ಚಳಿಗಾಲದಲ್ಲಿ ತಣ್ಣೀರು ಸ್ನಾನ ಮಾಡುವುದು ಎಷ್ಟು ಪ್ರಯೋಜನಕಾರಿ ಗೊತ್ತಾ?




ದೈಹಿಕವಾಗಿ ಶುಚಿಯಾಗಿಡಲು ಪ್ರತಿದಿನ ಸ್ನಾನ ಮಾಡುವುದು ಅಗತ್ಯ. ಸ್ನಾನದಿಂದ ದೇಹಕ್ಕೆ ಮೆತ್ತಿಕೊಂಡಿರುವ ಮಣ್ಣು, ಧೂಳು, ಬ್ಯಾಕ್ಟೀರಿಯಾ, ವೈರಸ್‌ಗಳು ನಿವಾರಣೆಯಾಗಿ ದೇಹ ಶುಚಿಯಾಗುತ್ತದೆ. ತಜ್ಞರ ಪ್ರಕಾರ, ದೈನಂದಿನ ಸ್ನಾನವು ನಮ್ಮನ್ನು ಅನೇಕ ರೋಗಗಳಿಂದ ದೂರವಿರಿಸಲು ಸಹಕರಿಸುತ್ತದೆ. ಕೆಲವರು ಕಾಲಕ್ಕೆ ತಕ್ಕಂತೆ, ಆರೋಗ್ಯದ ದೃಷ್ಟಿಯಿಂದ ಬಿಸಿ ನೀರು, ತಣ್ಣೀರು ಸ್ನಾನ ಮಾಡುತ್ತಾರೆ. 
 
ಕೆಲವರು ಮಳೆಯಿರಲಿ, ಬಿಸಿಲಿರಲಿ, ಬಿಸಿನೀರಿನಿಂದ ಸ್ನಾನ ಮಾಡಿದರೆ ಮತ್ತೆ ಕೆಲವರು ತಣ್ಣೀರಿನಿಂದ ಸ್ನಾನ ಮಾಡ್ತಾರೆ. ಆದರೆ ಚಳಿಗಾಲದಲ್ಲೂ ತಣ್ಣೀರಿನಲ್ಲಿ ಸ್ನಾನ ಮಾಡುವವರೂ ಇದ್ದಾರೆ. ಇದು ಸಾಹಸವೆಂದೇ ಹೇಳ್ಬೇಕು. ಚಳಿಗಾಲದಲ್ಲಿ ತಣ್ಣೀರಿನ ಸ್ನಾನವಂದ್ರೆ ಗಡಗಡ ನಡುಗುವವರಿದ್ದಾರೆ. ಆದರೆ ಪ್ರಾಚೀನ ಗ್ರೀಕರು, ರಷ್ಯನ್ನರಿಂದ ಹಿಡಿದು ಇಂದಿನ ಕ್ರೀಡಾಪಟುಗಳು, ಸೆಲೆಬ್ರಿಟಿಗಳು ಚಳಿಗಾಲದಲ್ಲೂ ತಣ್ಣೀರು ಸ್ನಾನವನ್ನೇ ಮಾಡ್ತಾರೆ. ಚಳಿಗಾಲದಲ್ಲಿ ತಣ್ಣೀರಿನ ಸ್ನಾನ ಮಾಡಿದ್ರೆ ಏನಾಗುತ್ತೆ ಅಂತ ಈಗ ತಿಳಿದುಕೊಳ್ಳೋಣ ಬನ್ನಿ.

ಚಳಿಗಾಲದಲ್ಲಿ ತಣ್ಣೀರು ಸ್ನಾನ ಮಾಡಿದ್ರೆ ನಮ್ಮ ದೇಹದಲ್ಲಿ ರಕ್ತ ಪರಿಚಲನೆ ಹೆಚ್ಚಾಗುತ್ತದೆ. ಇದರಿಂದ ದೇಹದ ಎಲ್ಲಾ ಅಂಗಗಳಿಗೆ ರಕ್ತದ ಹರಿವು ಹೆಚ್ಚಾಗಿ ಅವು ಚೆನ್ನಾಗಿ ಕೆಲಸ ಮಾಡುತ್ತವೆ. 
 

ಚುರುಕುತನ: ಪ್ರತಿದಿನ ಬೆಳಗ್ಗಿನ ಹೊತ್ತು ತಣ್ಣೀರಿನಿಂದ ಸ್ನಾನ ಮಾಡುವುದರಿಂದ ನಮ್ಮ ಚರ್ಮಕ್ಕೆ ವಿಶ್ರಾಂತಿ ಸಿಗುತ್ತದೆ. ಅಲ್ಲದೆ ಉಸಿರಾಟದ ವೇಗವೂ ಹೆಚ್ಚುತ್ತದೆ. ನಿಮ್ಮ ದೇಹವು ಆಮ್ಲಜನಕವನ್ನು ಹೆಚ್ಚು ತೆಗೆದುಕೊಳ್ಳಲು ಪ್ರಾರಂಭಿಸುತ್ತದೆ. ಇದರಿಂದ ನಾವು ಚುರುಕಾಗಿರುತ್ತೇವೆ. 

