-->

ಮಾಯಾಂಗನೆಯ ಮಾತಿನ ಮೋಡಿಗೆ ಮರುಳಾದ ಹನಿಟ್ರ್ಯಾಪ್ ಗೊಳಗಾದ ಉಪ ತಹಶೀಲ್ದಾರ್:  ಆರೋಪಿಗಳು ಕಾಡಿದ್ದು ಅಷ್ಟಿಷ್ಟಲ್ಲ!

ಮಾಯಾಂಗನೆಯ ಮಾತಿನ ಮೋಡಿಗೆ ಮರುಳಾದ ಹನಿಟ್ರ್ಯಾಪ್ ಗೊಳಗಾದ ಉಪ ತಹಶೀಲ್ದಾರ್: ಆರೋಪಿಗಳು ಕಾಡಿದ್ದು ಅಷ್ಟಿಷ್ಟಲ್ಲ!

ಬೆಂಗಳೂರು: ಯುವತಿಯೋರ್ವಳಿಂದ ಬಂದಿರುವ ಫೇಸ್​ಬುಕ್​ ಫ್ರೆಂಡ್​ ರಿಕ್ವೆಸ್ಟ್​ ಸ್ವೀಕರಿಸಿರುವ ಉಪ ತಹಶೀಲ್ದಾರ್​ವೊಬ್ಬರು ‘ಹನಿಟ್ರ್ಯಾಪ್​​’ಗೆ ಸಿಲುಕಿದ್ದಾರೆ. ಆಕೆ ಹೇಳಿದಂತೆ ಹೋಟೆಲ್​ಗೆ ಹೋದ ಉಪ ತಹಶೀಲ್ದಾರ್​ಗೆ ಪ್ರಜ್ಞೆತಪ್ಪುವ ಔಷಧಿ ಕೊಟ್ಟು ಅಶ್ಲೀಲ ವೀಡಿಯೋ ಚಿತ್ರೀಕರಿಸಿ ಭಾರೀ ಮೊತ್ತದ ಹಣಕ್ಕಾಗಿ ಬೇಡಿಕೆಯಿಟ್ಟಿದ್ದ ಆರೋಪಿಗಳನ್ನು ಕೆ.ಆರ್​. ಪುರ ಪೊಲೀಸರು ಬಂಧಿಸಿದ್ದಾರೆ.

ಕೋಡಿಗೆಹಳ್ಳಿಯ ನಿವಾಸಿಗಳಾದ ಗಣಪತಿ ನಾಯಕ್​, ಕಿಶನ್​ ಹಾಗೂ ಕೇಶವ್​ ಬಂಧಿತರು. ಪ್ರಕರಣದಲ್ಲಿ ಗದಗ ಮೂಲದ ಜ್ಯೋತಿ ವಿಶ್ವನಾಥ್​ ತೋಪಗಿ ತಲೆಮರೆಸಿದ್ದಾಳೆ. ಪೊಲೀಸರು ಈಕೆಗಾಗಿ ಪೊಲೀಸರು ನಡೆಸುತ್ತಿದ್ದಾರೆ. ಹೊಸಕೋಟೆ ನಿವಾಸಿ ಕೋಲಾರ ಜಿಲ್ಲೆಯ ಉಪ ತಹಶೀಲ್ದಾರ್​ ಗೌತಮ್​ (40) ಹನಿಟ್ರ್ಯಾಪ್​ಗೆ ಒಳಗಾದವರು. 

2021ರ ಜುಲೈನಲ್ಲಿ ಉಪ ತಹಶೀಲ್ದಾರ್​ ಕಂಟನಲ್ಲೂರು ಕ್ರಾಸ್​ ಬಳಿಯ ಹೋಟೆಲ್​ ಒಂದಕ್ಕೆ ಊಟ ಮಾಡಲು ಬಂದಿದ್ದರು. ಈ ಸಂದರ್ಭ ಆರೋಪಿತೆ ಜ್ಯೋತಿ ವಿಶ್ವನಾಥ್​ ತೋಪಗಿ ತನ್ನನ್ನು ಅವರಿಗೆ ಪರಿಚಯ ಮಾಡಿಕೊಂಡಿದ್ದಳು. ಆಗ ಗೌತಮ್​ ಮೊಬೈಲ್​ ಸಂಖ್ಯೆ​ ಪಡೆದು, ಫೇಸ್​ಬುಕ್​ನಲ್ಲಿ ಫ್ರೆಂಡ್​ ರಿಕ್ವೆಸ್ಟ್​ ಕಳುಹಿಸಿದ್ದಳು. ಬಳಿಕ ಮೊಬೈಲ್​ ವಾಟ್ಸ್​ಆಪ್​, ಮೆಸೆಂಜರ್​ನಲ್ಲಿ ನಿರಂತರವಾಗಿ ಸಂದೇಶ ಕಳುಹಿಸುತ್ತಾ ಗೌತಮ್ ತನ್ನತ್ತ ಆಕರ್ಷಿತರಾಗುವಂತೆ ಮಾಡಿದ್ದಳು.

