ಮೈಸೂರು: ಪ್ರೀತಿಸಿದಾತ ವಂಚನೆಗೈದಿರುವುದರಿಂದ ಮನನೊಂದ ಯುವತಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಎಎಸ್ಐ ಸೇರಿದಂತೆ 8 ಮಂದಿಯ ವಿರುದ್ಧ ಪ್ರಕರಣ ದಾಖಲಾಗಿದೆ.
ಆತ್ಮಹತ್ಯೆಗೂ ಮುನ್ನ ತನಗೆ ನ್ಯಾಯ ದೊರಕಿಸಿಕೊಡುವಂತೆ ಯುವತಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಳು. ಆದರೆ ಪೊಲೀಸರು ಆಕೆಗೆ ಸರಿಯಾಗಿ ಸ್ಪಂದಿಸಿರಲಿಲ್ಲ ಎಂಬ ಆರೋಪವೂ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ನಂಜನಗೂಡು ಠಾಣೆಯ ವೃತ್ತ ನಿರೀಕ್ಷಕರು ನೀಡಿರುವ ವರದಿ ಆಧಾರದ ಮೇಲೆ ಸುರೇಶ್, ಗುರುಮಲ್ಲು, ಲೋಕೇಶ್, ಜಡೆ ಮಲ್ಲಯ್ಯ, ಮಲ್ಲಿಕಾರ್ಜುನಯ್ಯ, ಗೌರಮ್ಮ, ರಾಜಮ್ಮ ಸೇರಿದಂತೆ ಎಎಸ್ಐ ಶಿವರಾಜು ವಿರುದ್ಧ ಎಫ್ಐಆರ್ ದಾಖಲಾಗಿದೆ.
ನಂಜನಗೂಡು ತಾಲೂಕಿನ ಚೆನ್ನಪಟ್ಟಣ ಗ್ರಾಮದ ಯುವತಿ ಶೋಭಾ ಎಂಬಾಕೆಯನ್ನು, ಅದೇ ಗ್ರಾಮದ ಲೋಕೇಶ್ ಕಳೆದ 5 ವರ್ಷಗಳಿಂದ ಪ್ರೀತಿಸುತ್ತಿದ್ದ. ವಿವಾಹವಾಗುವುದಾಗಿ ನಂಬಿಸಿದ್ದ ಲೋಕೇಶ್ ಶೋಭಾ ಜೊತೆ ದೈಹಿಕ ಸಂಪರ್ಕವನ್ನು ಬೆಳೆಸಿದ್ದ ಎನ್ನಲಾಗಿದೆ. ಈ ಮಧ್ಯೆ ಸುರೇಶ್ ಎಂಬಾತ ಆಕೆಯ ಜೊತೆ ಮಾತನಾಡಿ ಮಧ್ಯ ಪ್ರವೇಶಿಸಿದ್ದಕ್ಕೆ ಲೋಕೇಶ್, ಯುವತಿಯಿಂದ ದೂರವಾಗಿದ್ದಾನೆ ಎಂದು ತಿಳಿದು ಬಂದಿದೆ.
ಈ ನಡುವೆ ಲೋಕೇಶ್ ಮೋಸ ಮಾಡಿದ್ದಾನೆಂದು, ನ್ಯಾಯ ಒದಗಿಸುವಂತೆ ಮೃತ ಯುವತಿಯ ಮನೆಯವರು ಹುಲ್ಲಹಳ್ಳಿ ಪೊಲೀಸ್ ಠಾಣೆಗೆ ದೂರು ಕೊಟ್ಟಿದ್ದಾರೆ. ಆದರೆ ಠಾಣೆಯ ಎಎಸ್ಐ ಶಿವರಾಜು ಕರ್ತವ್ಯ ಲೋಪ ಎಸಗಿದ್ದರು ಎಂಬ ಗಂಭೀರ ಆರೋಪ ಕೇಳಿಬಂದಿತ್ತು. ಅಲ್ಲದೆ ಪೊಲೀಸ್ ದೂರು ದಾಖಲಾದ ಬಳಿಕ ಆರೋಪಿ ಲೋಕೇಶ್ ಯುವತಿ ಮನೆಗೆ ಬಂದು ಗಲಾಟೆ ಮಾಡಿದ್ದಾನೆ. ಇದರಿಂದ ನೊಂದ ಯುವತಿ ಆತ್ಮಹತ್ಯೆಗೆ ಶರಣಾಗಿದ್ದಾಳೆ.
ಇದೀಗ ಯುವತಿ ಬರೆದಿರುವ ಡೆತ್ನೋಟ್ ದೊರಕಿದ್ದು, ಲೋಕೇಶ್ ವಂಚನೆ ಹಾಗೂ ಸುರೇಶ್ ಹೆದರಿಸಿದ ವಿಚಾರವನ್ನು ಡೆತ್ನೋಟ್ನಲ್ಲಿ ಉಲ್ಲೇಖಿಸಿದ್ದಾಳೆ. ತನ್ನ ಸಾವಿಗೆ ಲೋಕೇಶ್ ಕಾರಣವೆಂದು ಡೆತ್ನೋಟ್ನಲ್ಲಿ ಬರೆದಿರುವ ಯುವತಿ, ಲೋಕೇಶ್ಗೆ ಜೈಲು ಶಿಕ್ಷೆ ನೀಡಬೇಕು, ಆತನನ್ನು ಗಲ್ಲಿಗೆ ಏರಿಸಬೇಕೆಂದು ಮನವಿ ಮಾಡಿದ್ದಾಳೆ.