
ಐದು ತಿಂಗಳ ಹಿಂದೆ ನಾಪತ್ತೆಯಾಗಿದ್ದ ಯುವ ಪ್ರೇಮಿಗಳು ಆತ್ಮಹತ್ಯೆ
2/23/2022 01:59:00 AM
ಹುಣಸೂರು: ಪ್ರೀತಿಗೆ ಮನೆಯವರ ವಿರೋಧವಿದೆಯೆಂದು ಐದು ತಿಂಗಳ ಹಿಂದೆ ಮನೆ ತೊರೆದಿದ್ದ ಯುವ ಪ್ರೇಮಿಗಳು ಆತ್ಮಹತ್ಯೆಗೆ ಶರಣಾಗಿರುವ ಘಟನೆ ತಾಲೂಕಿನ ಸಿಂಗರಮಾರನಹಳ್ಳಿಯಲ್ಲಿ ನಡೆದಿದೆ.
ಹುಣಸೂರು ತಾಲೂಕಿನ ಬಿಳಿಕೆರೆ ಹೋಬಳಿಯ ಸಿಂಗರಮಾರನಹಳ್ಳಿ ಗ್ರಾಮದ ನಿವಾಸಿ ಕುಮಾರ್ ಎಂಬವರ ಪುತ್ರಿ ಅರ್ಚನಾ (17) ಹಾಗೂ ಅದೇ ಗ್ರಾಮದ ನಿವಾಸಿ ವಿಜಯಕುಮಾರ್ ಎಂಬವರ ಪುತ್ರ ರಾಕೇಶ್ (24) ನೇಣಿಗೆ ಶರಣಾದ ಪ್ರೇಮಿಗಳು.
ಕುಮಾರ್ ಅವರು ತಮ್ಮ ಪುತ್ರಿ ಅರ್ಚನಾ ನಾಪತ್ತೆಯಾಗಿರುವ ಬಗ್ಗೆ ಬಿಳಿಕೆರೆ ಠಾಣೆಯಲ್ಲಿ 2021 ಸೆಪ್ಟೆಂಬರ್ 23ರಂದು ದೂರು ದಾಖಲಿಸಿದ್ದರು. ಒಂದು ವಾರದ ಬಳಿಕ ವಿಜಯ್ ಕುಮಾರ್ ಅವರು ತಮ್ಮ ಪುತ್ರ ನಾಪತ್ತೆಯಾಗಿರುವ ಬಗ್ಗೆ ದೂರು ನೀಡಿದ್ದರು. ಆದರೆ ಈವರೆಗೆ ಇಬ್ಬರೂ ಪತ್ತೆಯಾಗಿರಲಿಲ್ಲ.
ನಿನ್ನೆ ರಾತ್ರಿ ಗ್ರಾಮಕ್ಕೆ ಬಂದಿದ್ದ ಇಬ್ಬರೂ ಪ್ರೇಮಿಗಳು ಊರಿನ ಹೊರವಲಯದ ಜಮೀನಿನಲ್ಲಿರುವ ಹಲಸಿನಮರಕ್ಕೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸ್ಥಳಕ್ಕೆ ಬಿಳಿಕೆರೆ ಠಾಣೆ ಎಸ್.ಐ. ರವಿಕುಮಾರ್ ಭೇಟಿ ನೀಡಿ ಪರಿಶೀಲಿಸಿದ್ದಾರೆ.