Mohd Saleem elected as WB Cpm Secretary - ಪಶ್ಚಿಮ ಬಂಗಾಳ ಸಿಪಿಎಂಗೆ ಯುವ ಸಾರಥಿ; ರಾಜ್ಯ ಸಮಿತಿಯಿಂದ ಹೊರಗುಳಿದ ಹಿರಿಯರು

ಪಶ್ಚಿಮ ಬಂಗಾಳ ಸಿಪಿಎಂಗೆ ಯುವ ಸಾರಥಿ; ರಾಜ್ಯ ಸಮಿತಿಯಿಂದ ಹೊರಗುಳಿದ ಹಿರಿಯರು







ಪಶ್ಚಿಮ ಬಂಗಾಳದ ಸಿಪಿಎಂ ಪಕ್ಷಕ್ಕೆ ಹೊಸ ಯುವ ಸಾರಥಿಯ ಆಯ್ಕೆಯಾಗಿದೆ. ಪಕ್ಷದ ಪ್ರಭಾವಿ ಯುವ ನಾಯಕ ಹಾಗೂ ರಾಜ್ಯಸಭಾ ಸದಸ್ಯ ಮಹಮ್ಮದ್ ಸಲೀಂ ಅವರು ಪಶ್ಚಿಮ ಬಂಗಾಳದ ಸಿಪಿಎಂ ರಾಜ್ಯ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆ.



ದಶಕಗಳ ಹಿಂದೆ ರಾಜ್ಯದಲ್ಲಿ ಅಧಿಕಾರ ಕಳೆದುಕೊಂಡ ಈ ಎಡಪಕ್ಷಕ್ಕೆ ಮತ್ತೆ ಸಂಘಟನೆ ಬಲಪಡಿಸುವ ಸವಾಲು ಎದುರಾಗಿದ್ದು, ರಾಜ್ಯ ಕಾರ್ಯದರ್ಶಿಯ ಆಯ್ಕೆ ನಿರ್ಣಾಯಕ ಎನಿಸಲಿದೆ.



80 ಸದಸ್ಯರ ನೂತನ ರಾಜ್ಯ ಸಮಿತಿಯಲ್ಲಿ ಶೇಕಡ 75ರಷ್ಟು ಹೊಸ ಮುಖಗಳು ಇವೆ ಎನ್ನಲಾಗಿದೆ. ಪಕ್ಷ ಇತ್ತೀಚೆಗೆ ಅನುಸರಿಸಿದ ಹೊಸ ಮಾನದಂಡದ ಪ್ರಕಾರ 75 ವರ್ಷ ಮೇಲ್ಪಟ್ಟ ನಾಯಕರಿಗೆ ರಾಜ್ಯ ಸಮಿತಿಯಿಂದ ಗೇಟ್ ಪಾಸ್ ನೀಡಲಾಗಿದೆ. ಹಾಗಾಗಿ ಬಹುತೇಕ ನಾಯಕರು ರಾಜ್ಯ ಸಮಿತಿಯಿಂದ ಹೊರಗುಳಿದಿದ್ದಾರೆ.



ರಾಜ್ಯ ಕಾರ್ಯದರ್ಶಿ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ನಾಲ್ಕು ಮಂದಿ ನಾಯಕರು ಸ್ಪರ್ಧಿಸಿದ್ದು, ಮಹಮ್ಮದ್ ಸಲೀಂ ತನ್ನ ಎದುರಾಳಿಗಳನ್ನು ಮಣ್ಣುಮುಕ್ಕಿಸಿ ಆಯ್ಕೆಯಾದರು. 



ಈ ಹುದ್ದೆಗೆ ಪಕ್ಷದ ಇತರ ನಾಯಕರಾದ ಸುಜನ್ ಚಕ್ರವರ್ತಿ, ಸುದೀಶ್ ಭಟ್ಟಾಚಾರ್ಯ ಮತ್ತು ಶಮೀಕ್ ಲಾಹಿರಿ ಸ್ಪರ್ಧಿಸಿದ್ದರು. ಮಹಮ್ಮದ್ ಸಲೀಂ ಅವರು ಸೂರ್ಯಕಾಂತ್ ಮಿಶ್ರ ಅವರಿಂದ ತೆರವಾದ ಸ್ಥಾನವನ್ನು ತುಂಬಿದರು.



ಕಳೆದ ವಿಧಾನಸಭಾ ಚುನಾವಣೆಯಲ್ಲಿ ಇಂಡಿಯನ್ ಸೆಕ್ಯುಲರ್ ಫ್ರೆಂಡ್ ಪಕ್ಷದೊಂದಿಗೆ ಬಾಂಧವ್ಯ ಬೆಸೆಯುವಲ್ಲಿ ಮಹಮ್ಮದ್ ಸಲೀಂ ಪ್ರಮುಖ ಪಾತ್ರವಹಿಸಿದ್ದರು ಮತ್ತು ಈ ಬಾಂಧವ್ಯವೇ ಪಕ್ಷಕ್ಕೆ ಮುಳುವಾಯಿತು. ಇತಿಹಾಸದಲ್ಲಿ ಮೊದಲ ಬಾರಿಗೆ ಸಿಪಿಎಂ ರಾಜ್ಯ ವಿಧಾನಸಭೆಯಲ್ಲಿ ಶೂನ್ಯ ಸಂಪಾದನೆ ಮಾಡಿತ್ತು. ಈ ನಿರ್ಧಾರಕ್ಕೆ ಪಕ್ಷದಲ್ಲೇ ಭಾರೀ ಟೀಕೆ ವ್ಯಕ್ತವಾಗಿತ್ತು.



ಆದರೆ ಆಶಾದಾಯಕವಾಗಿರುವ ಬೆಳವಣಿಗೆಯೊಂದರಲ್ಲಿ, ಕಳೆದ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಸಿಪಿಎಂ ಮತಗಳಿಕೆಯಲ್ಲಿ ಏರುಗತಿಯನ್ನು ದಾಖಲಿಸಿದೆ.


BREAKING NEWS
Loading latest news...
Join our WhatsApp Channel Powered By : Online Pudu