ರೋಗನಿರೋಧಕ ಶಕ್ತಿ : ಚಳಿಗಾಲದಲ್ಲಿ ತಣ್ಣೀರಿನಿಂದ ಸ್ನಾನ ಮಾಡಿದ್ದಲ್ಲಿ ದೇಹದಲ್ಲಿ ರಕ್ತ ಪರಿಚಲನೆ ಸುಧಾರಿಸುತ್ತದೆ. ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಇದು ಚಳಿಗಾಲದಲ್ಲಿ ಕೆಮ್ಮು, ನೆಗಡಿ, ಜ್ವರ ಮುಂತಾದ ಅನಾರೋಗ್ಯ ಸಮಸ್ಯೆಗಳ ವಿರುದ್ಧ ಹೋರಾಡುವ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. 

ಚರ್ಮ ಮತ್ತು ಕೂದಲಿನ ಆರೋಗ್ಯ

ಬಿಸಿನೀರಿಗಿಂತ ತಣ್ಣೀರಿನಿಂದ ಸ್ನಾನ ಮಾಡಿದರೆ ನಿಮ್ಮ ಕೂದಲಿನಿಂದ ಹೆಚ್ಚುವರಿ ಎಣ್ಣೆ, ಧೂಳು, ಮಣ್ಣು ನಿವಾರಣೆಯಾಗುತ್ತದೆ ಎಂದು ತಜ್ಞರು ಹೇಳುತ್ತಾರೆ. ಅಂದರೆ ತಣ್ಣೀರು ಚಳಿಗಾಲದಲ್ಲಿ ನಮ್ಮ ಚರ್ಮ ಒಣಗದಂತೆ ತಡೆಯಲು ಸಹಕರಿಸುತ್ತದೆ. ಇದು ಕೂದಲು ಮತ್ತು ಚರ್ಮವನ್ನು ಆರೋಗ್ಯವಾಗಿಡಲು ಸಹಾಯ ಮಾಡುತ್ತದೆ. 

ಸ್ನಾಯುನೋವಿನಿಂದ ಪರಿಹಾರ

ಸ್ನಾಯುನೋವು ಇರುವವರು ಚಳಿಗಾಲದಲ್ಲಿ ತಣ್ಣೀರಿನ ಸ್ನಾನ ಮಾಡಿದರೆ ಒಳ್ಳೆಯದು. ಏಕೆಂದರೆ ತಣ್ಣೀರು ಸ್ನಾಯು ನೋವಿನಿಂದ ಪರಿಹಾರ ನೀಡಲು ಸಹಾಯ ಮಾಡುತ್ತದೆ. ಆರೋಗ್ಯ ತಜ್ಞರ ಪ್ರಕಾರ, ತಣ್ಣೀರಿನಿಂದ ಸ್ನಾನ ಮಾಡುವುದರಿಂದ ನಿಮ್ಮ ಸ್ನಾಯುಗಳು ಸಡಿಲಗೊಂಡು ನೋವು ಕಡಿಮೆಯಾಗುತ್ತದೆ. 

ಮಾನಸಿಕ ಸ್ಥಿತಿ ಸುಧಾರಿಸುತ್ತದೆ

ತಣ್ಣೀರು ನಮ್ಮ ಮಾನಸಿಕ ಸ್ಥಿತಿಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ತಣ್ಣೀರು ನಮ್ಮ ದೇಹದಲ್ಲಿ ಡೋಪಮೈನ್, ಸಿರೊಟೋನಿನ್ ಮಟ್ಟವನ್ನು ಸುಧಾರಿಸುತ್ತದೆ. ಇದರಿಂದ ಒತ್ತಡ, ಆತಂಕ ಮುಂತಾದ ಮಾನಸಿಕ ಸಮಸ್ಯೆಗಳು ಕಡಿಮೆಯಾಗುತ್ತವೆ. ಇದು ನಿಮಗೆ ಉಲ್ಲಾಸದ ಅನುಭವ ನೀಡುತ್ತದೆ. 

ಇವುಗಳನ್ನು ನೆನಪಿನಲ್ಲಿಡಿ

ತಣ್ಣೀರಿನ ಸ್ನಾನವು ನಿಮ್ಮ ದೇಹದಲ್ಲಿ ರಕ್ತ ಪರಿಚಲನೆಯನ್ನು ಹೆಚ್ಚಿಸುತ್ತದೆ. ಆದ್ದರಿಂದ ತಣ್ಣೀರನ್ನು ದೇಹದ ಮೇಲೆ ಸುರಿಯುವುದರಿಂದ ಹೃದಯಾಘಾತದ ಅಪಾಯವಿರುತ್ತದೆ. ಆದ್ದರಿಂದ ತಣ್ಣೀರನ್ನು ನೇರವಾಗಿ ತಲೆಯ ಮೇಲೆ ಸುರಿಯದೆ, ಮೊದಲು ಪಾದಗಳಿಂದ ದೇಹವನ್ನು ತಣ್ಣೀರಿನಿಂದ ತೊಳೆಯಲು ಪ್ರಾರಂಭಿಸಬೇಕು. ಕೆಮ್ಮು, ಜ್ವರ, ನೆಗಡಿ, ಹೃದ್ರೋಗ, ಹೃದಯ ಸಮಸ್ಯೆ ಇರುವವರು ಯಾವುದೇ ಕಾರಣಕ್ಕೂ ತಣ್ಣೀರಿನಿಂದ ಸ್ನಾನ ಮಾಡಬಾರದು. 

BREAKING NEWS
Loading latest news...
Join our WhatsApp Channel Powered By : Online Pudu