UDUPI: ಚಿನ್ನದಂಗಡಿಯ ಯುವತಿಯ ಹೃದಯ ಕದಿಯಲು ಹೋಗಿ ವಿಫಲನಾದವ ಆಕೆಗೇ ಇರಿದು ಮೃತದೇಹವಾಗಿ ಪತ್ತೆಯಾದ

ಉಡುಪಿ: ಚಿನ್ನದಂಗಡಿಯ ಯುವತಿಯ ಹೃದಯ ಕದಿಯಲು ಹೋಗಿ ವಿಫಲನಾದವ ಕೊನೆಗೇ ಆಕೆಗೆ ಚೂರಿಯಿಂದ ಇರಿದು ಬಳಿಕ ನೇಣು ಬಿಗಿದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಉಡುಪಿ ತಾಲೂಕಿನ ಕೋಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. 

ರಿಕ್ಷಾ ಚಾಲಕ ರಾಘವೇಂದ್ರ ಕುಲಾಲ್​ ಮೃತದೇಹವಾಗಿ ಪತ್ತೆಯಾದ ಯುವಕ. ಉಡುಪಿ ಜಿಲ್ಲೆಯ ಕುಂದಾಪುರ ಸಮೀಪದ ಶಿರಿಯಾರದಲ್ಲಿ ಪ್ರಕರಣ ನಡೆದಿದೆ.  

ರಾಘವೇಂದ್ರ ಕುಲಾಲ್ ಉಡುಪಿ ತಾಲೂಕಿನ ಶಿರಿಯಾರದ ಚಿನ್ನದಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಯುವತಿಯನ್ನು ಏಕಮುಖವಾಗಿ ಪ್ರೀತಿಸುತ್ತಿದ್ದ. ಆಕೆ ಒಲ್ಲೆಯೆಂದರೂ ತನ್ನನ್ನು ಪ್ರೀತಿಸುವಂತೆ ದಿನನಿತ್ಯ ಪೀಡಿಸುತ್ತಿದ್ದ ಎನ್ನಲಾಗಿದೆ. ನಿನ್ನೆ ಮಧ್ಯಾಹ್ನ ಯುವತಿ ಊಟ ಮಾಡಲೆಂದು ಚಿನ್ನದಂಗಡಿಯಿಂದ ಹೊರಬಂದ ಸಂದರ್ಭದಲ್ಲಿ ಹಿಂಬಾಲಿಸಿದ ರಾಘವೇಂದ್ರ ಕುಲಾಲ್ ಶಿರಿಯಾರದ ರಾಮಮಂದಿರದ ಬಳಿ ಆಕೆಗೆ ಚೂರಿಯಿಂದ ಇರಿದು ಪರಾರಿಯಾಗಿದ್ದ. ಅದೃಷ್ಟವಶಾತ್ ಆಕೆ ಪ್ರಾಣಾಪಾಯದಿಂದ ಪಾರಾಗಿದ್ದಾಳೆ. 

ಆದರೆ ರಾಘವೇಂದ್ರ ಕುಲಾಲ್ ಚೂರಿಯಿಂದ ಇರಿದು ಪರಾರಿಯಾದಾತ ಅಲ್ಲಿಯೇ ಸಮೀಪವಿದ್ದ ಹಾಡಿಗೆ ಹೋಗಿ ಮರವೊಂದಕ್ಕೆ ನೇಣು ಬಿಗಿದುಕೊಂಡಿದ್ದಾನೆ. ಸಂಜೆ ವೇಳೆಗೆ ಆತನ ಮೃತದೇಹ ಪತ್ತೆಯಾಗಿದೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



BREAKING NEWS
Loading latest news...
Join our WhatsApp Channel Powered By : Online Pudu