"ಅಶಕ್ತ ಯಕ್ಷ ಕಲಾವಿದರಿಗೆ ಪಟ್ಲ ಫೌಂಡೇಶನ್ ಸಾರ್ಥಕ ಸೇವೆ"-ಕನ್ಯಾನ ಸದಾಶಿವ ಶೆಟ್ಟಿ


ಮಂಗಳೂರು: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್(ರಿ.) ಇದರ ವತಿಯಿಂದ ಯಕ್ಷಧ್ರುವ ಪಟ್ಲ ಸಂಭ್ರಮದ ಉದ್ಘಾಟನಾ ಸಮಾರಂಭ ಆದಿತ್ಯವಾರ ಅಡ್ಯಾರ್ ಗಾರ್ಡನ್ ನಲ್ಲಿ ಜರುಗಿತು. 

ಉದ್ಘಾಟನೆ ನೆರವೇರಿಸಿ ಮಾತಾಡಿದ ಹೇರಂಭ ಕೆಮಿಕಲ್ಸ್ ಇಂಡಸ್ಟ್ರಿಸ್ ಮುಂಬೈ ಇದರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೂಳೂರು ಕನ್ಯಾನ ಸದಾಶಿವ ಶೆಟ್ಟಿ ಅವರು, "ಯಕ್ಷಗಾನ ನಮ್ಮ ತುಳುನಾಡಿನ ಅನನ್ಯ ಪರಂಪರೆ. ಹಿಂದೆ ಅದೆಷ್ಟೋ ಹೆಸರು ಪಡೆದ ಯಕ್ಷಗಾನ ಕಲಾವಿದರಿದ್ದರು. ಆಗ ಕಲಾವಿದರಿಗೆ ಆರ್ಥಿಕ ಸಂಕಷ್ಟಗಳಿತ್ತು. ಇದನ್ನು ಅರಿತುಕೊಂಡು ಯಕ್ಷಗಾನ ಕಲಾವಿದರಿಗೆ ನೆರವಾಗುವ ದೃಷ್ಟಿಯಲ್ಲಿ ದಾನಿಗಳನ್ನು ಒಗ್ಗೂಡಿಸಿಕೊಂಡು ಪಟ್ಲ ಸತೀಶ್ ಶೆಟ್ಟಿಯವರು ಯಕ್ಷಧ್ರುವ ಪಟ್ಲ ಫೌಂಡೇಶನ್ ಅನ್ನು ಸ್ಥಾಪಿಸಿದರು.



 ಅವರನ್ನು ಬೆಂಬಲಿಸಲು ನಾವೆಲ್ಲರೂ ಜೊತೆಗೂಡಿದ್ದೇವೆ. ಪ್ರತೀ ವರ್ಷ ನಾವು ಯಕ್ಷಗಾನ ಕಲಾವಿದರಿಗಾಗಿ ಹೊಸ ಹೊಸ ಯೋಜನೆ ಮತ್ತು ಯೋಚನೆಗಳನ್ನು ಜಾರಿಗೆ ತರುತ್ತಿದ್ದೇವೆ. ಮುಂದೆಯೂ ಇನ್ನಷ್ಟು ದಾನಿಗಳ ನೆರವು ಸಂಘಟನೆಗೆ ಬೇಕಿದೆ. ಎಲ್ಲರೂ ಜೊತೆಗೂಡಿ ನಡೆದಲ್ಲಿ ಸಂಘಟನೆಯ ಶ್ರಮ ಸಾರ್ಥಕವಾಗಲಿದೆ" ಎಂದರು. 


ಆಶೀರ್ವಚನಗೈದ ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಅವರು, "ಒಂಬತ್ತನೇ ವರ್ಷದ ಸಂಭ್ರಮದಲ್ಲಿರುವ ಪಟ್ಲ ಫೌಂಡೇಶನ್ ಟ್ರಸ್ಟ್ ಆಶಕ್ತ ಕಲಾವಿದರಿಗೆ ನೆರವಾಗುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ. 40 ಬೇರೆ ಬೇರೆ ಊರುಗಳಲ್ಲಿ ಸಂಘಟನೆ ವಿಸ್ತರಿಸಲ್ಪಟ್ಟಿದ್ದು ಪಟ್ಲ ಸತೀಶ್ ಶೆಟ್ಟಿ ಅವರ ನೇತೃತ್ವದಲ್ಲಿ ಸಾರ್ಥಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬಂದಿದೆ. ಇದು ಯಕ್ಷ ಕಲಾಭಿಮಾನಿಗಳಿಗೆ ಸಂತಸದ ವಿಷಯವಾಗಿದೆ" ಎಂದರು. 

