ಮಂಗಳೂರು: ತಾವರೆ ಗಿಡ ಹಾಕಲು ಹೋದ 18 ವರ್ಷದ ವಿದ್ಯಾರ್ಥಿನಿ ಶ್ರೇಯಾ ಕೆರೆಗೆ ಬಿದ್ದು ಸಾವು


ಮಂಗಳೂರು:  ಕೆರೆಗೆ ತಾವರೆಗಿಡ ಹಾಕಲು ಹೋದ ಪಿಯುಸಿ ವಿದ್ಯಾರ್ಥಿನಿ  ಕೆರೆಗೆ ಬಿದ್ದು ಸಾವನ್ನಪ್ಪಿದ  ಘಟನೆ  ಕಡಬ ತಾಲೂಕಿನ ಕೊಣಾಲು ಗ್ರಾಮದ ಅಂಬರ್ಜೆ ಎಂಬಲ್ಲಿ  ನಡೆದಿದೆ.


ಇಲ್ಲಿನ ಮೋಹನ ಹಾಗೂ ವಿನೋದ ದಂಪತಿಗಳ ಪುತ್ರಿ ಶ್ರೇಯಾ(18) ಮೃತಪಟ್ಟವರು. ಇವರು ರಾಮಕುಂಜೇಶ್ವರ ಪ.ಪೂ.ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಯಾಗಿದ್ದಾರೆ.

ಶ್ರೇಯಾ ಇಂದು ಬೆಳಗ್ಗೆ ತಮ್ಮ ಮನೆ ಸಮೀಪದಲ್ಲಿರುವ  ಕೆರೆಗೆ ತಾವರೆ ಹೂವಿನ ಗಿಡಗಳನ್ನು ಹಾಕಲೆಂದು ಹೋಗಿದ್ದಳು. ಈ  ವೇಳೆ ಶ್ರೇಯಾ  ಆಕಸ್ಮಿಕವಾಗಿ ಕಾಲುಜಾರಿ ಕೆರೆ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.

ಶಾಲೆಗೆ ಹೋಗಲು ಸಮಯವಾಗುತ್ತಿದೆ ಬೇಗ ಹೋಗಿ ಕೆರೆಗೆ ತನ್ನಲ್ಲಿರುವ ತಾವರೆ ಹೂ ಗಿಡಗಳನ್ನು ಹಾಕಿ ಬರುತ್ತೇನೆ ಎಂದು  ಶ್ರೇಯಾ ಮನೆಯಲ್ಲಿ ಹೇಳಿ  ಕೆರೆಗೆ ಹೋಗಿದ್ದಳು.  ಆಕೆ ನಂತರದಲ್ಲಿ ಮನೆಗೆ ಹಿಂತಿರುಗಿ ಬಾರದೇ ಇದ್ದ ಹಿನ್ನೆಲೆಯಲ್ಲಿ ಮನೆಯವರು ಕೆರೆಯ ಕಡೆ ಹೋಗಿದ್ದ ವೇಳೆ ಶ್ರೇಯಾ ಕೆರೆ ನೀರಿನಲ್ಲಿ ಮುಳುಗಿ  ಸಾವನ್ನಪ್ಪಿರುವುದು ತಿಳಿದುಬಂದಿದೆ