ಜ್ಯೋತಿಯ ಮೋಹಕ ಮಾತಿಗೆ ಮರುಳಾಗಿದ್ದ ಉಪ ತಹಶೀಲ್ದಾರ್​ ಗೌತಮ್​, ಆಕೆಯ ಮನವಿಯ ಮೇರೆಗೆ ಒಂದೆರಡು ಬಾರಿ ಹೋಟೆಲ್​ನಲ್ಲಿ ಭೇಟಿಯಾಗಿ ಜೊತೆಗೆ ಊಟವನ್ನು ಮಾಡಿದ್ದರು. ಇದಾದ ಮೇಲೆ ಆರಂಭವಾಯಿತು ಆಕೆಯ ಅಸಲಿ ಮುಖ. ಕೆಲ ಸಮಯದ ಬಳಿಕ ಭಟ್ಟರಹಳ್ಳಿಯ ಹೋಟೆಲ್​ವೊಂದಕ್ಕೆ ಗೌತಮ್​ ಅವರನ್ನು ಕರೆಸಿಕೊಂಡಿದ್ದ ಜ್ಯೋತಿ, ಅದೇ ಬಿಲ್ಡಿಂಗ್​ನ ಮೇಲ್ಭಾಗದ ರೂಂಗೆ ಕರೆದೊಯ್ದಿದ್ದಳು. ಅಲ್ಲಿ  ಅಮಲಾಗುವ ಜ್ಯೂಸ್​ ಕೊಟ್ಟಿದ್ದಳು. ಗೌತಮ್​ ಜ್ಯೂಸ್​ ಕುಡಿದ ಸ್ವಲ್ಪ ಹೊತ್ತಿನಲ್ಲಿ ಪ್ರಜ್ಞೆ ಕಳೆದುಕೊಂಡಿದ್ದಾರೆ. ಆಗ ಅವರ ಬಟ್ಟೆಬಿಚ್ಚಿ ಅವರೊಂದಿಗೆ ಖಾಸಗಿ ಕ್ಷಣಗಳನ್ನು ಕಳೆದಿರುವ ಫೋಟೊವನ್ನು ಜ್ಯೋತಿ ತನ್ನ ಮೊಬೈಲ್​ನಲ್ಲಿ ವಿಡಿಯೋ ಮಾಡಿಕೊಂಡಿದ್ದರು. ಕೆಲ ಹೊತ್ತಿನ ಬಳಿಕ ಗೌತಮ್​ಗೆ ಎಚ್ಚರವಾದಾಗ ಆತ ಅರೆನಗ್ನಾವಸ್ಥೆಯಲ್ಲಿದ್ದರು. 

ಕಳೆದ ಫೆ.24ರಂದು ಕೋಲಾರದ ಎ.ಸಿ. ಕಚೇರಿಗೆ ಬಂದು ಗೌತಮ್​ ಅವರನ್ನು ಭೇಟಿಯಾಗಿದ್ದ ಆರೋಪಿಗಳಾದ ಗಣಪತಿ ನಾಯಕ್​, ರಮೇಶ್​ಗೌಡ, ಸಂತೋಷ್​ ತಮ್ಮನ್ನು ವಕೀಲರು ಎಂದು ಪರಿಚಯಿಸಿಕೊಂಡಿದ್ದರು. ಬಳಿಕ ಜ್ಯೋತಿ ಸೆರೆಹಿಡಿದಿದ್ದ ಅಶ್ಲೀಲ ವೀಡಿಯೋ ತೋರಿಸಿ, 25 ಲಕ್ಷ ರೂ.ಗೆ ಬೇಡಿಕೆಯಿಟ್ಟಿದ್ದರು. ಹಣ ಕೊಡದಿದ್ದರೆ ವೀಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್​ಲೋಡ್​ ಮಾಡುವುದಾಗಿ ಬೆದರಿಕೆ ಒಡ್ಡಿದ್ದರು. 

