ಕೆಬಿಸಿಯಲ್ಲಿ ಬಹುಮಾನ ಗೆದ್ದಿದ್ದಿರೆಂದು ಯುವತಿಗೆ 25 ಲಕ್ಷ ರೂ. ವಂಚನೆ

ಬೆಂಗಳೂರು: ಕೌನ್‌ ಬನೇಗ ಕರೋಡ್‌ ಪತಿಯಲ್ಲಿ ಬಹುಮಾನ ಗೆದ್ದಿದ್ದೀರೆಂದು ಸೈಬರ್  ಖದೀಮರು ಯುವತಿಯೊಬ್ಬರಿಗೆ 25 ಲಕ್ಷ ರೂ. ವಂಚನೆಗೈದಿರುವುದಾಗಿ ಬೆಂಗಳೂರು ಸೆನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

 ವಿಲ್ಸನ್‌ಗಾರ್ಡ್‌ನ್‌ ನಿವಾಸಿ ಸರೋಜಾ ಕುಮಾರಿ ಎಂಬವರು ಸೈಬರ್ ಖದೀಮರು ತಮಗೆ ವಂಚನೆಗೈದಿದ್ದಾರೆಂದು ಕೇಂದ್ರ ವಿಭಾಗದ ಸೆನ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸರೋಜಾ ಕುಮಾರಿಗೆ ಕೌನ್‌ ಅವರಿಗೆ ದೂರವಾಣಿ ಕರೆ ಮಾಡಿ ತಾವು ಕೌನ್ ಬನೇಗ ಕರೋಡ್‌ ಪತಿ(ಕೆಬಿಸಿ) 25 ಲಕ್ಷ ರೂ. ಗೆದ್ದಿದ್ದೀರೆಂದು ರಾಣಾ ಪ್ರತಾಪ್‌ ಸಿಂಗ್‌ ಎಂಬಾತ ನಂಬಿಸಿದ್ದ. ಬಳಿಕ ಲಕ್ಕಿ ಡ್ರಾ ಕೆಬಿಸಿ ಲಾಟರಿ ಟಿಕೆಟ್‌ ಅನ್ನು ವಾಟ್ಸ್‌ಆ್ಯಪ್‌ ಮೂಲಕ ಕಳುಹಿಸಿದ್ದಾನೆ.

ಕೆಲ ಹೊತ್ತಿನ ಬಳಿಕ ಈ ಹಣವನ್ನು ಪಡೆಯಲು ಕೆಲವೊಂದು ಶುಲ್ಕ ಪಾವತಿಸಬೇಕೆಂದು ಮೇ 13 - 18ರವರೆಗೆ 55 ಸಾವಿರ ರೂ. ವರ್ಗಾವಣೆ ಮಾಡಿಕೊಂಡು ವಂಚಿಸಿದ್ದಾನೆ. ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಸೆನ್‌ ಠಾಣೆ ಪೊಲೀಸರು ಹೇಳಿದರು.