JDS merger issue with BJP | ಜೆಡಿಎಸ್‌ನಲ್ಲಿ ಒಡಕಿನ ಧ್ವನಿ: ಪಕ್ಷ ನಿಲುವು ಸ್ಪಷ್ಟವಾಗಿರಲಿ- ಕುಮಾರಸ್ವಾಮಿಗೆ ವೈ.ಎಸ್.ವಿ. ದತ್ತ ತಾಕೀತು






ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಅಸ್ಪಷ್ಟ ನಿಲುವು ಮತ್ತು ಚಂಚಲ ಮಾತುಗಳ ಬಗ್ಗೆ ಪಕ್ಷದಲ್ಲಿ ಗೊಂದಲ ಉಂಟಾಗಿದೆ. ಬಿಜೆಪಿ ಜೊತೆ ವಿಲೀನ ಕುರಿತಂತೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಮಾತುಗಳು ಕಾರ್ಯಕರ್ತರಲ್ಲಿ ಗೊಂದಲ ಹಾಗೂ ಆಕ್ರೋಶ ಮೂಡಿಸಿದೆ.



ಈ ಬಗ್ಗೆ ಮಾಧ್ಯಮದ ಜೊತೆ ಮಾತನಾಡಿದ ಪಕ್ಷದ ವಕ್ತಾರ ಹಾಗೂ ಮಾಜಿ ಶಾಸಕ ವೈ.ಎಸ್.ವಿ. ದತ್ತ, ಕುಮಾರಸ್ವಾಮಿ ಕುರಿತಂತೆ ತಮ್ಮ ಅಸಮಾಧಾನವನ್ನು ಬಹಿರಂಗ ಪಡಿಸಿದರು.




ಬಿಜೆಪಿ ಜೊತೆ ಪಕ್ಷವನ್ನು ವಿಲೀನಗೊಳಿಸುವ ಪ್ರಸ್ತಾಪಕ್ಕೆ ನಮ್ಮ ಪ್ರಬಲ ವಿರೋಧವಿದೆ. ವಿಲೀನ ಇಲ್ಲ ಎಂದು ಕುಮಾರಸ್ವಾಮಿಯವರು ಹೇಳಿದ್ದಾರೆ. ಮೂಲತಃ ಜೆಡಿಎಸ್ ಜಾತ್ಯತೀತ ಪಕ್ಷ. ಸಾಮಾಜಿಕ ನ್ಯಾಯ, ಮೂಲಭೂತ ತತ್ವಗಳಿಗೆ ಅದು ಯಾವತ್ತೂ ಬದ್ಧವಾಗಿದೆ. ಗ್ರಾಮಾಂತರ ಪ್ರದೇಶದಲ್ಲಿ ಈಗಲೂ ಅದು ರೈತರ ಪಕ್ಷ ಎಂದೇ ಗುರುತಿಸಿಕೊಂಡಿದೆ ಎಂದು ಅವರು ಹೇಳಿದ್ದಾರೆ.



ಪಕ್ಷ ಸೈದ್ಧಾಂತಿಕವಾಗಿ ಗಟ್ಟಿತನದಿಂದ ಕೂಡಿರಬೇಕು. ಸಂಘಟನೆ ಮತ್ತಷ್ಟು ಗಟ್ಟಿಗೊಳ್ಳಬೇಕು. ಇಲ್ಲದಿದ್ದರೆ ಜನ ಪಕ್ಷವನ್ನು ನಂಬುದಿಲ್ಲ ಎಂದು ದತ್ತ ಅಭಿಪ್ರಾಯಪಟ್ಟರು.



ಕುಮಾರಸ್ವಾಮಿ ಅವರ ಹೇಳಿಕೆಗಳು ಕಾರ್ಯಕರ್ತರಲ್ಲಿ ಗೊಂದಲ ಮೂಡಿಸಿದೆ. ಚುನಾವಣೆ ಮುಗಿದ ಬಳಿಕ ಪರಮೋಚ್ಚ ನಾಯಕ ಎಚ್. ಡಿ. ದೇವೇಗೌಡರನ್ನು ಭೇಟಿ ಮಾಡಿ ಈ ಗೊಂದಲವನ್ನು ಬಗೆಹರಿಸಿಕೊಳ್ಳುತ್ತೇನೆ. ಅವರ ಮೌನವೂ ಗೊಂದಲಕ್ಕೆ ಕಾರಣ ಎಂದು ಹೇಳಿದರು.



ಹೊರಟ್ಟಿ ಬಳಿಕ ದತ್ತ ಕೂಡ ಕುಮಾರಸ್ವಾಮಿ ಮಾತಿಗೆ ಅಪಸ್ವರ ಹಾಡಿರುವುದು ಜೆಡಿಎಸ್‌ನಲ್ಲಿ ಎಲ್ಲವೂ ಸರಿಯಾಗಿಲ್ಲ ಎಂಬುದನ್ನು ಮತ್ತಷ್ಟು ಶ್ರುತಪಡಿಸಿದೆ.

BREAKING NEWS
Loading latest news...
Join our WhatsApp Channel Powered By : Online Pudu