ಪೊಳಲಿ ದೇವಸ್ಥಾನಕ್ಕೆ ಒಂದು ಲಕ್ಷ ರೂ. ಹಣ ದೇಣಿಗೆ ನೀಡಿದ ಭಿಕ್ಷುಕಿ: ಅನ್ನಪ್ರಸಾದಕ್ಕೆ ಭಿಕ್ಷೆಯ ಹಣ ಕಾಣಿಕೆ

ಬಂಟ್ವಾಳ: ಭಿಕ್ಷುಕಿಯೋರ್ವರು ಪೊಳಲಿ ಕ್ಷೇತ್ರಕ್ಕೆ 1ಲಕ್ಷ ರೂ. ದೇಣಿಗೆ ನೀಡುವ ಮೂಲಕ ತಮ್ಮ ಭಕ್ತಿಯನ್ನು ಮೆರೆದಿದ್ದಾರೆ. ಭಿಕ್ಷೆ ಬೇಡಿ  ಸಂಗ್ರಹವಾಗಿರುವ ಹಣವನ್ನು ಇವರು ಕಳೆದ ಹಲವು ವರ್ಷಗಳಿಂದ ದೇವಸ್ಥಾನಗಳಿಗೆ ಕಾಣಿಕೆಯಾಗಿ ನೀಡುತ್ತಿದ್ದಾರೆ. ಅದರಂತೆ ಈ ಬಾರಿಯೂ ಅವರು 1 ಲಕ್ಷ ರೂ. ಹಣವನ್ನು ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನಕ್ಕೆ ಅರ್ಪಿಸಿದ್ದಾರೆ.

ಅಶ್ವತ್ಥಮ್ಮ(80) ಎಂಬ ವೃದ್ಧ ಮಹಿಳೆ ಕುಂದಾಪುರದ ಗಂಗೊಳ್ಳಿ ನಿವಾಸಿ. ವಿವಿಧ ದೇವಸ್ಥಾನಗಳ ವಠಾರದಲ್ಲಿ ಭಿಕ್ಷಾಟನೆ ಮಾಡುತ್ತಿರುತ್ತಾರೆ. ಈ ಮೂಲಕ ಬಂದಿರುವ ಹಣವನ್ನು ಇದೀಗ ಪೊಳಲಿ ದೇವಸ್ಥಾನದ ಅನ್ನದಾನಕ್ಕೆ ಕಾಣಿಕೆಯಾಗಿ ನೀಡಿದ್ದಾರೆ. ವರ್ಷದ ಬಹುತೇಕ ದಿನಗಳಲ್ಲಿ ಈಕೆ ಅಯ್ಯಪ್ಪ ಮಾಲಾಧಾರಿ ಆಗಿದ್ದು ಕೊಂಡಿರುತ್ತಾರೆ., ತಮ್ಮ ಕುಟುಂಬದಲ್ಲಿ ಬಡತನವಿದ್ದರೂ ಈ ಬಗ್ಗೆ ಚಿಂತೆ ಮಾಡದೆ, ಸದಾ ಧಾರ್ಮಿಕ ಪ್ರಜ್ಞೆಯನ್ನು ತನ್ನೊಳಗೆ ಜೀವಂತವಾಗಿರಿಸಿಕೊಂಡಿದ್ದಾರೆ. 

ಪೊಳಲಿ ಕ್ಷೇತ್ರದಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವದ ಸಂದರ್ಭ ಸೇರಿದಂತೆ ಇತರ ಸಮಯದಲ್ಲಿ ಕ್ಷೇತ್ರದಲ್ಲಿ ಭಿಕ್ಷೆ ಬೇಡಿ ಸಂಗ್ರಹವಾದ ಹಣವನ್ನು ಕೂಡಿಟ್ಟು ಶುಕ್ರವಾರ ದೇವಸ್ಥಾನದ ಅನ್ನದಾನ ನಿಧಿಗೆ ಸಮರ್ಪಿಸಿದ್ದಾರೆ. ಪತಿ ಹಾಗೂ ಪುತ್ರ ಮಡಿದ ಬಳಿಕ ಅವರು ಭಿಕ್ಷೆ ಬೇಡಿ ಹಣ ಸಂಗ್ರಹದ ಕಾಯಕದಲ್ಲಿ ತೊಡಗಿದ್ದಾರೆ. ಈ ಅಜ್ಜಿಗೆ ಆರು ಮಂದಿ ಮೊಮ್ಮಕ್ಕಳಿದ್ದಾರೆ. ಭಿಕ್ಷೆ ಬೇಡಿ ಸಂಗ್ರಹವಾದ ಹಣವನ್ನು ದೇವರ ಅನ್ನಪ್ರಸಾದಕ್ಕೆ ಸಂದಾಯ ಮಾಡುವ ಈ ವೃದ್ಧೆಯ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. ಈ ಹಿಂದೆಯೂ ಅನೇಕ ದೇವಸ್ಥಾನಗಳಿಗೆ ದೇಣಿಗೆ ನೀಡಿರುವ ಈ ವೃದ್ಧೆ ಇದೀಗ ಮತ್ತೆ ಪೊಳಲಿ ದೇವಸ್ಥಾನಕ್ಕೆ 1 ಲಕ್ಷ ರೂ. ನೀಡಿದ್ದಾರೆ.
BREAKING NEWS
Loading latest news...
Join our WhatsApp Channel Powered By : Online Pudu