳಿದ್ದವು ಎನ್ನಲಾಗಿದೆ.
ಘಟನಾ ಸ್ಥಳದಲ್ಲಿ ಸುಮಾರು 15 ಅಗ್ನಿಶಾಮಕ ವಾಹನಗಳು ರಕ್ಷಣಾ ಕಾರ್ಯದಲ್ಲಿ ತೊಡಗಿದೆ. ಇದೊಂದು ವಾಣಿಜ್ಯ ಕಟ್ಟಡವಾಗಿದೆ ಎಂದು ಡಿಸಿಪಿ ಸಮೀರ್ ಶರ್ಮಾ ತಿಳಿಸಿದ್ದಾರೆ. ಕಟ್ಟಡದೊಳಗೆ ಅನೇಕರು ಸಿಕ್ಕಿಹಾಕಿಕೊಂಡಿರುವ ಸಾಧ್ಯತೆ ಇದೆ. ಈಗಾಗಲೇ 26 ಮೃತದೇಹ ಹೊರತೆಗೆಯಲಾಗಿದೆ ಎಂದು ದೆಹಲಿ ಅಗ್ನಿಶಾಮಕ ದಳದ ನಿರ್ದೇಶಕ ಅತುಲ್ ಗಾರ್ಗ್ ತಿಳಿಸಿದ್ದಾರೆ.