ರೈಲಿನಲ್ಲಿ ಸಹ ಪ್ರಯಾಣಿಕೆ ಕೆನ್ನೆಗೆ ಮುತ್ತಿಟ್ಟ ಯುವಕನಿಗೆ 1ವರ್ಷ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿದ ನ್ಯಾಯಾಲಯ: ನಡೆಯಿತು 7 ವರ್ಷ ವಿಚಾರಣೆ Court

ಮುಂಬೈ(ಮಹಾರಾಷ್ಟ್ರ): ಸಣ್ಣಪುಟ್ಟ ಅಪರಾಧಗಳೂ ಒಬ್ಬನನ್ನು ಯಾವ ರೀತಿ ಸಂಕಷ್ಟಕ್ಕೆ ಸಿಲುಕಿಸಬಹುದು ಎನ್ನುವುದಕ್ಕೆ ಈ ಒಂದು ಘಟನೆಯೇ ಸಾಕ್ಷಿ. ರೈಲು ಪ್ರಯಾಣದ ವೇಳೆ ಸಹ ಪ್ರಯಾಣಿಕೆಯ ಕೆನ್ನೆಗೆ ಮುತ್ತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬನಿಗೆ ಕೋರ್ಟ್ 1 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 10 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ. 

7 ವರ್ಷಗಳ ಹಿಂದೆ  ಮಾಡಿರುವ ಅಪರಾಧಕ್ಕಾಗಿ ಗೋವಾದ ಪಣಜಿ ನಿವಾಸಿ ಕಿರಣ್ ಸುಜಾ ಎಂಬ ಆರೋಪಿ ಇದೀಗ ಶಿಕ್ಷೆಗೊಳಗಾಗಿದ್ದಾನೆ.

2015ರ ಆಗಸ್ಟ್ 23ರಂದು ಮಹಿಳೆಯೋರ್ವರು ತಮ್ಮ ಸ್ನೇಹಿತರೊಂದಿಗೆ ಗೋವಂಡಿಯಿಂದ ಹಾರ್ಬರ್ ರಸ್ತೆಯಲ್ಲಿರುವ ಸಿಎಸ್‌ಎಂಟಿ ರೈಲು ನಿಲ್ದಾಣಕ್ಕೆ ಪ್ರಯಾಣಿಸುತ್ತಿದ್ದರು. ರೈಲು ಛತ್ರಪತಿ ಶಿವಾಜಿ ಮಹಾರಾಜ ಟರ್ಮಿನಸ್‌ನ ಪ್ಲಾಟ್‌ಫಾರ್ಮ್ ಸಂಖ್ಯೆ 1ಕ್ಕೆ ಆಗಮಿಸುತ್ತಿದ್ದಂತೆ ಆರೋಪಿ ಕಿರಣ್ ಸುಜಾ, ಈ ಮಹಿಳೆಯ ಬಲ ಕೆನ್ನೆಗೆ ಮುತ್ತಿಟ್ಟಿದ್ದಾನೆ. ಈ ಬಗ್ಗೆ ಸಂತ್ರಸ್ತ ಮಹಿಳೆ ಸಿಎಸ್‌ಎಂಟಿ ರೈಲ್ವೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. 

ಸಂತ್ರಸ್ತೆ ನೀಡಿರುವ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ಕಿರಣ್ ಸುಜಾ ವಿರುದ್ಧ ಸೆಕ್ಷನ್ 354, 354 (ಎ) (1) ಅಡಿ ಪ್ರಕರಣ ದಾಖಲಿಸಿದ್ದಾರೆ. ಅಂದಿನ ಸಹಾಯಕ ಪೊಲೀಸ್ ನಿರೀಕ್ಷಕ ಗಣಪತ್ ಗೊಂಡ್ಕೆ ಆರೋಪಿಯನ್ನು ಬಂಧಿಸಿ ತನಿಖೆ ಆರಂಭಿಸಿದ್ದರು. ವಿಚಾರಣೆಯ ವೇಳೆ ಆರೋಪಿಯ ವಿರುದ್ಧ ಪ್ರಬಲ ಸಾಕ್ಷ್ಯಗಳನ್ನು ಸಂಗ್ರಹಿಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ.

ಕೋರ್ಟ್ ನಲ್ಲಿ ಈ ಪ್ರಕರಣದ ವಿಚಾರಣೆ 7 ವರ್ಷಗಳ ಕಾಲ ನಡೆದಿತ್ತು. ಎಲ್ಲಾ ಸಾಕ್ಷಿಗಳನ್ನು ವಿಚಾರಣೆ ಮಾಡಿದ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ವಿ.ಪಿ.ಕೇದಾರ್ ಅವರು ಕಿರಣ್ ಸುಜಾ ಮೇಲಿನ ಆರೋಪ ಸಾಬೀತಾಗಿದೆ ಎಂದು ಘೋಷಿಸಿ 1 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 10,000 ರೂ ದಂಡವನ್ನು ವಿಧಿಸಿ ತೀರ್ಪು ನೀಡಿದ್ದಾರೆ. 

BREAKING NEWS
Loading latest news...
Join our WhatsApp Channel Powered By : Online Pudu