ಆರೋಪಿಗಳ ಬೆದರಿಕೆಗೆ ಗೌತಮ್​ ಜಗ್ಗದಿದ್ದಾಗ, ಮಾ.10ರಂದು ಮತ್ತೆ ಆರೋಪಿ ಗಣಪತಿ ನಾಯಕ್​ ತಾವಿದ್ದಲ್ಲಿಗೆ ಗೌತಮ್​ ಅವರನ್ನು ಕರೆಸಿಕೊಂಡು ಮಾ.17ರೊಳಗೆ 10 ಲಕ್ಷ ರೂ. ಕೊಡುವಂತೆ ಬೆದರಿಸಿದ್ದ. ಇದರಿಂದ ಬೆದರಿದ ಗೌತಮ್​ ಈ ಬಗ್ಗೆ ಕೆ.ಆರ್.​ಪುರ ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಗೌತಮ್​ ಮೂಲಕ ಆರೋಪಿಗಳಿಗೆ ಕರೆ ಮಾಡಿಸಿ, ಹಣ ಕೊಡುವುದಾಗಿ ಯಲಹಂಕದ ಕೊಡಿಗೇಹಳ್ಳಿ ಬಳಿ ಬರುವಂತೆ ಕರೆಸಿಕೊಂಡಿದ್ದರು. 

ಆರೋಪಿಗಳು ಕಾರಿನಲ್ಲಿ ಬರುತ್ತಿದ್ದಂತೆ ಸಿವಿಲ್​ ಧಿರಿಸಿನಲ್ಲಿದ್ದ ಪೊಲೀಸರು ಕಾರು ಸುತ್ತುವರಿದು ಬಂಧಿಸಲು ಮುಂದಾಗಿದ್ದರು. ಆದರೆ ಅಷ್ಟೊತ್ತಿಗಾಗಲೇ ಆರೋಪಿಗಳು ಪರಾರಿಯಾಗಿದ್ದರು. ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ಜನಪ್ರಿಯರಾಗಿರುವ ವಕೀಲರೊಬ್ಬರು ಗೌತಮ್​ಗೆ ಕರೆ ಮಾಡಿ ‘ಹಣ ಕೊಡಲು ಹೇಳಿದರೆ ರೌಡಿಗಳನ್ನು ಕರೆಸುತ್ತೀಯಾ?’ ಎಂದು ಬೆದರಿಕೆ ಒಡ್ಡಿದ್ದರು. ಈ ಬಗ್ಗೆ  ಗೌತಮ್​ ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ಆ ವಕೀಲರನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಿದಾಗ, ಆರೋಪಿಗಳನ್ನು ತಮ್ಮ ಕಚೇರಿಯಲ್ಲೇ ಬಚ್ಚಿಟ್ಟುಕೊಂಡಿರುವುದಾಗಿ ಬಾಯಿ‌ಬಿಟ್ಟಿದ್ದಾರೆ. 

ತಕ್ಷಣ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳು ಸಾಮಾಜಿಕ ಜಾಲತಾಣದಲ್ಲಿ ಜನಪ್ರಿಯರಾಗಿರುವ ವಕೀಲರೊಬ್ಬರ ಸಹಚರರು ಎಂಬುದು ಗೊತ್ತಾಗಿದೆ. ದೂರುದಾರರು ಬ್ಲ್ಯಾಕ್​ಮೇಲ್​ನಿಂದ ಆತಂಕಗೊಂಡು ಆರೋಪಿಗಳಿಗೆ ಈ ಹಿಂದೆ 5 ಲಕ್ಷ ರೂ. ನೀಡಿದ್ದರು ಎನ್ನಲಾಗಿದೆ. ಹನಿಟ್ರ್ಯಾಪ್​ ಕೇಸ್​ನಲ್ಲಿ ಆ ಜನಪ್ರಿಯ ವಕೀಲರ ಪಾತ್ರವೇನು? ಎಂಬುದು ತನಿಖೆಯಿಂದ ಬೆಳಕಿಗೆ ಬರಬೇಕಿದೆ. ಆರೋಪಿಗಳನ್ನು 10 ದಿನ ವಶಕ್ಕೆ ಪಡೆದಿರುವ ಪೊಲೀಸರು ಇದೇ ಮಾದರಿಯಲ್ಲಿ ಈ ಹಿಂದೆ ಎಷ್ಟು ಜನರಿಗೆ ಹನಿಟ್ರ್ಯಾಪ್​ ಮಾಡಿದ್ದಾರೆ? ಎಂಬುದರ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

Ads on article

Advertise in articles 1

advertising articles 2

Advertise under the article