*ಪಟ್ಲ ಟ್ರಸ್ಟ್ ದೇವಸ್ಥಾನವಿದ್ದಂತೆ: ಐಕಳ*
ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಅವರು ಮಾತನಾಡಿ, "ಪಟ್ಲ ಫೌಂಡೇಶನ್ ಟ್ರಸ್ಟ್ ದೇವಸ್ಥಾನವಿದ್ದಂತೆ, ದಾನಿಗಳು ಇಲ್ಲಿ ದೇವರಿದ್ದಂತೆ. ಕಷ್ಟದಲ್ಲಿ ಬರುವ ಕಲಾವಿದರಿಗೆ ಪಟ್ಲ ಸತೀಶ್ ಶೆಟ್ಟಿ ಅವರು ಬೆನ್ನುತಟ್ಟಿ ಪ್ರೋತ್ಸಾಹ ನೀಡುತ್ತಿದ್ದಾರೆ. ಜನರಿಗೆ ನೆರವಾಗುವಾಗ ಆರೋಪ ಮಾಡುವವರು ಇದ್ದೇ ಇರುತ್ತಾರೆ. ನಾವು ಯಾವುದೇ ಕಾರಣಕ್ಕೂ ನಿಲ್ಲಬಾರದು. ಯಾರೇನೇ ಹೇಳಿದರೂ ನಮ್ಮ ಗುರಿ ಸ್ಪಷ್ಟವಾಗಿದ್ದು ಮುಂದುವರಿಯಬೇಕು" ಎಂದರು. 

ಶ್ರೀ ಕ್ಷೇತ್ರ ಕಟೀಲಿನ ಅನುವಂಶಿಕ ಪ್ರಧಾನ ಅರ್ಚಕ ವೆಂಕಟ್ರಮಣ ಅಸ್ರಣ್ಣರು ಮಾತನಾಡಿ, "ಪಟ್ಲರು ಪರೋಪಕಾರಕ್ಕಾಗಿ ಸಂಘಟನೆಯನ್ನು ಸ್ಥಾಪಿಸಿದರು. ಈ ಮೂಲಕ ಬಹಳಷ್ಟು ಕಲಾವಿದರಿಗೆ ನಾನಾ ರೀತಿಯಲ್ಲಿ ನೆರವಾಗಿದ್ದಾರೆ. ಇನ್ನು ಮುಂದೆಯೂ ಇವರ ಸಂಘಟನೆ ರಾಜ್ಯದೆಲ್ಲೆಡೆ ವಿಸ್ತರಣೆಯಾಗಲಿ. ಪಟ್ಲರ ಕೀರ್ತಿ ಎಲ್ಲೆಡೆ ಹರಡಲಿ" ಎಂದು ಶುಭ ಹಾರೈಸಿದರು.

ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳ ಸಾಧಕರಿಗೆ 2024ರ ಯಕ್ಷಧ್ರುವ ಕಲಾ ಗೌರವ ಸಮರ್ಪಿಸಲಾಯಿತು.
ವೈದಿಕ ಕ್ಷೇತ್ರದಲ್ಲಿನ ಸಾಧನೆಗಾಗಿ ಡಾ. ಯಾಜಿ ನಿರಂಜನ್ ಭಟ್, ಮಾಧ್ಯಮ ಕ್ಷೇತ್ರದಲ್ಲಿ ಚಿದಂಬರ ಬೈಕಂಪಾಡಿ, ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿರುವ ಲೆ.ಕ. ವಿನ್ಸೆಂಟ್ ಡಿಸೋಜ, ಕಮಾಂಡರ್ ಶಾಮ್ ರಾಜ್, ಕಲಾ ಸಂಘಟನೆಗಾಗಿ ಯಕ್ಷಗಾನ ಅಭ್ಯಾಸ ತರಬೇತಿ ದುಬೈ, ಶಾಸ್ತ್ರೀಯ ಸಂಗೀತಕ್ಕಾಗಿ ಕುದುಮಾರು ಎಸ್. ವೆಂಕಟರಾವ್, ಸಾಹಿತ್ಯ ಕ್ಷೇತ್ರದ ಸಾಧನೆಗಾಗಿ ಡಾ. ರಮಾನಂದ ಬನಾರಿ, ಹರಿಕಥೆ ಜಗದೀಶ್ ದಾಸ್ ಪೊಳಲಿ, ರಂಗಭೂಮಿ ಸಾಧನೆಗಾಗಿ ಲಕ್ಷ್ಮಣ ಕುಮಾರ್ ಮಲ್ಲೂರು, ಭರತನಾಟ್ಯ ಕಮಲಾಕ್ಷ ಆಚಾರ್ ಬೆಳ್ತಂಗಡಿ, ಕಂಬಳ ಕ್ಷೇತ್ರದಲ್ಲಿ ಅಶೋಕ್ ಶೆಟ್ಟಿ ಬೇಲಾಡಿ, ಯಕ್ಷಗಾನ ಚಿದಂಬರ ಬಾಬು ಪೂಜಾರಿ, ಯಕ್ಷಗಾನ(ಬಡಗು) ನಿರ್ಜೆಡ್ದು ಚಂದ್ರ ಕುಲಾಲ್, ಯಕ್ಷಗುರು ಮಹಾವೀರ ಪಾಂಡಿ, ಹವ್ಯಾಸಿ ಜಗನ್ನಾಥ ಶೆಟ್ಟಿ ಸಚ್ಚರಿಪೇಟೆ, ಮಹಿಳಾ ಪೂರ್ಣಿಮಾ ಯತೀಶ್ ರೈ, ದೈವಾರಾಧನೆ ಕ್ಷೇತ್ರದಲ್ಲಿ ಕೊರಗ ಪಾಣಾರ, ಭಜನೆ ಭೋಜ ಸುವರ್ಣ ಕುಲಶೇಖರ ಅವರನ್ನು ಅತಿಥಿಗಳ ಸಮ್ಮುಖದಲ್ಲಿ ಸನ್ಮಾನಿಸಿ ಗೌರವಿಸಲಾಯಿರು.
ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಸ್ಥಾಪಕ ಪಟ್ಲ ಸತೀಶ್ ಶೆಟ್ಟಿ ಅವರು ಪ್ರಾಸ್ತಾವಿಕ ಮಾತನಾಡಿ ಅತಿಥಿಗಳನ್ನು ಸ್ವಾಗತಿಸಿದರು. 
ಅರೋಗ್ಯ ಶಿಬಿರವನ್ನು ಕಿಟ್ ನೀಡುವ ಮೂಲಕ ಉದ್ಘಾಟಿಸಿದ ಡಾ.ರವೀಶ್ ತುಂಗಾ ಅವರು, "ಪಟ್ಲ ಸಂಭ್ರಮ ತುಳುನಾಡಿನ ಉತ್ಸವವಾಗಿದೆ. ಪಟ್ಲರು ತುಳುನಾಡಿನ ದಾನಿಗಳನ್ನು ಒಟ್ಟುಗೂಡಿಸಿಕೊಂಡು ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದಾರೆ. ಕಲಾವಿದರಿಗೆ ಅರೋಗ್ಯ ಶಿಬಿರದ ಜೊತೆಗೆ ವಿಮೆ ಸೌಲಭ್ಯ ಕಲ್ಪಿಸಿರುವುದು ದೇವರು ಮೆಚ್ಚುವ ಕೆಲಸ" ಎಂದರು.

ರಕ್ತದಾನ ಶಿಬಿರದ ಉದ್ಘಾಟನೆಯನ್ನು ಡಾ. ಶ್ರೀಧರ್ ಶೆಟ್ಟಿ ನೆರವೇರಿಸಿದರು. ಬಳಿಕ ಮಾತಾಡಿದ ಅವರು, "ರಕ್ತದಾನ ಅತ್ಯಂತ ಪ್ರಮುಖವಾದ ದಾನವಾಗಿದೆ. ಒಬ್ಬ ರೋಗಿಯನ್ನು ಉಳಿಸಲು ರಕ್ತದ ದಾನ ಅವಶ್ಯಕತೆಯಿದೆ. ನಾವೆಲ್ಲರೂ ರಕ್ತದಾನ ಮಾಡುವ ಮೂಲಕ ಸಮಾಜಕ್ಕೆ ನಮ್ಮಿಂದಾಗುವ ಸೇವೆ ಸಲ್ಲಿಸಬೇಕು. 18ರಿಂದ 60 ವರ್ಷದೊಳಗಿನ ಯಾರು ಬೇಕಾದರೂ ರಕ್ತವನ್ನು ದಾನ ಮಾಡಬಹುದು. ರಕ್ತದಾನ ಕುರಿತು ಮೂಢನಂಬಿಕೆ ಬೆಳೆಸಿಕೊಳ್ಳಬಾರದು" ಎಂದರು.

