-->

ಮೊದಲ ಪತ್ನಿಯ ಕೊಲೆಗೈದ ಪಾತಕಿ ಎರಡನೇ ಪತ್ನಿ ಸೇರಿದಂತೆ ತ್ರಿಬಲ್ ಮರ್ಡರ್ ಮಾಡಿದ: ಈತನ ದುಷ್ಕೃತ್ಯದಿಂದ ನಾಲ್ವರು ಗಂಭೀರ

ಮೊದಲ ಪತ್ನಿಯ ಕೊಲೆಗೈದ ಪಾತಕಿ ಎರಡನೇ ಪತ್ನಿ ಸೇರಿದಂತೆ ತ್ರಿಬಲ್ ಮರ್ಡರ್ ಮಾಡಿದ: ಈತನ ದುಷ್ಕೃತ್ಯದಿಂದ ನಾಲ್ವರು ಗಂಭೀರ

ಮೈಸೂರು: ಎರಡೆರಡು ಮದುವೆಯಾಗಿರುವ ಪಾತಕಿಯೋರ್ವನು ಇಬ್ಬರು ಪತ್ನಿಯರನ್ನೂ ಹತ್ಯೆ ಮಾಡಿರುವ ಘೋರ ಪಾತಕ ಕೃತ್ಯ ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ನವಿಲೂರು ಗ್ರಾಮದಲ್ಲಿ ನಡೆದಿದೆ. 

ಈರಯ್ಯ ಎಂಬ ಪಾತಕಿಯೇ ಈ ದುಷ್ಕೃತ್ಯ ಎಸಗಿದಾತ. ಈರಯ್ಯ ಈ ಹಿಂದೆ ಒಂದು ಮದುವೆಯಾಗಿದ್ದ. ಆದರೆ ಆಕೆಯೊಂದಿಗೆ ಜಗಳ ಮಾಡಿ ಕೊಲೆ ಮಾಡಿದ್ದ. ಈ ಕೃತ್ಯ ಎಸಗಿರುವುದಕ್ಕೆ ಈರಯ್ಯನಿಗೆ ಜೈಲು ಶಿಕ್ಷೆಯಾಗಿತ್ತು. ಜೈಲಿನಿಂದ ಹೊರಬಂದ ಈರಯ್ಯ ಮಹದೇವಮ್ಮ ಎಂಬಾಕೆಯೊಂದಿಗೆ  ಮದುವೆಯಾಗಿದ್ದ. ಆಕೆ ಗರ್ಭಿಣಿಯಾಗಿದ್ದು, ಇದೀಗ ಜಗಳವಾಡಿ ಆಕೆಯನ್ನೂ ಹತ್ಯೆ ಮಾಡಿದ್ದಾನೆ. 

ಮಾತ್ರವಲ್ಲದೆ, ತಡೆಯಲು ಬಂದ ನಾಲ್ವರ ಮೇಲೆ ಮಾರಕಾಸ್ತ್ರದಿಂದ ದಾಳಿ ನಡೆಸಿದ್ದಾನೆ. ತನ್ನ ಮನೆಯ ಮುಂಭಾಗದ ಮನೆಯ ವ್ಯಕ್ತಿಯೊಂದಿಗೆ ಜಗಳವಾಡಿಕೊಂಡಿದ್ದ ಈರಯ್ಯ, ಆತನ ಹೆತ್ತವರ ಮೇಲೂ ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಕೊಂದು ಹಾಕಿದ್ದಾನೆ. ಈತನ ದುಷ್ಕೃತ್ಯಕ್ಕೆ ಪತ್ನಿ ಮಹದೇವಮ್ಮ ಸೇರಿದಂತೆ ಎದುರು ಮನೆಯ ನಿಂಗಮ್ಮ(50) ಮತ್ತು ಮಾದಯ್ಯ(60) ಬಲಿಯಾಗಿದ್ದಾರೆ. 

ದಾಳಿಗೊಳಗಾಗಿರುವ ನಿಂಗಮ್ಮನವರ ತಂದೆ, ತಾಯಿ ಹಾಗೂ ಇನ್ನಿಬ್ಬರ ಸ್ಥಿತಿ ಗಂಭೀರವಾಗಿದೆ. ಇದೀಗ ಅವರು ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ. ಗಾಯಾಳುಗಳನ್ನು ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. 

ಪೊಲೀಸರು ಸ್ಥಳಕ್ಕೆ ಆಗಮಿಸಿ, ಆರೋಪಿಯನ್ನು ಬಂಧಿಸಿದ್ದಾರೆ. ಎಸ್ಪಿ ಆರ್.ಚೇತನ್, ಡಿವೈಎಸ್ಪಿ ಗೋವಿಂದರಾಜ್, ಸರ್ಕಲ್ ಇನ್ ಸ್ಪೆಕ್ಟರ್ ಲಕ್ಷ್ಮಿಕಾಂತ ತಳವಾರ್, ಇನ್ ಸ್ಪೆಕ್ಟರ್ ಶಿವನಂಜ ಶೆಟ್ಟಿ ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದಾರೆ.

Ads on article

Advertise in articles 1

advertising articles 2

Advertise under the article