ವೇದಿಕೆಯಲ್ಲಿ ಬಡಾಜೆ ರವಿಶಂಕರ್ ಶೆಟ್ಟಿ, ಪಾವಂಜೆ ಕ್ಷೇತ್ರದ ಆಡಳಿತ ಮಂಡಳಿ ಮೊಕ್ತೇಸರ ಶಶೀಂದ್ರ ಕುಮಾರ್, ಡಾ.ಪದ್ಮನಾಭ ಕಾಮತ್, ಬಿಬಿಎಂಪಿ ಜಂಟಿ ಆಯುಕ್ತ ಶಾನಾಡಿ ಅಜಿತ್ ಕುಮಾರ್ ಹೆಗ್ಡೆ, ಉದ್ಯಮಿ ರಘುನಾಥ್ ಸೋಮಯಾಜಿ, ನಿಟ್ಟೆ ಯೂನಿವರ್ಸಿಟಿಯ ಪ್ರೊ. ಡಾ.ಬಿ.ಸತೀಶ್ ಕುಮಾರ್ ಭಂಡಾರಿ, ಹಿರಿಯ ನ್ಯಾಯವಾದಿ ಭೋಜ ನಾರಾಯಣ ಪೂಜಾರಿ, ಡಾ.ರವೀಶ್ ತುಂಗಾ, ಡಾ.ಶ್ರೀಧರ್ ಶೆಟ್ಟಿ, ಭುವನೇಶ್ ಪಚ್ಚಿನಡ್ಕ, ಪಟ್ಲಗುತ್ತು ಮಹಾಬಲ ಶೆಟ್ಟಿ, ಅಶೋಕ್ ಶೆಟ್ಟಿ ಬೆಳ್ಳಾಡಿ, ಜಯರಾಮ್ ಶೇಖ,  ಕರುಣಾಕರ ರೈ ದೇರ್ಲ,  ರಾಧಾಕೃಷ್ಣ ಶೆಟ್ಟಿ ಚೆಲ್ಲಡ್ಕ, ಬಾಲಕೃಷ್ಣ ಹೆಗ್ಡೆ, ಭುಜಬಲಿ ಧರ್ಮಸ್ಥಳ, ಸುರತ್ಕಲ್ ಘಟಕದ ಅಧ್ಯಕ್ಷ ಸುಧಾಕರ್ ಎಸ್. ಪೂಂಜಾ, ಸಂತೋಷ್ ಕುಮಾರ್ ರೈ ಬೋಳಿಯಾರ್, ಪ್ರಕಾಶ್ ರಾವ್, ಕೇಂದ್ರೀಯ ಸಮಿತಿಯ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಭಂಡಾರಿ ಅಡ್ಯಾರ್ ,ಕೋಶಾಧಿಕಾರಿ CA ಸುದೇಶ್ ಕುಮಾರ್ ರೈ, ಸಂಘಟನಾ ಕಾರ್ಯದರ್ಶಿ ಕದ್ರಿ ನವನೀತ ಶೆಟ್ಟಿ, ಪ್ರದೀಪ್ ಆಳ್ವ ಕದ್ರಿ, ಜಗನ್ನಾಥ ಶೆಟ್ಟಿ ಬಾಳ, ಉಪಾಧ್ಯಕ್ಷ ಅಶೋಕ್ ಆರ್ ಶೆಟ್ಟಿ ಪೆರ್ಮುದೆ, ಡಾ ಮನುರಾವ್, ದುರ್ಗಾಪ್ರಸಾದ್ ಪಿವಿ ಪಡುಬಿದ್ರೆ, ಜೊತೆ ಕಾರ್ಯದರ್ಶಿ ರಾಜೀವ ಪೂಜಾರಿ ಕೈಕಂಬ, ರವಿಚಂದ್ರ ಶೆಟ್ಟಿ ಅಶೋಕನಗರ ಉಪಸ್ಥಿತರಿದ್ದರು. ಪಟ್ಲ ಸತೀಶ್ ಶೆಟ್ಟಿ ಸ್ವಾಗತಿಸಿದರು. ರವಿ ಶೆಟ್ಟಿ ವಂದಿಸಿದರು. ಕದ್ರಿ ನವನೀತ ಶೆಟ್ಟಿ, ಪುರುಷೋತ್ತಮ ಭಂಡಾರಿ ಕಾರ್ಯಕ್ರಮ ನಿರ್ವಹಿಸಿದರು.
BREAKING NEWS
Loading latest news...
Join our WhatsApp Channel Powered By : Online Pudu